Jharkhand: ಮಗನ ಕಾಯಿಲೆ ವಾಸಿ ಮಾಡಲು ತಾಯಿ ಒಬ್ಬಳು ತನ್ನ 12 ವರ್ಷದ ಮಗಳನ್ನೇ ನರಬಲಿ ಕೊಟ್ಟಂತಹ ಅಮಾನುಷ ಘಟನೆಯೊಂದು ಜಾರ್ಖಂಡ್ನಲ್ಲಿ ಬೆಳಕಿಗೆ ಬಂದಿದೆ.

ಜಾರ್ಖಂಡ್ನ (Jharkhand) ಹಜಾರಿಬಾಗ್ನಲ್ಲಿ (Hazaribagh) ಈ ಘಟನೆ ನಡೆದಿದೆ. ರೇಶ್ಮಿ ದೇವಿ (25) ಪುಣ್ಯಾತಗಿತ್ತಿಯೇ ಇಂತಹ ನೀಚ ಕೃತ್ಯ ಮಾಡಿದ ತಾಯಿ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಭೀಮ್ ರಾಮ್ (40) ಹಾಗೂ ಮಾಟಗಾತಿ ಶಾಂತಿ ದೇವಿಯನ್ನು (55) ಬಂಧಿಸಿದ್ದಾರೆ.
ಆರೋಪಿ ಮಹಿಳೆಯ ಕಿರಿಯ ಮಗನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದು ವಾಸಿ ಆಗಿರಲಿಲ್ಲ. ಇದರಿಂದ ಕುಟುಂಬದ ಸಮಸ್ಯೆಗಳೂ ಹೆಚ್ಚಾಗಿದ್ದವು. ಹೀಗಾಗಿ ಮಹಿಳೆ ಪರಿಹಾರಕ್ಕಾಗಿ ಮಾಟಗಾತಿಯೋರ್ವಳ ಬಳಿ ಹೋದಾಗ ಮಾಟಗಾತಿ ನಿನ್ನ ಮಗ ಗುಣಮುಖನಾಗಬೇಕೆಂದರೆ ನಿನ್ನ ಮಗಳನ್ನು ಬಲಿಕೊಡಬೇಕು. ಅವಳು ಇನ್ನೂ ಕನ್ಯೆ. ಅದೇ ಅತ್ಯಂತ ಮಂಗಳಕರ ಮಾರ್ಗ ಎಂದು ತಿಳಿಸಿದ್ದಾಳೆ.
ಮಾಟಗಾತಿಯ ಪರಿಹಾರ ಒಪ್ಪಿಕೊಂಡ ತಾಯಿ, ಹಿಂದೂಗಳ ಹಬ್ಬ ನವರಾತ್ರಿಯ ಎಂಟನೇ ದಿನವಾದ ಅಷ್ಟಮಿಯ ರಾತ್ರಿಯಂದು ಬಲಿಕೊಡಲು ನಿರ್ಧರಿಸಿದ್ದಾಳೆ. ಅದರಂತೆ ತಾಯಿ ಮಗಳ ಕಾಲುಗಳನ್ನು ಹಿಡಿದುಕೊಂಡಾಗ ಆಕೆಯ ಪ್ರಿಯಕರ ಕತ್ತು ಹಿಸುಕಿದ್ದಾನೆ. ಮಾಟಗಾತಿ ಬಾಲಕಿಯ ಖಾಸಗಿ ಅಂಗದೊಳಗೆ ಒಂದು ಕೋಲನ್ನು ಹಾಕಿ ವಿಕೃತಿ ಮೆರೆದಿದ್ದಾಳೆ. ಬಳಿಕ ಆಕೆಯ ರಕ್ತಕ್ಕಾಗಿ ತಲೆಗೆ ಹೊಡೆದಿದ್ದಾರೆ. ಕೊಂದ ಬಳಿಕ ಆಕೆಯ ಶವವನ್ನು ತೋಟದಲ್ಲಿ ಹೂತು ಹಾಕಿದ್ದಾರೆ.
ಮಾರನೇ ದಿನ ಬೆಳಿಗ್ಗೆ ಬಾಲಕಿಯ ಶವ ಪತ್ತೆಯಾದ ನಂತರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿ, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಮರಣೋತ್ತರ ಹಾಗೂ ಫೋರೆನ್ಸಿಕ್ ಪರೀಕ್ಷೆ ನಡೆಸಿದ್ದಾರೆ. ವರದಿಯಲ್ಲಿ ಅತ್ಯಾಚಾರ ಆಗಿರುವುದು ಸಾಬೀತಾಗಿಲ್ಲ. ತಾಯಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

