ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೃಷಿ ನಾಶಪಡಿಸಲು ಯತ್ನಿಸಿ, ಅದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಗಂಭೀರ ಘಟನೆ ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಕೀಲೆ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ :ದೂರುದಾರೆ ಸುಮ ಎಂಬುವವರ
ಪತಿಯ ಹೆಸರಿನಲ್ಲಿ ಗರ್ಡಾಡಿ ಗ್ರಾಮದಲ್ಲಿ ಜಾಗವಿದ್ದು, ಕಳೆದ ಮಾಚ್ 28ರಂದು ಚೇತನಾ, ಆಕೆಯ ಸಹೋದರ, ತಂದೆ ಹಾಗೂ ತಾರಾನಾಥ ಎಂಬುವವರು ಅಕ್ರಮವಾಗಿ ತೋಟಕ್ಕೆ ನುಗ್ಗಿ ಅಡಿಕೆ ಕೃಷಿಯನ್ನು ನಾಶಪಡಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಇದನ್ನು ಸುಮ ಅವರು ಆಕ್ಷೇಪಿಸಿದಾಗ, ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ, “ದೂರು ನೀಡಿದರೆ ನಿನ್ನನ್ನು ಮತ್ತು ನಿನ್ನ ಮಗನನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಕೀಲೆ ವಿರುದ್ಧವೂ ಆರೋಪ :ಬೆದರಿಕೆಯಿಂದಾಗಿ ಮೊದಲು ಸುಮ್ಮನಿದ್ದ ಮಹಿಳೆ, ಏಪ್ರಿಲ್ 1ರಂದು ಠಾಣೆಗೆ ವಿಚಾರಣೆಗೆ ಹೋದಾಗ ಅಲ್ಲಿ ಮತ್ತೊಂದು ತಿರುವು ಸಿಕ್ಕಿದೆ. ದೂರುದಾರರ ಪರ ವಕೀಲರಾದ ಟಿ ಎಂಬುವವರು ಸಂತ್ರಸ್ತ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, 50 ಸಾವಿರ ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅನಿವಾರ್ಯವಾಗಿ ಮಹಿಳೆ ತನ್ನ ಕರಿಮಣಿ ಸರವನ್ನು ಸಹಕಾರಿ ಸಂಘದಲ್ಲಿ ಅಡವಿಟ್ಟು ವಕೀಲೆಗೆ ಹಣ ನೀಡಿದ್ದಾರೆ
ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಕ್ರಮ:ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸರು ಚೇತನಾ, ಚೇತನಾ ಸಹೋದರ, ತಂದೆ, ತಾರಾನಾಥ್ ಶೆಟ್ಟಿ ಹಾಗೂ ವಕೀಲೆ ಟಿ ವಿರುದ್ಧ BNS-2023 (ಕಲಂ 76, 329(3), 115(2), 351) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

