Home » ಉಜಿರೆ: ಶ್ರೀ ಜನಾರ್ದನ ದೇವಸ್ಥಾನ: ಬ್ರಹ್ಮಕಲಶೋತ್ಸವ ಪ್ರಾರಂಭೋತ್ಸವ

ಉಜಿರೆ: ಶ್ರೀ ಜನಾರ್ದನ ದೇವಸ್ಥಾನ: ಬ್ರಹ್ಮಕಲಶೋತ್ಸವ ಪ್ರಾರಂಭೋತ್ಸವ

0 comments
ಉಜಿರೆ: ವೇದಗಳು ಭಗವಂತನ ಉಸಿರು ಎಂಬ ನಂಬಿಕೆ ಇದೆ. ಭಗವಂತನ ಸನ್ನಿಧಾನಕ್ಕಾಗಿ ದೇವಸ್ಥಾನಗಳ ಪರಿಕಲ್ಪನೆ ಬಳಕೆಗೆ ಬಂದಿದೆ. ಆಗಮಗಳ ಪ್ರಕಾರ ದೇವಸ್ಥಾನ ಶರೀರ ಎಂದು ಭಾವಿಸಿದರೆ, ದೇವರು ಆತ್ಮನ ಸ್ವರೂಪದಲ್ಲಿರುತ್ತಾನೆ. ದೇವರ ಸಾನ್ನಿಧ್ಯದಲ್ಲಿ ಅರ್ಚಕರು ಹಾಗೂ ತಂತ್ರಿಗಳು  ಮಾಡುವ ವೇದ, ಪುರಾಣಗಳ ಪಾರಾಯಣ, ಮಂತ್ರಪಠಣ, ಅನ್ನದಾನ ಮೊದಲಾದ  ಕಾರ್ಯಗಳಿಂದ ದೇವರ ಸಾನ್ನಿಧ್ಯ ವೃದ್ಧಿಯಾಗಿ ಭಕ್ತರ ಪ್ರಾರ್ಥನೆಗಳು, ಅಭೀಷ್ಟಗಳು ಈಡೇರುತ್ತವೆ ಎಂದು ಉಡುಪಿ ಜಿಲ್ಲಾ ಹಂಗಾರಕಟ್ಟೆ ಬಾಳೆಕುದ್ರಿ ಮಠದ ಪೂಜ್ಯ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ಉಜಿರೆಯಲ್ಲಿ ಕೃಷ್ಣಾನುಗ್ರಹ ಸಭಾಭವನದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ದೇವರು ಸರ್ವವ್ಯಾಪ್ತಿಯಾಗಿದ್ದು ನಾನಾ ಹೆಸರುಗಳಿಂದ ಭಕ್ತರು ಪೂಜೆ, ಆರಾಧನೆ ಮಾಡುತ್ತಾರೆ. ದೇವರ ಪಾವನ ಸಾನ್ನಿಧ್ಯದಲ್ಲಿ ಭಕ್ತರು ಶ್ರದ್ಧಾ-ಭಕ್ತಿಯಿಂದ ತಮ್ಮ ನಿವೇದನೆಗಳನ್ನು ಮಾಡಿದಾಗ ಅವುಗಳ ಪರಿಹಾರವಾಗಿ ಎಲ್ಲೆಲ್ಲೂ ಸುಖ-ಶಾಂತಿ, ನೆಮ್ಮದಿ ನೆಲೆಸುತ್ತದೆ. ವಿಶೇಷ ಪೂಜೆ, ಆರಾಧನೆಗಳಿಂದ ಜನರ ಕಲ್ಯಾಣದೊಂದಿಗೆ ಲೋಕಕಲ್ಯಾಣವೂ ಆಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಜನತಾ ಜನಾರ್ದನನ ಸೇವೆಯ ಪರಿಕಲ್ಪನೆಯಲ್ಲಿ ಸರ್ವಧರ್ಮೀಯರೂ ತನು-ಮನ-ಧನದಿಂದ ಸಂಪೂರ್ಣ ಶಕ್ತಿ-ಸಾಮರ್ಥ್ಯ ಬಳಸಿ ಸಂಘಟಿತರಾಗಿ ವಿಷ್ಣುವಿನ ಸೇವೆ ಮಾಡುತ್ತಿದ್ದು, ಪ್ರತಿಯೊಂದು ಕಾರ್ಯವೂ ಅದ್ಭುತವಾಗಿ, ಮಾದರಿಯಾಗಿ ಮೂಡಿ ಬಂದಿದೆ ಎಂದು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.
“ನಾರಾಯಣ ತೇ ನಮೋ ನಮೋ” ಎಂಬ ಭಕ್ತಿಗೀತೆಯನ್ನು ಸ್ವಾಮೀಜಿ ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮುಕ್ತ ಪ್ರಶಂಸೆಗೆ ಪಾತ್ರರಾದರು. ಬ್ರಹ್ಮಕಲಶದೊಂದಿಗೆ ಜನತಾ ಜನಾರ್ದನ ಸೇವೆ ನಿತ್ಯ, ನಿರಂತ ನಡೆಯಲಿ ಎಂದು ಸ್ವಾಮೀಜಿ ಶುಭ ಹಾರೈಸಿದರು.

ಭಕ್ತರು ತೃಪ್ತರಾದರೆ, ಭಗವಂತನೂ ತೃಪ್ತರಾಗುತ್ತಾರೆ: ಶ್ರದ್ಧಾಅಮಿತ್
“ಸುರುಚಿ” ಪಾಕಶಾಲೆ ಉದ್ಘಾಟಿಸಿದ ಬೆಂಗಳೂರು ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್, ಮಾತನಾಡಿ ಎಲ್ಲಾ ವಿಭಾಗಗಳನ್ನೂ ರಂಗೋಲಿ, ಫಲ-ಪುಷ್ಪ, ತರಕಾರಿ, ಎಲೆಗಳು, ಇತ್ಯಾದಿ  ಪ್ರಾಕೃತಿಕ ಪರಿಕರಗಳನ್ನು  ಬಳಸಿ ಆಕರ್ಷಕ ವಿನ್ಯಾಸದಿಂದ ಸಿಂಗರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಅನ್ನದಾನಕ್ಕೆ ವಿಶೇಷ ಮಹತ್ವ ಇದೆ ಹಾಗೂ ಭಕ್ತರು ತೃಪ್ತರಾದರೆ, ಭಗವಂತನೂ ತೃಪ್ತರಾಗುತ್ತಾರೆ ಎಂಬ ನಂಬಿಕೆಯ ನೆಲೆಯಲ್ಲಿ ಧರ್ಮಸ್ಥಳವೂ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಅನ್ನದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಭಕ್ತರಲ್ಲೇ ನಾವು ದೇವರನ್ನು ಕಾಣಬಹುದು.

banner

ರೈತರು ತಾವು ಬೆಳೆದ ಹಣ್ಣು, ತರಕಾರಿ, ಎಳನೀರು, ತೆಂಗಿನಕಾಯಿಗಳನ್ನು  ಶ್ರದ್ಧಾ-ಭಕ್ತಿಯಿಂದ ಹೊರೆಕಾಣಿಕೆಯಾಗಿ ಅರ್ಪಿಸಿದ್ದು, ಈಗಾಗಲೆ ಉಗ್ರಾಣ ಭರ್ತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಭಗವಂತನ ಅನುಗ್ರಹದೊಂದಿಗೆ ಅನ್ನದಾನದಿಂದ ಕೃಷಿಕರ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರದ್ಧಾಅಮಿತ್ ಅಭಿಪ್ರಾಯಪಟ್ಟರು.
ಸುರ್ಯ ಸದಾಶಿವರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಪ್ರೊ. ಸತೀಶ್ಚಂದ್ರ, ಮುಂಡಾಜೆಯ ಶ್ರೀಧರ ಜಿ. ಭಿಡೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಎಸ್.ಎಸ್. ಶುಭಾಶಂಸನೆ ಮಾಡಿದರು.


ಅಧ್ಯಕ್ಷತೆ ವಹಿಸಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್  ಮಾತನಾಡಿ, ಆಧ್ಯಾತ್ಮವೇ ಭಾರತದ ಆತ್ಮವಾಗಿದೆ. ಭಕ್ತಯಿಂದ ಭಗವಂತನ ಸೇವೆ ಮಾಡಿದಾಗ ಸಕಲ ಕಷ್ಟಗಳ ಪರಿಹಾರವಾಗಿ ಲೋಕಕಲ್ಯಾಣವಾಗುತ್ತದೆ ಎಂದರು.
ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಸ್ವಾಗತಿಸಿದರು. ರವೀಂದ್ರ ಶೆಟ್ಟಿ ಧನ್ಯವಾದವಿತ್ತರು.

ಎಸ್.ಡಿ.ಎಂ. ಸನಿವಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು.
ಚಂದ್ರಗ್ರಹಣ ಪ್ರಯುಕ್ತ ಸಭೆ-ಸಮಾರಂಭ ಇರುವುದಿಲ್ಲ: ಚಂದ್ರಗ್ರಹಣ ಪ್ರಯುಕ್ತ ಮಂಗಳವಾರ ಯಾವುದೇ ಸಭೆ-ಸಮಾರಂಭ ಇರುವುದಿಲ್ಲ.

ಬೆಳ್ತಂಗಡಿ ತಾಲ್ಲೂಕು ವಿಪ್ರಸಮಾಜದ ವತಿಯಿಂದ  ದೇವಸ್ಥಾನದಲ್ಲಿ ಸಾಮಹಿಕ ಪ್ರಾರ್ಥನೆ, ವಿಶೇಷ ಶತರುದ್ರಾಭಿಷೇಕ, ವಾಸ್ತುಹೋಮ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ಮಾತ್ರ ನಡೆಯುತ್ತವೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ವಿಜಯಗೋಪುರ ಲೋಕಾರ್ಪಣೆ ನಾಳೆ: ಬುಧವಾರ  ಬೆಳಿಗ್ಯೆ ಹತ್ತು  ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿಜಯಗೋಪುರ ಲೋಕಾರ್ಪಣೆ ಮಾಡುವರು.
ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀವರ್ಚನ ನೀಡುವರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಭಾಶಂಸನೆ ಮಾಡುವರು. ಸಂಜೆ ಆರು ಗಂಟೆಗೆ ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸುವರು.

ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಶೀರ್ವಚನ ನೀಡುವರು.

You may also like