ಭಾರಿ ಕುತೂಹಲ ಕೆರಳಿಸಿರುವ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆಸಲಾಗಿದೆ. ಕಾಂಗ್ರೆಸ್ 5 ಸ್ಥಾನದಲ್ಲಿ ಹಾಗೂ ಬಿಜೆಪಿ 2 ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಅಡ್ಡ ಮತದಾನದ ಭೀತಿಯಲ್ಲಿ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಇಟ್ಟು ತಾವೇ ಬಸ್ ಮುಖಾಂತರ ವಿಧಾನಸೌಧಕ್ಕೆ ಕರೆತಂದು ಮತ ಚಲಾಯಿಸಿದ್ದರು. ಆದರೂ ಕೂಡ ಮೈತ್ರಿ ಪಕ್ಷಗಳಾದ ಜೆಡಿಎಸ್ನಿಂದ 8 ಶಾಸಕರು ಹಾಗೂ ಬಿಜೆಪಿಯಿಂದ ಇಬ್ಬರು ಶಾಸಕರು ಅಡ್ಡಮತದಾನ ಮಾಡಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ವಿರೋಧ ಪಕ್ಷಗಳಲ್ಲಿ ಅಡ್ಡಮತದಾನ ಮಾಡಿದವರು ಯಾರು ಎಂಬ ಹುಡುಕಾಟ ಶುರುವಾಗಿದೆ.


ಬಿಜೆಪಿಯಲ್ಲಿ ಅಡ್ಡ ಮತದಾನ ಮಾಡಿದ್ಯಾರು?
ಚುನಾವಣೆಯ ಆರಂಭದ ಲೆಕ್ಕಾಚಾರದ ಪ್ರಕಾರ ಬಿಜೆಪಿಯಿಂದ ಈಗಾಗಲೇ ಉಚ್ಚಾಟಿತರಾಗಿರುವ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಕಾಂಗ್ರೆಸ್ಗೆ ಮತ ಹಾಕುವುದು ಮೊದಲೇ ನಿಗದಿಯಾಗಿತ್ತು. ಮತದಾನದ ಬಳಿಕ ಅವರಿಬ್ಬರೂ ತಾವು ಕಾಂಗ್ರೆಸ್ ಗೆ ಮತ ಹಾಕಿದ್ದೇವೆ ಎಂದು ತಿಳಿಸಿದ್ದರು. ಆದರೆ, ಮತ ಎಣಿಕೆಯ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಥೆ ಅಷ್ಟಕ್ಕೇ ಮುಗಿದಿಲ್ಲ. ಇವರಿಬ್ಬರ ಹೊರತಾಗಿಯೂ ಬಿಜೆಪಿಯ ಇನ್ನೂ ಇಬ್ಬರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಪರವಾಗಿ ರಹಸ್ಯವಾಗಿ ವೋಟ್ ಚಲಾಯಿಸಿದ್ದಾರಂತೆ. ಗೌಪ್ಯ ಮತದಾನದ ದುರುಪಯೋಗ ಪಡೆದು ಒಳಗಿನಿಂದಲೇ ಬೆನ್ನಿಗೆ ಚೂರಿ ಹಾಕಿದ ಆ ಇಬ್ಬರು ಶಾಸಕರು ಯಾರು ಎಂಬ ತಲೆನೋವು ಶುರುವಾಗಿದೆ. ಹೀಗಾಗಿ ಅಡ್ಡಮತದಾನ ಮಾಡಿದವರು ಯಾರು ಎಂಬ ಹುಡುಕಾಟ ಶುರುವಾಗಿದೆ.
ಜೆಡಿಎಸ್ ಪಕ್ಷದಿಂದ 8 ಮಂದಿಯಿಂದ ಅಡ್ಡ ಮತದಾನ:
ದೊಡ್ಡ ಆಘಾತ ಕಾದಿದ್ದು ಜೆಡಿಎಸ್ ಪಕ್ಷಕ್ಕೆ. ಬಿಜೆಪಿಯು ತನ್ನ ಇಬ್ಬರು ಅಭ್ಯರ್ಥಿಗಳು ಆರಾಮವಾಗಿ ಗೆಲ್ಲಲಿ ಎಂದು ತನಗಿದ್ದ ಹೆಚ್ಚುವರಿ ಮತಗಳ ಪೈಕಿ ನಾಲ್ಕು ಮತಗಳನ್ನು ಜೆಡಿಎಸ್ಗೆ ವರ್ಗಾಯಿಸಿತ್ತು. ಚಂದ್ರು ಲಮಾಣಿ, ವಿಠಲ್ ಹಲಗೆಕರ್, ಸಿದ್ದು ಪಾಟೀಲ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ಮತಗಳು ಜೆಡಿಎಸ್ ಅಭ್ಯರ್ಥಿಗೆ ಬೀಳಬೇಕಿತ್ತು. ಒಂದು ವೇಳೆ ಬಿಜೆಪಿಯಿಂದ ಈ ನಾಲ್ಕು ಮತಗಳು ಸರಿಯಾಗಿ ಬಿದ್ದಿದ್ದರೆ, ಜೆಡಿಎಸ್ನ ಸ್ವಂತ 18 ಮತಗಳೂ ಸೇರಿ ಒಟ್ಟು 22 ಮತಗಳು ಗೋವಿಂದರಾಜು ಅವರಿಗೆ ಸಿಗಬೇಕಿತ್ತು. ಆದರೆ, ಅಂತಿಮವಾಗಿ ಗೋವಿಂದರಾಜು ಪಡೆದಿದ್ದು ಕೇವಲ 14 ಮತಗಳನ್ನು ಮಾತ್ರ.
ಅಂದರೆ, ಬಿಜೆಪಿಯಿಂದ ನಾಲ್ಕು ಮತಗಳು ಬಂದಿದ್ದರೂ ಜೆಡಿಎಸ್ನ ಸ್ವಂತ ಶಾಸಕರಲ್ಲಿ ಕೇವಲ ಆರು ಜನ ಮಾತ್ರ ತಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದರರ್ಥ ಜೆಡಿಎಸ್ನ ಒಟ್ಟು 18 ಶಾಸಕರಲ್ಲಿ ಎಂಟು ಮಂದಿ ಶಾಸಕರು ಪಕ್ಷಕ್ಕೆ ದ್ರೋಹ ಬಗೆದು ಅಡ್ಡಮತದಾನ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ. ಜೆಡಿಎಸ್ ಪಾಳಯದಿಂದ ಜಿ.ಟಿ. ದೇವೇಗೌಡ, ಗುರುಮಠಕಲ್ ಕ್ಷೇತ್ರದ ಶರಣು ಕಂದಕೂರು ಮತ್ತು ದೇವದುರ್ಗದ ಶಾಸಕಿ ಕರೆಮ್ಮ ಜಿ ನಾಯಕ್ ಅವರು ಅಡ್ಡಮತದಾನ ಮಾಡಲಿದ್ದಾರೆ ಎಂಬ ವದಂತಿ ಇತ್ತಾದರೂ, ಈಗ ಇವರ ಜೊತೆಗೆ ಇನ್ನುಳಿದ ಐದು ಮಂದಿ ಜೆಡಿಎಸ್ ಶಾಸಕರು ಯಾರು ಎಂಬ ಕುತೂಹಲ ತೀವ್ರಗೊಂಡಿದೆ.

