Home » ಉಪ್ಪಿನಂಗಡಿ: ಸ್ನೇಹ ಬೆಳೆಸಿ ಬೈಕ್‌ ಪಡೆದು ಹೋದವ ಪರಾರಿ; ಫೋನ್ ಮಾಡಿ ಹಣ ತಗೊಂಡು ಬಾ ಅಂದ!

ಉಪ್ಪಿನಂಗಡಿ: ಸ್ನೇಹ ಬೆಳೆಸಿ ಬೈಕ್‌ ಪಡೆದು ಹೋದವ ಪರಾರಿ; ಫೋನ್ ಮಾಡಿ ಹಣ ತಗೊಂಡು ಬಾ ಅಂದ!

0 comments
New rules for bikers

ಉಪ್ಪಿನಂಗಡಿಯಲ್ಲಿ ಪರಿಚಯದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಬೈಕ್ ಪಡೆದು ಪರಾರಿಯಾದ ವ್ಯಕ್ತಿಯೊಬ್ಬ ಬಳಿಕ ವಾಹನವನ್ನು ಹಿಂತಿರುಗಿಸಬೇಕಾದರೆ ₹20 ಸಾವಿರ ನೀಡಬೇಕೆಂದು ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿಯ ಶ್ರೀ ದೇವಿ ಸ್ಟಿಕ್ಕರ್ ಕಟಿಂಗ್ಸ್ ಸೆಂಟರ್‌ನ ಮಾಲೀಕ ಶೀನಪ್ಪ ವಂಚನೆಗೆ ಒಳಗಾದವರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಸಮೀಪದ ಲಾಡ್ಜ್‌ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ತನ್ನನ್ನು ಶ್ಯಾಮ್ ಜಿ. ಕೃಷ್ಣನ್ ಎಂದು ಪರಿಚಯಿಸಿಕೊಂಡು ಶೀನಪ್ಪ ಅವರೊಂದಿಗೆ ಆತ್ಮೀಯತೆ ಬೆಳೆಸಿದ್ದಾನೆ. ಲಾಡ್ಜ್‌ನಲ್ಲಿ ನೀಡಲಾದ ಆಧಾರ್ ಕಾರ್ಡ್ ದಾಖಲೆಯ ಪ್ರಕಾರ, ಆತ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದ ಅಚಂಗಿ ಮನೆ ನಿವಾಸಿ ಗೋಪಾಲಕೃಷ್ಣನ್ ಅವರ ಪುತ್ರನಾಗಿದ್ದಾನೆ ಎನ್ನಲಾಗಿದೆ.

ಸೋಮವಾರ ಶೀನಪ್ಪ ಅವರ ಅಂಗಡಿಗೆ ಬಂದಿದ್ದ ಆರೋಪಿ, ಮಂಗಳವಾರ ಉಪ್ಪಿನಂಗಡಿ ದೇವಸ್ಥಾನದಲ್ಲಿ ಪೂಜೆ ಇರುವುದಾಗಿ ತಿಳಿಸಿದ್ದ. ಬಳಿಕ ಮಂಗಳವಾರ ಬೆಳಗ್ಗೆ ಸುಮಾರು 9 ಗಂಟೆಗೆ ಅಂಗಡಿಗೆ ಬಂದು, ದೇವಸ್ಥಾನದಲ್ಲಿರುವ ತನ್ನ ಮನೆಯವರಿಗೆ ಬಟ್ಟೆ ನೀಡಿಬಂದು ಎರಡು ನಿಮಿಷಗಳಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿ ಬೈಕ್ ಕೇಳಿದ್ದಾನೆ.

banner

ಮೊದಲಿಗೆ ಬೈಕ್ ನೀಡಲು ಹಿಂಜರಿದ ಶೀನಪ್ಪ ಅವರನ್ನು ಮಾತಿನ ಚಾತುರ್ಯದಿಂದ ಒಪ್ಪಿಸಿಕೊಂಡ ಆತ, ಬೈಕ್ ಪಡೆದುಕೊಂಡು ತೆರಳಿದ್ದಾನೆ. ದಾರಿಯಲ್ಲಿ ಪೊಲೀಸರು ತಪಾಸಣೆ ನಡೆಸಬಹುದು ಎಂದು ಭಾವಿಸಿ ಶೀನಪ್ಪ ತಮ್ಮ ಹೆಲ್ಕೆಟ್‌ನ್ನೂ ನೀಡಿದ್ದರು.

ಆದರೆ, ಎರಡು ನಿಮಿಷಗಳಲ್ಲಿ ಬರುತ್ತೇನೆಂದು ಹೇಳಿ ತೆರಳಿದ ವ್ಯಕ್ತಿ ಬಹಳ ಹೊತ್ತಾದರೂ ವಾಪಸ್ ಬರಲಿಲ್ಲ. ಅನುಮಾನಗೊಂಡ ಶೀನಪ್ಪ ಅವರು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆರಂಭದಲ್ಲಿ ಬೈಕ್‌ ದೇವಸ್ಥಾನದ ಬಳಿ ಇರುವುದಾಗಿ ಹೇಳಿದ ಆತ, ನಂತರ ತಾನು ಸಕಲೇಶಪುರದಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೆ, ಬೈಕ್ ಬೇಕಿದ್ದರೆ ₹20 ಸಾವಿರ ಹಣದೊಂದಿಗೆ ಸಕಲೇಶಪುರಕ್ಕೆ ಬಂದು ಪಡೆದುಕೊಳ್ಳುವಂತೆ ತಾಕೀತು ಮಾಡಿದ್ದಾನೆ ಎನ್ನಲಾಗಿದೆ.

ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಶೀನಪ್ಪ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

You may also like