ಉಳ್ಳಾಲ: ರೌಡಶೀಟರೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತೊಕ್ಕೊಟ್ಟು ಫ್ಲೈ ಓವರ್ನಲ್ಲಿ ನಸುಕಿನ ಸಮಯ ಸುಮಾರು 3.30 ರ ಸುಮಾರಿಗೆ ನಡೆದಿದೆ. ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (42) ಯಾನೆ ಟ್ಯಾಬ್ಲೆಟ್ ಆರೀಫ್ ಕೊಲೆಯಾದ ರೌಡಿಶೀಟರ್.

ಮೃತ ಆರೀಫ್ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಆರೀಫ್ ಧಕ್ಕೆಯಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದು, ಇಂದು ಬೆಳಗ್ಗೆ ಬುಲೆಟ್ ಬೈಕಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್ ಮೇಲ್ಸೇತುವೆಯಲ್ಲಿ ಆತನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕಾರಿನಿಂದ ಹಿಂಬಾಲಿಸಿಕೊಂಡು ಬಂದ ತಂಡವೊಂದು ಆರೀಫನನ್ನು ಕೊಲೆ ಮಾಡಿ ಪರಾರಿಯಾಗಿರುವುದಾಗಿ ವರದಿಯಾಗಿದೆ.
2022 ರ ಮೇ ತಿಂಗಳಲ್ಲಿ ಆರೀಫ್ ಬೈಕ್ನಲ್ಲಿ ಧಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬಜಾಲಿನ ಟೊಪ್ಪಿ ನೌಫಾಲ್ ಮತ್ತು ತಂಡವು ದಾಳಿ ಮಾಡಿ ಚೂರಿ ಇರಿದು ಕೊಲೆಗೆ ಯತ್ನ ಮಾಡಿತ್ತು. ಆರೀಫ್ ಮೂಲತಃ ಕುದ್ರೋಳಿ ನಿವಾಸಿಯಾಗಿದ್ದು, ಆರೇಳು ವರ್ಷಗಳಿಂದ ತನ್ನ ಕುಟುಂಬದ ಜೊತೆ ಅಜ್ಜಿನಡ್ಕ ಬಳಿಯ ಮುಳ್ಳುಗುಡ್ಡೆ ಎನ್ನುವಲ್ಲಿ ಮನೆ ಮಾಡಿ ವಾಸವಿದ್ದ.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಮಿಥುನ್, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಮೃತ ಆರೀಫ್, ಪತ್ನಿ, ಮೂರು ಗಂಡು, ಒಂದು ಹೆಣ್ಣು ಮಗಳನ್ನು ಅಗಲಿದ್ದಾನೆ ಎಂದು ವರದಿಯಾಗಿದೆ.

