ಬೆಳ್ತಂಗಡಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಯುಜಿ ಸಿಇಟಿ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಅಭೂತಪೂರ್ವ ಸಾಧನೆ ತೋರಿದ್ದಾರೆ. ಚಿನ್ಮಯ್ ಜಿ.ಕೆ. ಒಟ್ಟು (98.61111111) ನೊಂದಿಗೆ ರಾಜ್ಯಕ್ಕೆ 7ನೇ Rank ಪಡೆದು ಬೆಳ್ತಂಗಡಿ ತಾಲೂಕನ್ನು ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ್ದಾರೆ.


ಈ ಬಾರಿ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಯುಜಿ ಸಿಇಟಿ ಪರೀಕ್ಷೆ ಬರೆದಿದ್ದು, ಅದರಲ್ಲಿ ವಿದ್ವತ್ ಕಾಲೇಜಿನ ಚಿನ್ಮಯ್ ಜಿ.ಕೆ. ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯದ ಟಾಪ್ 10 Rank ಒಳಗೆ 7ನೇ Rank ಪಡೆದ ಬೆಳ್ತಂಗಡಿ ತಾಲೂಕಿನ ಏಕೈಕ ವಿದ್ಯಾರ್ಥಿ ಎಂಬುದು ಗಮನಾರ್ಹ ಸಾಧನೆಯಾಗಿದೆ. ಚಿನ್ಮಯ್ ಜಿ.ಕೆ. ಪಿಯು ಬೋರ್ಡ್ ಪರೀಕ್ಷೆಯಲ್ಲಿ 598 ಅಂಕ ಪಡೆದು ರಾಜ್ಯಕ್ಕೆ 2ನೇ ಸ್ಥಾನಿಯಾಗಿದ್ದು, ಜೆಇಇ ಮೇನ್ಸ್-2026 ರಲ್ಲಿ 99.646 ಪರ್ಸೆಂಟೈಲ್ ಪಡೆಯುವ ಮೂಲಕ ಈ ಸಾಧನೆಯೊಂದಿಗೆ ಗುರುವಾಯನಕೆರೆ ವಿದ್ವತ್ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಮುಂದೆ ಇವರು ಎನ್.ಐ.ಟಿ.ಕೆ. ಸುರತ್ಕಲ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮುಂದುವರೆಸುವ ಇಚ್ಚೆ ಹೊಂದಿದ್ದಾರೆ.
*ಸಂಪತ್ ಕುಮಾರ್ ಪುಟ್ಟಿ:
ವಿದ್ವತ್ ಕಾಲೇಜಿನ ಸಂಪತ್ ಕುಮಾರ್ ಪುಟ್ಟಿ ಯುಜಿ ಸಿಇಟಿ ಪರೀಕ್ಷೆಯಲ್ಲಿ ನ್ಯಾಚುರೋಪತಿಕ್ ಮತ್ತು ಯೋಗಿಕ್ ಸೈನ್ಸ್ ನಲ್ಲಿ 105 Rank ಪಡೆದಿದ್ದು, ಬಿ.ಎಸ್.ಸಿ. ಎ.ಜಿ. ಹಾಗೂ ಫುಡ್ ಮತ್ತು ಸೈನ್ಸ್ ನಲ್ಲಿ 123 Rank ಗಳಿಸಿದ್ದಾರೆ. ವೆಟರ್ನರಿ ಸೈನ್ಸ್ ನಲ್ಲಿ 154 Rank, ಇಂಜಿನಿಯರಿಂಗ್ ವಿಭಾಗದಲ್ಲಿ 654 Rank ಹಾಗೂ ಬಿ.ಫಾರ್ಮದಲ್ಲಿ 179 ನೇ Rank ಗಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಇವರು ನೀಟ್ ಪರೀಕ್ಷೆ ತಯಾರಿಯಲ್ಲಿದ್ದಾರೆ.
*ತನುಶ್ರೀ 194 ನೇ Rank:
ನೀಟ್ ವ್ಯಾಸಂಗ ಮಾಡುತ್ತಿರುವ ವಿದ್ವತ್ ಪಿಯು ಕಾಲೇಜಿನ ಮತ್ತೋರ್ವ ಸಾಧಕ ವಿದ್ಯಾರ್ಥಿನಿ ತನುಶ್ರೀ ಅವರು ಬಿ.ಎಸ್.ಸಿ. ಎಜಿ. ಯಲ್ಲಿ 194 ನೇ Rank, ಫುಡ್ ಸೈನ್ಸ್ ವಿಭಾಗದಲ್ಲಿ 194 Rank ಹಾಗೂ ವೆಟರ್ನರಿ ಸೈನ್ಸ್ ನಲ್ಲಿ 401 Rank ಪಡೆದಿದ್ದಾರೆ. ಈಕೆಯೂ ಪಿಯು ಬೋರ್ಡ್ ಪರೀಕ್ಷೆಯಲ್ಲಿ 593 ಅಂಕದೊಂದಿಗೆ ರಾಜ್ಯಕ್ಕೆ 7 ನೇ ಸ್ಥಾನಿಯಾಗಿದ್ದರು. ಪ್ರಸಕ್ತ ನೀಟ್ ಪರೀಕ್ಷೆ ಸಿದ್ಧತೆಯಲ್ಲಿದ್ದಾರೆ.
*ಈ ಫಲಿತಾಂಶದಿಂದ ಶ್ರಮಕ್ಕೆ ಪ್ರತಿಫಲ ದೊರೆತಿದೆ:
ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ವೈಶಿಷ್ಟ್ಯ ಹೊಂದಿರುವ ಕಾಲೇಜಾಗಿರುವುದು ಈ ಫಲಿತಾಂಶದಿಂದ ಮತ್ತೊಮ್ಮೆ ಸಾಬೀತಾಗಿದೆ. ಸ್ಪರ್ಧಾತ್ಮಕ ತರಬೇತಿಗಾಗಿ ಸಾಧಕ ಸ್ನೇಹಿ ಮಾಡೆಲ್ ಪದ್ಧತಿಯನ್ನು ನಮ್ಮ ಕಾಲೇಜು ಅನುಸರಿಸರಿಸುತ್ತಿದ್ದು, ಖ್ಯಾತ ವಿಷಯ ತಜ್ಞರುಗಳನ್ನೊಳಗೊಂಡ ವಿಶೇಷ ತಂಡ ತರಬೇತಿ ನೀಡುತ್ತಿರುವುದೇ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಚಿನ್ಮಯ್. ಜಿ.ಕೆ. ಅವರ ನಿರಂತರ ಶ್ರಮಕ್ಕೆ ಸಂದ ಗೌರವವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ವಿದ್ವತ್ ಪಿಯು ಕಾಲೇಜು ತನ್ನ ಪ್ರಪ್ರಥಮ ಪ್ರಯತ್ನದಲ್ಲಿಯೇ ಗಮನಾರ್ಹ ಸಾಧನೆ ಮಾಡಿ ಶಿಕ್ಷಣಾಸಕ್ತರ ಗಮನ ಸೆಳೆದದ್ದು ವಿಶೇಷ ಹಾಗೂ ವಿದ್ಯಾರ್ಥಿಗಳ ಈ ಸಾಧನೆ ಸಂಸ್ಥೆಗೆ ಗೌರವ ತಂದಿದೆ ಎಂದು ಕಾರ್ಯದರ್ಶಿ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಇ.ಎಂ., ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್, ಖಜಾಂಚಿ ಎಂ.ಕೆ.ಕಾಶಿನಾಥ್, ಕಾಲೇಜು ಆಡಳಿತ ಮಂಡಳಿ, ವಿಭಾಗ ಮುಖ್ಯಸ್ಥರು ಪ್ರಶಂಸಿದ್ದಾರೆ.

