ಮಧ್ಯಪ್ರದೇಶ ಗ್ವಾಲಿಯರ್ನ ಹೈಕೋರ್ಟ್ನಲ್ಲಿ ಅಚ್ಚರಿಯ ಪ್ರಕರಣವೊಂದು ಬಂದಿದೆ. ಇಬ್ಬರು ಸಹೋದರಿಯರು ಗಂಡಂದಿರನ್ನು ವಿನಿಮಿಯ ಮಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಿಡ್ನ್ಯಾಪ್ ಕೇಸ್ನಿಂದ ಆರಂಭವಾದ ಈ ಪ್ರಕರಣ ನಂತರ ಗಂಡಂದಿರ ಅದಲು-ಬದಲಿನವರೆಗೆ ಬಂದು ನಿಂತಿದೆ. ಇದು ಖುದ್ದು ನ್ಯಾಯಾಲಯವನ್ನೇ ಅಚ್ಚರಿಗೆ ತಳ್ಳಿದೆ. ತಮ್ಮ ತಮ್ಮ ಪತಿಯ ಜೊತೆ ತಾವು ಸುಖವಾಗಿ ಇಲ್ಲ ಎನ್ನುವ ಕಾರಣಕೊಟ್ಟಿರುವ ಸಹೋದರಿಯರು ಪತಿಯಂದಿರ ಬದಲು ಮಾಡುವ ಕೋರಿಕೆಯನ್ನು ನೀಡಿದ್ದಾರೆ.


ದಾತಿಯ ಮೂಲದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು, ಹೆಂಡತಿಯ ಅಕ್ಕನ ಗಂಡ ಮಾಯಾರಾಮ್ ಕಿಡ್ನ್ಯಾಪ್ ಮಾಡಿದ್ದಾನೆ ಎನ್ನುವ ದೂರು ದಾಖಲು ಮಾಡಿದ್ದ. ಪೊಲೀಸರು ಅವನ ಪತ್ನಿಯನ್ನು ಹುಡುಕಲು ವಿಫಲವಾದ ಹಿನ್ನೆಲೆಯಲ್ಲಿ, ಆಕೆಯನ್ನು ಹುಡುಕಿಕೊಡುವಂತೆ ಕೋರಿ ಪತಿ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.
ಪೊಲೀಸರು ಅದರಂತೆ ಆತನ ಪತ್ನಿಯನ್ನು ಕೋರ್ಟ್ಗೆ ಹಾಜರುಪಡಿಸಿದರು. ಅಲ್ಲಿಯೇ ನಡೆದಿದೆ ದೊಡ್ಡ ಡ್ರಾಮಾ. ವಿಚಾರಣೆಯಲ್ಲಿ ಆ ಪತ್ನಿ ನನ್ನ ಅಕ್ಕನ ಗಂಡ ನನ್ನನ್ನು ಕಿಡ್ನ್ಯಾಪ್ ಮಾಡಲಿಲ್ಲ. ನಾನೇ ಸ್ವಂತ ಇಚ್ಛೆಯಿಂದ ಹೋಗಿರುವುದಾಗಿ ಹೇಳಿದ್ದು, ನನ್ನ ಗಂಡನ ಜೊತೆ ನನಗೆ ಸುಖವಿಲ್ಲ. ಆತನಿಗೆ ಡಿವೋರ್ಸ್ ಕೋರಿ ಅರ್ಜಿ ಹಾಕಿದ್ದೇನೆ ಎಂದು ಹೇಳಿದ್ದಾಳೆ.
ಮಾಯಾರಾವ್ ಪತ್ನಿ ಅರ್ಥಾತ್ ಓಡಿಹೋಗಿರುವ ಈ ಪತ್ನಿಯ ಅಕ್ಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ನನ್ನ ಗಂಡನ ಜೊತೆ ನನ್ನ ತಂಗಿ ನೆಲೆಸುತ್ತಿದ್ದಾಳೆ ಎನ್ನುವುದಕ್ಕೆ ಅವಳಿಗೆ ಬೇಸರವಿಲ್ಲ. ಅವಳು ಬಯಸಿದರೆ ನನ್ನ ಗಂಡನ ಜೊತೆ ಇರಬಹುದು, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾಳೆ. ಇದು ಇಷ್ಟಕ್ಕೆ ಮುಗಿಯಲಿಲ್ಲ, ನನ್ನ ತಂಗಿ ನನ್ನ ಗಂಡನ ಜೊತೆ ವಾಸಿಸಲು ಇಚ್ಛೆಪಟ್ಟರೆ ನನಗೆ ಸಮಸ್ಯೆ ಇಲ್ಲ, ನಾನು ಅವಳ ಗಂಡನ ಜೊತೆ ನೆಲೆಸುತ್ತೇನೆ. ಇದಕ್ಕೆ ಅನುಮತಿ ನೀಡಿ ಎಂದು ಕೋರ್ಟಗೆ ಕೋರಿಕೆ ನೀಡಿದ್ದಾಳೆ.
ಇಬ್ಬರೂ ಮಹಿಳೆಯರಿಗೆ ಮಕ್ಕಳಿದ್ದಾರೆ, ಇವರಿಬ್ಬರ ಹೇಳಿಕೆಯನ್ನು ಕೇಳಿದ ನ್ಯಾಯಾಲಯವು, ಇಬ್ಬರೂ ಮಹಿಳೆಯರು ವಯಸ್ಕರು ಮತ್ತು ಅವರು ತಮ್ಮ ಸ್ವಂತ ಆಯ್ಕೆಯ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಗಮನಿಸಿ ಹೇಬಿಯಸ್ ಕಾರ್ಪಸ್ ಅರ್ಜಿ ವಜಾ ಮಾಡಿತು. ಈ ಪ್ರಕರಣ ಅಪಹರಣವನ್ನು ಒಳಗೊಂಡಿಲ್ಲ ಮತ್ತು ಇದು ವೈಯಕ್ತಿಕ ಕೌಟುಂಬಿಕ ವಿಷಯವಾಗಿದೆ, ಕ್ರಿಮಿನಲ್ ವಿಷಯವಲ್ಲ ಎಂದು ತೀರ್ಪು ನೀಡಿದೆ.

