

ಬೆಂಗಳೂರು: ಆರೋಗ್ಯ ಇಲಾಖೆಯ ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕನ್ನಡದ ಜೊತೆಗೆ ಉರ್ದು ಭಾಷೆಯನ್ನು ಬಳಕೆ ಮಾಡಿರುವುದು ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇತ್ತೀಚೆಗೆ ಆಯೋಜನೆ ಮಾಡಿದ್ದ ಅಧಿಕೃತ ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆಯಲ್ಲಿ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿಯೊಂದಿಗೆ ಉರ್ದು ಭಾಷೆಯನ್ನೂ ಬಳಕೆ ಮಾಡಿದ್ದು, ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ಸರ್ಕಾರ ಕನ್ನಡ ಮರೆತುಬಿಟ್ರಾ?
ಯಾಕೆ ಉರ್ದುವಿನಲ್ಲಿ ಪತ್ರ?
ಕರ್ನಾಟಕದ ಆಡಳಿತ ಭಾಷೆ ಕನ್ನಡವೇ ಹೊರೆತು ಉಳಿದ್ಯಾವ ಭಾಷೆಗಳಲ್ಲ.
ನಾವು ಯಾವ ಭಾಷೆಯ ವಿರೋಧಿಗಳಲ್ಲ ಆದ್ರೆ ಈ ರೀತಿ ನಮ್ಮ ಮೇಲೆ ಹೇರಿಕೆ ಮಾಡೋದು ನಾವು ಖಂಡಿಸುತ್ತೇವೆ.
ಕೂಡಲೇ ಇದನ್ನ ಹಿಂಪಡೆದು ಕನ್ನಡ ಪತ್ರಕ್ಕಾಗಿ ಒತ್ತಾಯಿಸುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಆಡಳಿತ ಭಾಷೆ ಕನ್ನಡವನ್ನೇ ನಿರ್ಲಕ್ಷ್ಯ ಮಾಡಿ, ರಾಜ್ಯ ಕಾಂಗ್ರೆಸ್ ಸರಕಾರ ಮಾಡಿದ ಈ ನಡೆಯನ್ನು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಂಡನೆ ಮಾಡಿದ್ದಾರೆ.
ʼಕರ್ನಾಟಕದಲ್ಲಿರುವ ಮುಸ್ಲಿಮರಿಗೆ ಕನ್ನಡ ಬರೋದಿಲ್ವಾ? ಕರ್ನಾಟಕದಲ್ಲಿರುವ ಮುಸ್ಲಿಮರಿಗೆ ಇಂಗ್ಲಿಷ್ ಬರುವುದಿಲ್ವ? ಮುಸ್ಲಿಮರ ಮನವೊಲಿಕೆಗಾಗಿ ಈ ಕುತಂತ್ರ ಮಾಡಿದ್ದಾರೆ ಎಂದು ಮುತಾಲಿಕ್ ಕಿಡಿ ಕಾರಿದ್ದಾರೆ.
ಸಚಿವ ದಿನೇಶ್ ಗುಂಡುರಾವ್ ಸಮರ್ಥನೆ
ಸರ್ಕಾರಿ ಆಹ್ವಾನ ಪತ್ರಿಕೆಯಲ್ಲಿ ಉರ್ದು ಉಲ್ಲೇಖ ವಿಚಾರ ಹೌದು. ಉರ್ದು ಒಂದು ಭಾಷೆ ತಾನೆ? ಕನ್ನಡ ಇಂಗ್ಲಿಷ್, ಉರ್ದು, ಹಿಂದಿಯಲ್ಲೂ ಆಗಿದೆ ಹಿಂದಿ ನಮ್ಮ ಭಾಷೆ ತಾನೇ? ಉರ್ದು ಜನ ಇದ್ದಾರೆ, ಉರ್ದು ಪತ್ರಿಕೆಯಲ್ಲೂ ಜಾಹೀರಾತು ನೀಡಿದ್ದೇವೆ, ಉರ್ದು ಓದುವವರು ಇದ್ದಾರೆ, ಉರ್ದು ಪತ್ರಿಕೆ ಇದ್ದಾವೆ, ಬೆಂಗಳೂರಲ್ಲಿ ಇದ್ದಾರೆ, ಕರ್ನಾಟಕದಲ್ಲಿ ಇದ್ದಾರೆ ಏನು ತಪ್ಪಿದೆ ಎಂದು ಸಮರ್ಥಿಸಿಕೊಂಡರು.
ಇದರಲ್ಲಿ ಓಲೈಕೆ ಏನಿದೆ ಎಂದು ಮರುಪ್ರಶ್ನಿಸಿದ ಅವರು, ಹಿಂದಿಯಲ್ಲಿ ಬರೆದ್ರೆ ಓಲೈಕೆನಾ? ಇಂಗ್ಲಿಷ್ ಕೊಟ್ಟರೆ ಇಂಗ್ಲಿಷ್ ಓಲೈಕೆನಾ? ಎಂದರು. ಜಾಹೀರಾತು ಕೋಡೋಕೆ ಕಾರಣ ಮಾಹಿತಿ ಇರಲಿ ಅಂತ ಕೊಟ್ಟಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡರು.
