

RBI: ಭಾರತದಲ್ಲಿ ಚಲಾವಣೆಯಲ್ಲಿರುವ ನೋಟುಗಳ ಮೇಲೆ ಇರುವ ಗಾಂಧಿ ಫೋಟೋವನ್ನು ಬದಲಾವಣೆ ಮಾಡಬೇಕು ಎಂಬ ಚರ್ಚೆ ಆಗಾಗ ದೇಶದಲ್ಲಿ ಉದ್ಭವ ಗೊಳ್ಳುತ್ತದೆ. ಇದೀಗ ಈ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆರ್ಬಿಐ ನಿಯಮಗಳು ಏನು ಹೇಳುತ್ತವೆ? ಅಂತಿಮ ನಿರ್ಧಾರ ಯಾರ ಕೈಯಲ್ಲಿ ಇದೆ?
ಯಸ್, ಭಾರತೀಯ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿಯವರ ಫೋಟೋ ಬದಲಾವಣೆ ಕುರಿತು ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ರಾಜಕೀಯ ವಲಯಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕಾಲಕಾಲಕ್ಕೆ ರವೀಂದ್ರನಾಥ ಟ್ಯಾಗೋರ್, ನೇತಾಜಿ ಸುಭಾಷ್ ಚಂದ್ರ ಬೋಸ್, ಛತ್ರಪತಿ ಶಿವಾಜಿ ಮಹಾರಾಜ್, ರಾಣಿ ಲಕ್ಷ್ಮೀಬಾಯಿ ಮುಂತಾದವರ ಚಿತ್ರಗಳನ್ನು ಸೇರಿಸುವ ಬೇಡಿಕೆಗಳು ಕೇಳಿಬಂದಿವೆ. ಆದರೆ ಇವುಗಳು ಜನಾಭಿಪ್ರಾಯದ ಮಟ್ಟದಲ್ಲೇ ಉಳಿದಿದ್ದು, ಯಾವುದೇ ಅಧಿಕೃತ ಪ್ರಸ್ತಾವನೆಯಾಗಿ ರೂಪುಗೊಂಡಿಲ್ಲ. ಈ ಎಲ್ಲಾ ಚರ್ಚೆಗಳ ನಡುವೆಯೂ ಸರ್ಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (RBI) ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಭಾರತೀಯ ಕರೆನ್ಸಿ ನೋಟುಗಳ ವಿನ್ಯಾಸ ಮತ್ತು ಜಾರಿಗೊಳಿಸುವ ಅಧಿಕಾರ ಸಂಪೂರ್ಣವಾಗಿ RBIಗೆ ಸೇರಿದೆ. 1934ರ RBI ಕಾಯ್ದೆಯ ಸೆಕ್ಷನ್ 22 ಪ್ರಕಾರ, ದೇಶದಲ್ಲಿ ಕರೆನ್ಸಿ ನೋಟುಗಳನ್ನು ಹೊರತರುವ ಏಕೈಕ ಅಧಿಕಾರ RBIಗೆ ಮಾತ್ರ ಇದೆ. ಅಂದರೆ ನೋಟುಗಳ ವಿನ್ಯಾಸ, ಭದ್ರತಾ ವೈಶಿಷ್ಟ್ಯಗಳು ಮತ್ತು ಚಿತ್ರಗಳನ್ನು ಬದಲಾಯಿಸುವ ಪ್ರಕ್ರಿಯೆ RBI ವ್ಯಾಪ್ತಿಯಲ್ಲೇ ಆರಂಭವಾಗುತ್ತದೆ. ಆದರೆ ಇದು ಅಂತಿಮ ಹಂತವಲ್ಲ. RBI ಕಾಯ್ದೆಯ ಸೆಕ್ಷನ್ 25 ಪ್ರಕಾರ, ನೋಟುಗಳ ವಿನ್ಯಾಸ, ರೂಪ, ವಸ್ತು ಮತ್ತು ಇತರ ತಾಂತ್ರಿಕ ಅಂಶಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಾಗುತ್ತದೆ. ಹೀಗಾಗಿ, ಮಹಾತ್ಮ ಗಾಂಧಿಯವರ ಫೋಟೋ ಬದಲಾಯಿಸುವ ಬಗ್ಗೆ ಯಾವಾಗಲಾದರೂ ಪ್ರಸ್ತಾವನೆ ಬಂದರೂ, ಮೊದಲು RBI ತಾಂತ್ರಿಕವಾಗಿ ಪರಿಶೀಲಿಸಿ ಶಿಫಾರಸು ಮಾಡಬೇಕು. ನಂತರ ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು.
ಒಟ್ಟಾರೆ, ಮಹಾತ್ಮ ಗಾಂಧಿಯವರ ಫೋಟೋವನ್ನು ಕರೆನ್ಸಿ ನೋಟುಗಳಿಂದ ತೆಗೆದುಹಾಕುವ ಅಥವಾ ಬದಲಾಯಿಸುವ ಬಗ್ಗೆ ಪ್ರಸ್ತುತ ಯಾವುದೇ ನಿರ್ಧಾರ ಇಲ್ಲ. ಇದು ಕೇವಲ ಚರ್ಚೆಗಳ ಮಟ್ಟದಲ್ಲೇ ಇರುವ ವಿಷಯ. ಈ ಪ್ರಕ್ರಿಯೆ ಸರಳವಲ್ಲ; ಭದ್ರತೆ, ಮುದ್ರಣ ವೆಚ್ಚ, ಸಾರ್ವಜನಿಕ ಭಾವನೆಗಳು ಸೇರಿದಂತೆ ಅನೇಕ ಅಂಶಗಳನ್ನು ಪರಿಗಣಿಸಲಾಗುತ್ತದೆ.













