

ಬೆಂಗಳೂರು: ಆರ್ಎಸ್ಎಸ್ ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು. ನಾವು ನೆರಳಿದ ಜೊತೆ ಹೋರಾಟ ಮಾಡಬಾರದು. ದೆವ್ವದ ಜೊತೆ ಹೋರಾಟ ಮಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮೂರು ಮಕ್ಕಳನ್ನು ಹೆರಬೇಕು ಎನ್ನುತ್ತಾರೆ. ಆದರೆ ಅವರು ಮಾತ್ರ ಬ್ರಹ್ಮಚಾರಿಗಳಾಗಿ ಇರುತ್ತಾರೆ. ಮನುವಾದ ಪ್ರತಿಪಾದನೆ ಮಾಡೋರು ಸಂವಿಧಾನ ಎತ್ತಿ ಹಿಡಿತಾರಾ ಎಂದು ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಅಂಬೇಡ್ಕರ್ ಹೆಸರು ಹೇಳೋದು ಅಮಿತ್ ಶಾ ಅವರಿಗೆ ಫ್ಯಾಷನ್ ಆಗಿದೆ. 57 ವರ್ಷ ಆದರೂ ಆರ್ಎಸ್ಎಸ್ ನಮ್ಮ ದೇಶದ ಬಾವುಟವನ್ನು ಹಾರಿಸಲೇ ಇಲ್ಲ. ಅವರಿಗೆ ಫಂಡಿಂಗ್ ಹೇಗೆ ಬರುತ್ತದೆ ಎಂದು ಕೇಳಿದಕ್ಕೆ ಉತ್ತರ ಇಲ್ಲ. ಕೊನೆಗೆ ಉತ್ತರ ಕೊಡಲು ಮೋಹನ್ ಭಾಗವರ್ ಅವರೇ ಬೆಂಗಳೂರಿಗೆ ಬಂದರು. ಆರ್ಎಸ್ಎಸ್ ರಿಜಿಸ್ಟರ್ ಮಾಡುವ ಅಗತ್ಯವೇ ಇಲ್ಲ ಎಂದು ಹೇಳುತ್ತಾರೆ. ಇವತ್ತಲ್ಲ ನಾಳೆ ಆರ್ಎಸ್ಎಸ್ ರಿಜಿಸ್ಟರ್ ಆಗಲೇಬೇಕು, ಇಲ್ಲ ನಾನೇ ಮಾಡಿಸ್ತೀನಿ ಎಂದು ಹೇಳಿದರು.
ಬಿಜೆಪಿಯವರ ನಡೆ ನುಡಿಗೂ ಬಹಳ ವ್ಯತ್ಯಾಸವಿದೆ. ರಾಜಕೀಯ ನಾಯಕರ ಮಕ್ಕಳು ಧರ್ಮದ ಹೋರಾಟದಲ್ಲಿ ಇಲ್ಲ. ಯಡಿಯೂರಪ್ಪ, ಅಶೋಕ್ ಮಕ್ಕಳು ಏನು ಮಾಡುತ್ತಿದ್ದಾರೆ. ನಮ್ಮ ಮಗ ವಿದೇಶದಲ್ಲಿ ಓದುತ್ತಿದ್ದರು, ನಿಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು ಎಂದು ನಾನು ಹೇಳೋದು. ನಾವು ಹಿಂದೊಂದು ಮುಂದೊಂದು ಮಾತನಾಡಲ್ಲ ಎಂದು ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.













