Home » ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬಾರಿ ಡಿಮ್ಯಾಂಡ್ – ಈ ಪರಿ ಪೈಪೋಟಿಗೆ ಕಾರಣವೇನು?

ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬಾರಿ ಡಿಮ್ಯಾಂಡ್ – ಈ ಪರಿ ಪೈಪೋಟಿಗೆ ಕಾರಣವೇನು?

0 comments

ಡಿಕೆ ಶಿವಕುಮಾರ್ ಅವರ ಸರ್ಕಾರ ದರ್ಬಾರ್ ನಡೆಸಲು ಆರಂಭಿಸಿದ ಮೂರನೇ ದಿನಕ್ಕೆ ಸಚಿವ ಸಂಪುಟದ ಮೊದಲ ವಿಕೆಟ್ ಪತನವಾಗಿದೆ. ಅಂದರೆ ಕಾಂಗ್ರೆಸ್ನ ಹಿರಿಯ ನಾಯಕ ರಾಮಲಿಂಗ ರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 ರಾಮಲಿಂಗ ರೆಡ್ಡಿಯವರ ರಾಜೀನಾಮೆಗೆ ಕಾರಣವೇನೆಂದು ನೋಡುವುದಾದರೆ ರೆಡ್ಡಿ ಅವರಿಗೆ ಡಿಕೆ ಸರ್ಕಾರದಲ್ಲಿ ಜನ ಸಂಪನ್ಮೂಲ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಆದರೆ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಈ ಖಾತೆ ಕೃಷ್ಣಬೈರೇಗೌಡ ಅವರ ಪಾಲಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ರಾಮಲಿಂಗಾರೆಡ್ಡಿ ಅವರು ಇದನ್ನು ಧಕ್ಕಿಸಿಕೊಳ್ಳಲು ವಿಫಲರಾಗಿದ್ದಾರೆ. ಹಿನ್ನೆಲೆಯಲ್ಲಿ ಬೇಸರಗೊಂಡು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂದಹಾಗೆ ರಾಮಲಿಂಗಾರೆಡ್ಡಿಯವರು ಮಾತ್ರ ಈ ಬೆಂಗಳೂರು ನಗರಾಭಿವೃದ್ಧಿ ಕಾತೆ ಕೊಡಿ ಎಂದು ಕೇಳುತ್ತಿಲ್ಲ. ಅನೇಕ ಸಚಿವರು ಈ ಒಂದು ಖಾತೆಗಾಗಿ ದುಂಬಾಲು ಬಿದ್ದಿದ್ದಾರೆ. ಹಾಗಿದ್ದರೆ ಈ ಒಂದು ಖಾತೆಗಾಗಿ ಇಷ್ಟು ಜಿದ್ದಾಜಿದ್ದಿ ಯಾಕೆ? ಏನಿದರ ಅಸಲಿಯತ್ತು?

ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಸಚಿವರ ಪಟ್ಟು ಏಕೆ?

ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಲ್ಲ, ಅದು ಇಡೀ ರಾಜ್ಯದ ರಾಜಕೀಯ ಮತ್ತು ಆರ್ಥಿಕತೆಯ ದಿಕ್ಸೂಚಿ. ಇಡೀ ದೇಶದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಿಂದ ಬರುವ ಆದಾಯವೇ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆಸರೆ. ಇಂತಹ ಜಾಗತಿಕ ಮಟ್ಟದ ನಗರದ ಉಸ್ತುವಾರಿ ವಹಿಸಿಕೊಳ್ಳುವುದು ಯಾವುದೇ ಒಬ್ಬ ರಾಜಕಾರಣಿಗೆ ಅತ್ಯುನ್ನತ ರಾಜಕೀಯ ಗೌರವ ಮತ್ತು ಶಕ್ತಿಯನ್ನು ತಂದುಕೊಡುತ್ತದೆ. 

banner

ಅಲ್ಲದೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಬಜೆಟ್ ಗಾತ್ರ ಸಾಮಾನ್ಯವಾದುದಲ್ಲ. ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮತ್ತು ಅಭಿವೃದ್ಧಿ ಯೋಜನೆಗಳು ಈ ಇಲಾಖೆಯ ಮೂಲಕವೇ ಹಾದುಹೋಗುತ್ತವೆ. ನಮ್ಮ ಮೆಟ್ರೋ ವಿಸ್ತರಣೆ, ಮೇಲ್ಸೇತುವೆಗಳು, ಸುರಂಗ ಮಾರ್ಗಗಳು (ಟನಲ್ ರೋಡ್ಸ್), ರಾಜಕಾಲುವೆ ಹಾಗೂ ಕೆರೆಗಳ ಅಭಿವೃದ್ಧಿ, ಮತ್ತು ನಗರದ ಟ್ರಾಫಿಕ್ ನಿರ್ವಹಣೆಯಂತಹ ಕೋಟ್ಯಾಂತರ ರೂಪಾಯಿ ಯೋಜನೆಗಳ ಮೇಲ್ವಿಚಾರಣೆ ಮಾಡುವ ನೇರ ಅವಕಾಶ ಈ ಖಾತೆಯ ಸಚಿವರಿಗೆ ಸಿಗುತ್ತದೆ.

ಬೆಂಗಳೂರಿನ ಭವಿಷ್ಯವನ್ನು ರೂಪಿಸುವ ಮತ್ತು ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿರುವ ಪ್ರಮುಖ ಸರ್ಕಾರಿ ಸಂಸ್ಥೆಗಳಾದ  BDA (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ), BWSSB (ಬೆಂಗಳೂರು ಜಲಮಂಡಳಿ), GBA ( ಗ್ರೇಟರ್ ಬೆಂಗಳೂರು ಅಥಾರಿಟಿ) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಈ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ. ಇವುಗಳ ನಿರ್ಧಾರಗಳು, ನೇಮಕಾತಿಗಳು ಮತ್ತು ಒಟ್ಟಾರೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದುವ ಅವಕಾಶ ಸಿಗುವುದರಿಂದ ಸಚಿವರಿಗೆ ಈ ಖಾತೆಯ ಮೇಲೆ ಹೆಚ್ಚಿನ ವ್ಯಾಮೋಹ ಇರುತ್ತದೆ. ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಸೇರಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಇದು ಇಡೀ ರಾಜ್ಯದ ಒಟ್ಟು ಸೀಟುಗಳ ದೊಡ್ಡ ಪಾಲಾಗಿದೆ. ನಗರದ ಮತದಾರರ ಮತ್ತು ನಾಗರಿಕರ ದೈನಂದಿನ ಜೀವನದ ಮೇಲೆ (ರಸ್ತೆ, ನೀರು, ಕಸದ ಸಮಸ್ಯೆ ಇತ್ಯಾದಿ) ನೇರ ಪ್ರಭಾವ ಬೀರುವ ಇಲಾಖೆ ಇದಾಗಿರುವುದರಿಂದ, ಈ ಇಲಾಖೆ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ.

ಒಟ್ಟಾರೆ ಈ ಖಾತೆಯು ಬೃಹತ್ ಬಜೆಟ್, ಪ್ರಮುಖ ಸಂಸ್ಥೆಗಳ ಮೇಲಿನ ನಿಯಂತ್ರಣ, ಮತ್ತು ಅಪಾರ ರಾಜಕೀಯ ಪ್ರಭಾವವನ್ನು ನೀಡುವುದರಿಂದ, ಸಚಿವರು ಇದಕ್ಕಾಗಿ ಪಟ್ಟು ಹಿಡಿಯುತ್ತಾರೆ. ಪ್ರಸ್ತುತ ಕೃಷ್ಣಾ ಬೈರೆಗೌಡ ಅವರಿಗೆ ಈ ಜವಾಬ್ದಾರಿ ಸಿಕ್ಕಿದ್ದು, ಬೆಂಗಳೂರಿನ ಸವಾಲುಗಳನ್ನು ಅವರು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಮಾತ್ರವಲ್ಲ ರಾಮಲಿಂಗ ರೆಡ್ಡಿ ಅವರ ರಾಜೀನಾಮೆ ಯಾವ ಮಟ್ಟದ ಬದಲಾವಣೆಯನ್ನು ಮಾಡಲಿದೆ ಎಂಬುದನ್ನೂ ಕಾದು ನೋಡಬೇಕಿದೆ.

You may also like