ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಪಶ್ಚಿಮ ಬಂಗಾಳದಲ್ಲಿ (West Bengal) ಭಾರತೀಯ ಜನತಾ ಪಾರ್ಟಿ (BJP) ಕಮಾಲ್ ಮಾಡಿದೆ. ಸತತ 15 ವರ್ಷಗಳ ಮಮತಾ ಬ್ಯಾನರ್ಜಿ (Mamatha Banerjee) ಆಡಳಿತ ಯುಗ ಅಂತ್ಯ ಕಂಡಿದೆ. ಆದರೆ ಇದೀಗ ಪಶ್ಚಿಮ ಬಂಗಾಳದಲ್ಲಿ ಹೊಸ ಬಿಕ್ಕಟ್ಟು ಎದುರಾಗಿದ್ದು ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪಣತೊಟ್ಟಿದ್ದಾರೆ. ಅವರ ಹಟ ಹೀಗೆ ಮುಂದುವರೆದರೆ ಹೊಂದಿರುವ ಸಾಧ್ಯತೆಗಳು ಏನು? ಈ ಬಗ್ಗೆ ಕಾನೂನು ಏನು ಹೇಳುತ್ತದೆ?


ಹೌದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister) ಅವರು, “ನಾನೇಕೆ ರಾಜೀನಾಮೆ ನೀಡಲಿ? ರಾಜೀನಾಮೆ ನೀಡಲು ನಾನು ಸೋತೆ ಇಲ್ಲ” ಎನ್ನುವಂತಹ ಮಾತನ್ನು ಆಡಿದ್ದಾರೆ. ಅಂದರೆ ಮಮತಾ ಅವರು ಸೋಲನ್ನು ಒಪ್ಪಿಕೊಳ್ಳದೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಚುನಾವಣಾ (Election) ಸೋಲಿನ ಬಳಿಕ ರಾಜೀನಾಮೆ ನೀಡದಿದ್ದರೆ ರಾಜ್ಯದಲ್ಲಿ ಸಂವಿಧಾನಾತ್ಮಕ ಸಂಕಷ್ಟ ಉಂಟಾಗುತ್ತದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯ ನ್ಯಾಯಮೂರ್ತಿ ಮಹತ್ವದ ವಿವರಣೆ ನೀಡಿದ್ದಾರೆ.
ಮಾಜಿ ಮು. ನ್ಯಾಯಮೂರ್ತಿ ಹೇಳಿದ್ದೇನು?
ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಹೇಳಿರುವುದೇನೆಂದರೆ, ಯಾವುದೇ ಮುಖ್ಯಮಂತ್ರಿ ಸೋತ ಕೂಡಲೇ ಸ್ವಯಂ ರಾಜೀನಾಮೆ ನೀಡಬೇಕು ಎಂಬುದು ಒಂದು ರಾಜಕೀಯ ಸಂಪ್ರದಾಯವಾದರೂ ಅದು ಕಡ್ಡಾಯವಾದ ಸಂವಿಧಾನ ನಿಯಮವಲ್ಲ. ಅಂದರೆ, ಮುಖ್ಯಮಂತ್ರಿ ತಕ್ಷಣ ಸ್ಥಾನ ತೊರೆಯದಿದ್ದರೂ ಅದು ನೇರವಾಗಿ “ಸಂವಿಧಾನಾತ್ಮಕ ಸಂಕಷ್ಟ” ಎಂದು ಪರಿಗಣಿಸಲಾಗುವುದಿಲ್ಲ.
ಸಂವಿಧಾನ ಏನು ಹೇಳುತ್ತದೆ?
ಭಾರತದ ಸಂವಿಧಾನ ಪ್ರಕಾರ, ರಾಜ್ಯದಲ್ಲಿ ಬಹುಮತ ಹೊಂದಿರುವ ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚಿಸಲು ಅರ್ಹವಾಗುತ್ತದೆ. ಚುನಾವಣೆಯಲ್ಲಿ ಹೊಸ ಬಹುಮತ ಹೊರಹೊಮ್ಮಿದ ನಂತರ ರಾಜ್ಯಪಾಲರ ಪಾತ್ರ ಇಲ್ಲಿ ಅತ್ಯಂತ ಪ್ರಮುಖವಾಗುತ್ತದೆ. ಅವರು ಬಹುಮತ ಪಡೆದ ಪಕ್ಷದ ನಾಯಕನನ್ನು ಸರ್ಕಾರ ರಚಿಸಲು ಆಹ್ವಾನಿಸಬಹುದು.
ರಾಜ್ಯಪಾಲರ ಪಾತ್ರ :
ಪ್ರಸ್ತುತ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೆ ಮುಂದುವರಿದರೆ, ರಾಜ್ಯಪಾಲರು ಅವರಿಂದ ಸದನದಲ್ಲಿ ಬಹುಮತ ಸಾಬೀತುಪಡಿಸಲು ಕೇಳಬಹುದು. ಈ ಪ್ರಕ್ರಿಯೆಯನ್ನು “ಫ್ಲೋರ್ ಟೆಸ್ಟ್” ಎಂದು ಕರೆಯಲಾಗುತ್ತದೆ. ಮುಖ್ಯಮಂತ್ರಿಗೆ ಬಹುಮತ ಇಲ್ಲ ಎಂದು ಸ್ಪಷ್ಟವಾದರೆ, ರಾಜ್ಯಪಾಲರು ಅವರನ್ನು ಸ್ಥಾನದಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿದ್ದಾರೆ.
ಒಟ್ಟಾರೆ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೂ ಕೂಡ ತಕ್ಷಣ ಸಂವಿಧಾನಾತ್ಮಕ ಸಂಕಷ್ಟ ಉಂಟಾಗುವುದಿಲ್ಲ. ರಾಜ್ಯಪಾಲರ ಹಸ್ತಕ್ಷೇಪ, ಸದನದಲ್ಲಿ ಬಹುಮತ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆಗಳ ಮೂಲಕ ಸಮಸ್ಯೆಗೆ ಪರಿಹಾರ ಸಿಗುತ್ತದೆ.

