ಕಾಸರಗೋಡು, ಮೆ.5: ಕಾಸರಗೋಡು ಜಿಲ್ಲೆಯ ಅಡೂರ್ ನಿವಾಸಿ ರವಿ ಎನ್ನುವವರ ಮನೆಯಲ್ಲಿ ಡ್ರಾಯರ್ ಒಳಗೆ ಸೇರಿಕೊಂಡಿದ್ದ ಹಾವಿನ ಮೈಗೆ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿರುವ ಘಟನೆ ನಡೆದಿದೆ.


ರವಿ ಅವರ ಮಕ್ಕಳು ಮನೆಯೊಳಗೆ ಆಟವಾಡುತ್ತಿರುವಾಗ ಟೇಬಲ್ನ ಡ್ರಾಯರ್ ತೆರೆದಿದ್ದು, ಅದರೊಳಗೆ ದೊಡ್ಡ ಕೇರೆ ಹಾವೊಂದು ಸುರುಳಿ ಸುತ್ತಿಕೊಂಡು ಕುಳಿತಿರುವುದನ್ನು ಕಂಡು ಬೆದರಿದ್ದಾರೆ. ಹಾವಿನ ದೇಹದ ಮಧ್ಯಭಾಗದಲ್ಲಿ ಚಿನ್ನದ ಉಂಗುರವೊಂದು ಬಿಗಿಯಾಗಿ ಸಿಲುಕಿರುವುದು ಕಂಡು ಬಂದಿದೆ.
ಆಹಾರದ ಹುಡುಕಾಟದಲ್ಲಿ ಡ್ರಾಯರ್ನ ಸಣ್ಣ ಸೀಳಿನ ಮೂಲಕ ಒಳಗೆ ಹೋಗುವಾಗ ಡ್ರಾಯರ್ನಲ್ಲಿದ್ದ ಉಂಗುರ ಹಾವಿನ ಮೈಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.
ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಬಹಳ ನಾಜೂಕತೆಯಿಂದ ಹಾವನ್ನು ಹೊರತೆಗೆದು, ಅದರ ಮೈಗೆ ಯಾವುದೇ ಗಾಯವಾಗದಂತೆ ಚಿನ್ನದ ಉಂಗುರವನ್ನು ಕತ್ತರಿಸಿ ತೆಗೆದಿದ್ದಾರೆ. ಅನಂತರ ಹಾವನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

