Home » ಮಂಗಳೂರು: ನೀನು ಎಲ್ಲಾದರೂ ಹೋಗಿ ಸಾಯಿ, ಶವ ತೆಗೆಯಲು ಬರ್ತೀನಿ ಎಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ!

ಮಂಗಳೂರು: ನೀನು ಎಲ್ಲಾದರೂ ಹೋಗಿ ಸಾಯಿ, ಶವ ತೆಗೆಯಲು ಬರ್ತೀನಿ ಎಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವಕ!

0 comments

ಮಂಗಳೂರು: ಯುವಕನೋರ್ವ ಕಾಲೇಜಿನಲ್ಲಿ ಸಹಪಾಠಿಯೊಬ್ಬಳ ಪ್ರೀತಿಗೆ ಬಿದ್ದು ಕೊನೆಗೆ ಅದೇ ಹುಡುಗಿಯ ಮೋಸಕ್ಕೆ ಬಲಿಯಾದ ಘಟನೆ ನಡೆದಿದೆ. ಈ ಕುರಿತು ಕಾವೂರು ಠಾಣೆಯಲ್ಲಿ ಯುವತಿ ಮತ್ತು ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾ.21 ರ ಮಧ್ಯರಾತ್ರಿ ಯುವಕ ಕುಟುಂಬದವರು ಈದ್‌ ಸಂಭ್ರಮದಲ್ಲಿದ್ದರೆ, ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್‌ ಆಶಿಕ್‌ (22) ಎನ್ನುವ ಯುವಕ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಮೊದಲಿಗೆ ಆತ್ಮಹತ್ಯೆ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮನೆ ಮಂದಿಗೆ ಯುವಕನ ಮೊಬೈಲ್‌ ಚಾಟಿಂಗ್‌ ನೋಡುತ್ತಲೇ ಇದೊಂದು ಆತ್ಮಹತ್ಯೆಯ ಪ್ರಚೋದನೆ ಎನ್ನುವುದು ತಿಳಿದು ಬಂದಿದೆ.

ಮಹಮ್ಮದ್‌ ಆಶಿಕ್‌ ತನ್ನ ಕಾಲೇಜು ಸಹಪಾಠಿ ಉಳ್ಳಾಲ ಮೂಲದ ಸಮೀಮಾ ಎನ್ನುವ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಪದವಿ ಪೂರೈಸಿದ ನಂತರ ಆಶಿಕ್‌ ತನ್ನ ಮಾವನ ಜೊತೆಗೆ ಅಕೌಂಟೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದು, ಸಮೀಮಾ ಜೊತೆಗೆ ಸುತ್ತಾಡುತ್ತಿದ್ದ. ಆದರೆ ಸಮೀಮಾ ಇತ್ತೀಚೆಗೆ ಆಶಿಕ್‌ನಿಂದ ದೂರವಾಗತೊಡಗಿದ್ದು, ಇನ್ನೋರ್ವನ ಸಖ್ಯ ಬೆಳೆಸಿದ್ದಳು. ಈ ಕುರಿತು ಸಮೀಮಾ ಮತ್ತು ಆಶಿಕ್‌ ಮಧ್ಯೆ ಗಲಾಟೆ ನಡೆಯುತ್ತಲೇ ಇತ್ತು.

ಮಾ.21 ರಂದು ಆಶಿಕ್‌ ತಂದೆ ಮಹಮ್ಮದ್‌ ಹನೀಫ್‌ ಮತ್ತು ಎಲ್ಲಾ ಕುಟುಂಬದವರು ಸೇರಿ ಈದ್‌ ಹಬ್ಬದ ಸಂಭ್ರಮಕ್ಕೆಂದು ಕಾಸರಗೋಡಿಗೆ ಹೋಗಿದ್ದು, ನಂತರ ರಾತ್ರಿ ಒಂದು ಗಂಟೆ ವೇಳೆಗೆ ಹನೀಫ್‌ ಮರಳಿದ್ದು, ಪತ್ನಿ ಮತ್ತು ಮಗಳು ಕಾವೂರಿನ ಭಾವನ ಮನೆಯಲ್ಲಿ ಉಳಿದುಕೊಂಡಿದ್ದರೆ, ಆಶಿಕ್‌ ಮೂಡುಶೆಡ್ಡೆಯ ತನ್ನ ಮನೆಗೆ ತೆರಳಿದ್ದ. ಈ ಸಂದರ್ಭದಲ್ಲಿ ನಾವು ಬೆಂಗಳೂರಿಗೆ ಸ್ನೇಹಿತರೊಂದಿಗೆ ಹೋಗಲಿಕ್ಕಿದೆ ಎಂದು ಆಶಿಕ್‌ ಹೇಳಿದ್ದ. ಅದಕ್ಕೆ ಮನೆ ಮಂದಿ ರಾತ್ರಿ ಬೇಡ, ಬೆಳಗ್ಗೆ ಬೇಗ ಎದ್ದು ಹೋಗುವಂತೆ ಹೇಳಿದ್ದರು. ಆಯ್ತು ಎಂದು ಒಪ್ಪಿಕೊಂಡು ಆಶಿಕ್‌ ಮನೆಗೆ ಮರಳಿದ್ದ.

banner

ತಡರಾತ್ರಿ ಎರಡು ಗಂಟೆಯ ಸಮಯದಲ್ಲಿ ಆಶಿಕ್‌ ಜೊತೆಗೆ ಬೆಂಗಳೂರಿಗೆ ಹೋಗಲಿಕ್ಕಿದ್ದ ಸ್ನೇಹಿತ ನಿಯಾಬ್‌ ಹಲವು ಬಾರಿ ಕರೆ ಮಾಡಿದ್ದ. ರಿಸೀವ್‌ ಮಾಡದೇ ಇದ್ದುದ್ದರಿಂದ ಆಶಿಕ್‌ ಕುಟುಂಬದವರಿಗೆ ಫೋನ್‌ ಮಾಡಿದ್ದು, ರಿಸೀವ್‌ ಮಾಡುತ್ತಿಲ್ಲ ಎಂದು ಹೇಳಿ ಮನೆಗೆ ಹೋಗಿ ನೋಡಿ ಚೆಕ್‌ ಮಾಡುವಂತೆ ಹೇಳಿದ್ದ. ನಂತರ ಮನೆ ಮಂದಿ ಮನೆಗೆ ಬಂದು ನೋಡಿದರೆ ಒಳಗೆ ಲಾಕ್‌ ಆಗಿತ್ತು. ನಂತರ ನೋಡಿದಾಗ ಆಶಿಕ್‌ ತನ್ನ ಲುಂಗಿಯನ್ನೇ ಫ್ಯಾನಿಗೆ ಕಟ್ಟಿ ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ.

ಎರಡು ದಿನ ಕಳೆದ ಆಶಿಕ್‌ ಮೊಬೈಲ್‌ ಚೆಕ್‌ ಮಾಡಿದಾಗ ಆಘಾತಕಾರಿ ಮಾಹಿತಿಗಳು ತಿಳಿದು ಬಂದಿದೆ. ಸಮೀಮಾ ಜೊತೆಗಿನ ಲವ್‌ ಮನೆ ಮಂದಿಗೆ ಗೊತ್ತಿತ್ತು. ಆದರೆ ಸಾವಿಗೀಡಾದ ದಿನ ಸಮೀಮಾ ಜೊತೆಗೆ ವಿಡಿಯೋ ಕರೆ ಮಾಡಿರುವುದು, ಸಾಕಷ್ಟು ಮಾತುಕತೆ ನಡೆಸಿರುವುದು ಮೊಬೈಲ್‌ನಲ್ಲಿ ದಾಖಲಾಗಿತ್ತು. ಈ ವೇಳೆ ಸಮೀಮಾ ಅಶ್ಲೀಲ ಮತ್ತು ಕೆಟ್ಟದಾಗಿ ಆಶಿಕ್‌ ಬಗ್ಗೆ ಮಾತನಾಡಿರುವುದು ದಾಖಲಾಗಿದೆ. ಇದರಂತೆ ಆಶಿಕ್‌ ತಂದೆ ಮಹಮ್ಮದ್‌ ಹನೀಫ್‌ ಕಾವೂರು ಠಾಣೆಗೆ ದೂರು ನೀಡಿದ್ದು ಮಗನ ಸಾವಿಗೆ ಸಮೀಮಾಳ ಕಿರುಕುಳವೇ ಕಾರಣ ಎಂದು ಆರೋಪ ಮಾಡಿದ್ದಾರೆ.

ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂದು ಆಶಿಕ್‌ ಮಾತನಾಡಿದ್ದು, ಇದಕ್ಕೆ ಪ್ರತಿಯಾಗಿ ಸಮೀಮಾ ನೀನು ಎಲ್ಲಿಯಾದರೂ ಹೋಗಿ ಸಾಯಿ, ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಹೇಳಿರುವುದಲ್ಲದೆ, ಅಶ್ಲೀಲ ಮತ್ತು ಹೇಳಲು ನಾಚಿಕೆಪಡುವಂತಹ ಭಾಷೆಯಲ್ಲಿ ನಿಂದನೆ ಮಾಡಿದ್ದಾಳೆ. ಈ ನೋವಿನಲ್ಲಿಯೇ ಆಶಿಕ್‌ ಸಾವಿಗೆ ಶರಣಾಗಿರುವುದು, ಇದಕ್ಕೆ ಆಕೆಯ ಪ್ರಚೋದನೆಯೇ ಕಾರಣ ಎಂದು ದೂರಿನಲ್ಲಿ ಮಹಮ್ಮದ್‌ ಹನೀಫ್‌ ತಿಳಿಸಿದ್ದಾರೆ.

ಕಾವೂರು ಠಾಣೆಯಲ್ಲಿ ಸಮೀಮಾ, ಆಕೆಯ ತಾಯಿ ಮತ್ತು ಇನ್ನೊಬ್ಬ ಅಪರಿಚಿತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

You may also like