2026ರ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಅನೇಕ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ, ಉತ್ತಮ ಸಾಧನೆಗೈದು ಸಂಭ್ರಮ ಪಡುತ್ತಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಶಿಕ್ಷಕರು ಕೂಡ ಸಂತೋಷ ಪಡುತ್ತಿದ್ದಾರೆ. ಅದರಲ್ಲೂ ಕೂಡ ಕೆಲ ಶಾಲೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಬಂದಿದ್ದು ಸಂಭ್ರಮ ಮನೆ ಮಾಡಿದೆ.


ಅಂತಯೇ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಶಾಲೆ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಹೀಗೆ ಉತ್ತಮ ಫಲಿತಾಂಶದ ರೂವಾರಿ ಎನ್ನಲಾದ ಪ್ರಾಂಶುಪಾಲೆ ಜಯಂತಿ ಅವರನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಗೌರವಿಸಿದ್ದು, ಅವರ ಕಾಲಿಗೆ ಎರಗಿ ನಮಸ್ಕರಿಸಿದ್ದಾರೆ. ಈ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶಾಸಕರ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಂದಹಾಗೆ ಕಳೆದ ವರ್ಷ ಶೇ.35ರಷ್ಟು ಫಲಿತಾಂಶವಿದ್ದ ಶಾಲೆ ಈ ಬಾರಿ ಶೇ.94ರಷ್ಟು ಫಲಿತಾಂಶ ಗಳಿಸಿದೆ. ಕಳೆದ ವರ್ಷ ಶಾಸಕಗುರುರಾಜ್ ಗಂಟಿಹೊಳೆ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕರನ್ನು ಕಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದರು. ಶನಿವಾರ ಶಾಲೆಗೆ ಭೇಟಿ ನೀಡಿದ ಶಾಸಕರು ಭಾವುಕರಾಗಿ ಶಿರಬಾಗಿದರು. ಇದನ್ನು ಕಂಡು ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗಿದೆ.
