ಉಡುಪಿ: 30 ವರ್ಷಗಳಿಂದ ಜೀತದಾಳಾಗಿ ಇಟ್ಟುಕೊಂಡು ಎಸ್ ಟಿ ಸಮುದಾಯದ ವ್ಯಕ್ತಿ ಮೇಲೆ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಮಹಿಳೆಯೊಬ್ಬರನ್ನು ಬಂಧಿಸಿರುವ ಕುರಿತು ವರದಿಯಾಗಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ರಜನಿ ಶೆಟ್ಟಿ ಬಂಧಿತ ಮಹಿಳೆ.
ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಸೇರಿದ ಕನ್ಯಾನ ಗ್ರಾಮದ ನಾಗ (65) ಅವರನ್ನು ಸುಮಾರು 30 ವರ್ಷಗಳಿಂದ ಕುಂದಾಪುರದ ಹೆಮ್ಮಾಡಿಯ ಕಬ್ಬೈಲು ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬುವವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ಸುಬ್ಬಣ್ಣ ಶೆಟ್ಟಿ ನಿಧನದ ನಂತರ ಅವರ ಮಗಳು ರಜನಿ ಶೆಟ್ಟಿ, ಅಳಿಯ ಕರುಣಾಕರ ಶೆಟ್ಟಿ ಕೂಡಾ ನಾಗ ಅವರನ್ನು ದನ ಕಾಯುವ ಮತ್ತು ತೋಟದ ಕೆಲಸಕ್ಕೆಂದು ಮನೆಯಲ್ಲಿ ಇಟ್ಟುಕೊಂಡಿದ್ದರು.
ಕಳೆದ 30 ವರ್ಷಗಳಿಂದ ನಾಗ ಅವರನ್ನು ಜೀತದಾಳಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಸರಿಯಾಗಿ ಕೂಲಿ ಕೊಡದೆ ಮೂಲಸೌಕರ್ಯ ನೀಡದೆ ದನದ ಕೊಟ್ಟಿಗೆಯಲ್ಲಿ ಮಲಗಿಸುತ್ತಿದ್ದರು. ತಿಂಡಿಯ ತಟ್ಟೆ ಬಟ್ಟೆ ಎಲ್ಲವನ್ನೂ ದನದ ಕೊಟ್ಟಿಗೆಯಲ್ಲಿ ಇಡುವಂತೆ ಒತ್ತಾಯ ಮಾಡುತ್ತಿದ್ದರು. ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲ, ಬಾಳೆ ಎಲೆಯಲ್ಲಿ ದನದ ಕೊಟ್ಟಿಗೆಯಲ್ಲಿಯೇ ಊಟ ನೀಡುತ್ತಿದ್ದರು ಎಂದು ನಾಗ ಅವರು ದೂರು ನೀಡಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಜನಿ ಶೆಟ್ಟಿ ಅವರನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

