ಪುತ್ತೂರು; ಪೂಜಾ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಪುರೋಹಿತರೊಬ್ಬರ ಕಾರನ್ನು ತಡೆದು ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ಮಾಡಿರುವ ಘಟನೆ ಮೇ.4 ರಂದು ರಾತ್ರಿ ಕಬಕ ಗ್ರಾಮದ ವಿದ್ಯಾಪುರದಲ್ಲಿ ನಡೆದಿದೆ.


ಕಬಕ ವಿದ್ಯಾಪುರ ನಿವಾಸಿ ಬಾಲಕೃಷ್ಣ ಜೋಯಿಸ ಎಂಬುವವರ ಪುತ್ರ ಗಣೇಶ್ ವಿ (39) ಹಲ್ಲೆಗೊಳಗಾದ ಪುರೋಹಿತರು.
ಗಣೇಶ್ ಅವರು ಪೂಜಾ ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದು, ವಿದ್ಯಾಪುರ ತಲುಪಿದಾಗ ರಸ್ತೆ ಬದಿಯ ಮನೆಯೊಂದರಲ್ಲಿ ಶುಭಕಾರ್ಯ ನಡೆಯುತ್ತಿದ್ದ ಕಾರಣ ವಾಹನಗಳ ದಟ್ಟಣೆ ಹಾಗೂ ಜನರ ಓಡಾಟ ಹೆಚ್ಚಿದ್ದರಿಂದ ಕಾರನ್ನು ನಿಧಾನವಾಗಿ ಚಲಾಯಿಸುತ್ತಿದ್ದರು. ಆಗ ಹಠಾತನೆ ಮಗುವೊಂದು ಕಾರಿಗೆ ಅಡ್ಡ ಬಂದಿದೆ.
ಕೂಡಲೇ ಗಣೇಶ್ ಅವರು ಕಾರು ನಿಲ್ಲಿಸಿ ಏನಾಯಿತು ಎಂದು ನೋಡುವಾಗ, ಅಲ್ಲಿದ್ದ ಅಪರಿಚಿತರು ಬಂದು ತಗಾದೆ ಮಾಡಿದ್ದಾರೆ. ಅಲ್ಲದೇ, ಗಣೇಶ್ ಅವರಿಗೆ ನಿಂದನೆ ಮಾಡಿ, ಹಲ್ಲೆ ಮಾಡಿದ್ದಾರೆ, ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸಂತ್ರಸ್ತ ಗಣೇಶ್ ಭಟ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

