LPG: ಮಧ್ಯಪ್ರಾಚ್ಯದಲ್ಲಿ ಕವಿದಿರುವ ಯುದ್ಧ ಕಾರ್ಮೋಡದಿಂದಾಗಿ ದೇಶಾದ್ಯಂತ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ನಲ್ಲಿ 60 ರೂಪಾಯಿ ಏರಿಕೆಯಾಗಿದೆ. ಈ ಬೆನ್ನಲ್ಲೇ ಎಲ್ಪಿಜಿ ಸಿಲಿಂಡರ್ ನ ಕೊರತೆ ಕೂಡ ಎದುರಾಗಿದೆ. ಹೀಗಾಗಿ ರಾಜ್ಯದಲ್ಲಿ ಎಲ್ಪಿಜಿ ಗ್ರಾಹಕರಿಗೆ ಸಿಲಿಂಡರ್ ಸಿಗುತ್ತಿಲ್ಲ ಎಂಬ ವಿಚಾರ ಸುದ್ದಿಯಾಗುತ್ತಿದೆ.

ಸಾಮಾನ್ಯ ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬುಕಿಂಗ್ ಮಾಡಿದವರೆಗೆ 2 ದಿನದೊಳಗೆ 14.2 ಕೆಜಿಯ ಮರುಪೂರಣ ಸಿಲಿಂಡರ್ಮನೆ ಬಾಗಿಲಿಗೆ ಬರುತ್ತಿತ್ತು.ಆದರೆ,ಕೊಲ್ಲಿ ಕದನದಿಂದ ಎಲ್ಪಿಜಿ ಸಿಲಿಂಡರ್ ಪೂರೈಕೆ ಮೇಲೆ ಪರಿಣಾಮ ಬೀರಲಿದೆ ಎಂದು ದಿಗಿಲುಗೊಂಡಿರುವ ಗ್ರಾಹಕರು, ತರಾತುರಿಯಲ್ಲಿ ಸಿಲಿಂಡರ್ ಬುಕಿಂಗ್ ಮಾಡುತ್ತಿದ್ದಾರೆ.
ಬುಕಿಂಗ್ ಮಾಡಿದವರಿಗೆ ವಾರದ ಬಳಿಕ ಎಲ್ಪಿಜಿ ಗ್ಯಾಸ್ ವಿತರಿಸುವುದಾಗಿ ಗ್ಯಾಸ್ ಏಜೆನ್ಸಿಗಳು ಹೇಳುತ್ತಿವೆ. ಅಲ್ಲದೆ, ಹೊಸ ಗ್ಯಾಸ್ ಸಂಪರ್ಕ ನೀಡುವಂತೆ ಗ್ಯಾಸ್ ಏಜೆನ್ಸಿಗಳಿಗೆ ಮನವಿ ಮಾಡಿದರೆ ‘ತಿಂಗಳ ಬಳಿಕ ಬನ್ನಿ’ ಎಂದು ಹೇಳಿ ಕಳುಹಿಸುತ್ತಿವೆ.
ರಾಜ್ಯದಲ್ಲಿ 600ಕ್ಕೂ ಅಧಿಕ ಗ್ಯಾಸ್ ಏಜೆನ್ಸಿಗಳಿವೆ. ಕುಟುಂಬದಲ್ಲಿ 4-5 ಸದಸ್ಯರು ಇದ್ದರೆ ತಿಂಗಳಿಗೆ ಒಂದು ಸಿಲಿಂಡರ್ ಬೇಕು. ಇಬ್ಬರು ಸದಸ್ಯರಿದ್ದರೆ ಒಂದೂವರೆ ಅಥವಾ 2 ತಿಂಗಳಿಗೊಮ್ಮೆ ಒಂದು ಸಿಲಿಂಡರ್ ಅಗತ್ಯ ಇರುತ್ತದೆ. ಹಾಗಾಗಿ, ಅಗತ್ಯ ಅನುಗುಣವಾಗಿ ರೀ ಫಿಲಿಂಗ್ ಬುಕಿಂಗ್ ಮಾಡಿದವರಿಗೆ ಗ್ಯಾಸ್ ಏಜೆನ್ಸಿಗಳು, ಮರುಪೂರಣ ಸಿಲಿಂಡರ್ ಪೂರೈಸುತ್ತಿದ್ದವು. ಇದೀಗ, ಕೊಲ್ಲಿ ಕದನದಿಂದ ಮುಂದಿನ ದಿನಗಳಲ್ಲಿ ಗೃಹ ಬಳಕೆ ಸಿಲಿಂಡರ್ ಮೇಲೆ ಪರಿಣಾಮ ಬೀರುವ ಆತಂಕ ಗ್ರಾಹಕರಿಗೆ ಕಾಡುತ್ತಿದೆ.
ವಾಣಿಜ್ಯ ಸಿಲಿಂಡರ್ ಸ್ಥಗಿತ
ಇದರೊಂದಿಗೆ ರಾಜ್ಯದಲ್ಲಿ ವಾಣಿಜ್ಯ ಸಿಲಿಂಡರ್ ಗಳ ಪೂರೈಕೆ ಕೂಡ ಸ್ಥಗಿತವಾಗಿದೆ ಎನ್ನಲಾಗುತ್ತಿದೆ. ಗ್ಯಾಸ್ ಸರಬರಾಜು ಬಂದ್ ಆಗಿರುವ ಕಾರಣ ಹೊಟೆಲ್ನಲ್ಲಿ ಯಾವುದೇ ಅಡುಗೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾಳೆಯಿಂದ (ಮಾ.10) ಹೊಟೆಲ್ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೊಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
ಇನ್ನೂ ಹೋಟೆಲ್ ಅಸೋಸಿಯೇಷನ್ ನ ಜಂಟಿ ಕಾರ್ಯದರ್ಶಿ ಕೃಷ್ಣರಾಜ್ ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದ್ದು ಇದು ನಮ್ಮ ನಿರ್ಧಾರ ಅಲ್ಲ ಸರ್ಕಾರ ನಮ್ಮ ಮೇಲೆ ಹಾಕುತ್ತಿರುವ ಒತ್ತಡ ಎಂದಿದ್ದಾರೆ. ಮೊದಲೇ ನಮಗೆ ಮುನ್ಸೂಚನೆ ನೀಡಿದ್ರೆ ಈ ರೀತಿಯ ಪರಿಸ್ಥಿತಿ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ. ನಾವು ಬಂದ್ ಮಾಡೋದಕ್ಕೆ ನಿರ್ಧಾರ ತೆಗೆದುಕೊಂಡಿಲ್ಲ. ನಮಗೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ನಾಳೆ ಮಧ್ಯಾಹ್ನಕ್ಕೆ ಆಗುವಷ್ಟು ಸಿಲಿಂಡರ್ ಮಾತ್ರ ನಮ್ಮ ಹತ್ರ ಇದೆ. ಅಷ್ಟರೊಳಗೆ ಸರ್ಕಾರ ಪೂರೈಕೆ ಮಾಡದಿದ್ರೆ ಎಲ್ಲಾ ಹೋಟೆಲ್ ಗಳು ಬಂದ್ ಮಾಡಲಾಗುತ್ತೆ ಎಂದು ಕೃಷ್ಣರಾಜ್ ಹೇಳಿದ್ದಾರೆ.
ತೈಲ ಕಂಪನಿಗಳು 70 ದಿನಗಳವರೆಗೆ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಭರವಸೆ ನೀಡಿದ್ದವು. ಆದರೆ, ಇದೀಗ ಏಕಾಏಕಿ ಪೂರೈಕೆಯನ್ನು ಸ್ಥಗಿತಗೊಳಿಸಿರುವುದು ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದೆ. ಕೂಡಲೇ ಸಂಬಂಧಪಟ್ಟ ಕೇಂದ್ರ ಸಚಿವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಗ್ಯಾಸ್ ಪೂರೈಕೆಯನ್ನು ತಕ್ಷಣವೇ ಪುನರಾರಂಭಿಸುವಂತೆ ಹೋಟೆಲ್ ಮಾಲೀಕರ ಸಂಘ ಆಗ್ರಹಿಸಿದೆ.

