ರಾಯಚೂರು: ಮಗುವಿಗೆ ಹಾಲುಣಿಸಿದ ಕೆಲವೇ ಕ್ಷಣದಲ್ಲಿ ತಾಯಿಯೊಬ್ಬಳು ಸಾವಿಗೀಡಾದ ಘಟನೆ ನಗರದ ಐಬಿ ಕಾಲೋನಿಯಲ್ಲಿ ನಡೆದಿದೆ. ವಿದ್ಯಾ (30) ಮೃತ ತಾಯಿ.

ಈ ಕುರಿತು ರಾಯಚೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ ಮಂಜುನಾಥ್, ಅತ್ತೆ ಕವಿತಾ ಮೇಲೆ ಕೊಲೆ ಆರೋಪವಿದೆ.
ಎರಡು ವರ್ಷಗಳ ಹಿಂದೆ ವಿದ್ಯಾ ಮತ್ತು ಮಂಜುನಾಥ್ ವಿವಾಹ ನಡೆದಿದೆ. ದಂಪತಿಗೆ 11 ತಿಂಗಳ ಮಗುವಿದೆ. ನಗರದ ಉಪವಿಜ್ಞಾನ ಕೇಂದ್ರದಲ್ಲಿ ವಿದ್ಯಾ ಕೆಲಸ ಮಾಡುತ್ತಿದ್ದರು. ಮದುವೆ ಆದಾಗಿನಿಂದ ವರದಕ್ಷಿಣೆಗಾಗಿ ಅತ್ತೆ, ಗಂಡ ಪೀಡಿಸುತ್ತಿದ್ದರು. 30ಗ್ರಾಂ ಚಿನ್ನಾಭರಣ, ಅರ್ಧ ಕೆಜಿ ಬೆಳ್ಳಿ ಆಭರಣವನ್ನು ವಿದ್ಯಾ ಕುಟುಂಬ ವರದಕ್ಷಿಣೆಯಾಗಿ ನೀಡಿದ್ದರು.
ನಿನ್ನೆ ಸಂಜೆ ಪತಿ ಮಂಜುನಾಥ್ ಕುಡಿದು ಬಂದು ವಿದ್ಯಾಳನ್ನು ಕೆಲಸದಿಂದ ಕರೆದುಕೊಂಡು ಬಂದಿದ್ದ. ನಂತರ ಮನೆಯಲ್ಲಿ ಮಗುವಿಗೆ ಹಾಲುಣಿಸಿದ ವಿದ್ಯಾ, ನಂತರ ಅತ್ತೆ ಬಳಿ ಗಂಡನ ಕುಡಿತದ ಬಗ್ಗೆ ಹೇಳಿದ್ದಾಳೆ. ಇದಾದ ಕೆಲವೇ ಹೊತ್ತಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾ ಮೃತದೇಹ ಪತ್ತೆಯಾಗಿದೆ. ಗಂಡ ಮತ್ತು ಅತ್ತೆಯೇ ನೇಣು ಬಿಗಿದು ಕೊಲೆ ಮಾಡಿರುವ ಆರೋಪವಿದೆ. ಸದ್ಯಕ್ಕೆ ಗಂಡ ಮಂಜುನಾಥ್, ಅತ್ತೆ ಕವಿತಾ ವಿರುದ್ಧ ದೂರು ದಾಖಲಾಗಿದೆ.

