

ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕೆಲ ಷರತ್ತುಗಳನ್ನು ಹಾಕಿದೆ. ಇದರಲ್ಲಿ ಕೆಲವು ಬೇಡಿಕೆಗಳನ್ನು ಐಸಿಸಿ ತಿರಸ್ಕರಿಸಿದೆ. ಐಸಿಸಿ ಅಡಿಯಲ್ಲಿ ಬರದ ವಿಷಯಗಳ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಆದರೂ ಕೆಲವೊಂದು ಬೇಡಿಕೆಗಳನ್ನು ಒಪ್ಪಿದೆ.
ಪಾಕಿಸ್ತಾನದ ಬೇಡಿಕೆಗಳು ಮತ್ತು ಅವುಗಳ ಬಗ್ಗೆ ಐಸಿಸಿ ಏನು ಹೇಳಿದೆ:
ಬೇಡಿಕೆ 1: ಬಾಂಗ್ಲಾದೇಶಕ್ಕೆ ಯಾವುದೇ ದಂಡ ವಿಧಿಸಬಾರದು: ಟಿ 20 ವಿಶ್ವಕಪ್ ನಿಂದ ಹಿಂದೆ ಸರಿದಿರುವ ಬಾಂಗ್ಲಾದೇಶದ ಮೇಲೆ ಯಾವುದೇ ನಿರ್ಬಂಧ ಹೇರಬಾರದು. ಅದರಂತೆ ತನ್ನ ಸಂಪೂರ್ಣ ಐಸಿಸಿ ಆದಾಯದ ಪಾಲನ್ನು ಪಡೆಯಬೇಕು ಎಂದು ಪಿಸಿಬಿ ಒತ್ತಾಯಿಸಿತು.
ಐಸಿಸಿಯ ಪ್ರತಿಕ್ರಿಯೆ: ಇದು ಈಗಾಗಲೇ ತನ್ನ ನಿರ್ಧಾರವಾಗಿದೆ – ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ದಂಡ ವಿಧಿಸಲಾಗುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಬೇಡಿಕೆ 2: ಬಾಂಗ್ಲಾದೇಶಕ್ಕೆ ಪರಿಹಾರಾತ್ಮಕ ಐಸಿಸಿ ಕಾರ್ಯಕ್ರಮ: ಮುಂದಿನ ಚಕ್ರದಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚುವರಿ ಐಸಿಸಿ ಕಾರ್ಯಕ್ರಮವನ್ನು ಪಿಸಿಬಿ ಕೋರಿತು.
ಐಸಿಸಿಯ ಪ್ರತಿಕ್ರಿಯೆ: ಮುಂದಿನ ಚಕ್ರದಲ್ಲಿ ಅಂಡರ್-19 ವಿಶ್ವಕಪ್ ಅನ್ನು ಪರಿಗಣಿಸಲಾಗುತ್ತಿದೆ.
ಬೇಡಿಕೆ 3: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿಯನ್ನು ಸುಗಮಗೊಳಿಸಲು ಪಿಸಿಬಿ ಆಗ್ರಹಿಸಿದೆ. ಇದರಲ್ಲಿ ಐಸಿಸಿ ಮುಖ್ಯ ಪಾತ್ರವಹಿಸಬೇಕು.
ಐಸಿಸಿಯ ಪ್ರತಿಕ್ರಿಯೆ: ವಿನಂತಿಯನ್ನು ತಿರಸ್ಕರಿಸಲಾಯಿತು, ಐಸಿಸಿ ದ್ವಿಪಕ್ಷೀಯ ಸರಣಿಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಚಕ್ರದಲ್ಲಿ ಸೇರಿದಂತೆ ತನ್ನ ಆದೇಶದ ಹೊರಗಿದೆ ಎಂದು ಹೇಳಿದೆ.
ಬೇಡಿಕೆ 4: ಭಾರತ-ಪಾಕಿಸ್ತಾನ-ಬಾಂಗ್ಲಾದೇಶ ತ್ರಿಕೋನ ಸರಣಿ – ಪಿಸಿಬಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಒಳಗೊಂಡ ತ್ರಿಕೋನ ಸರಣಿಯನ್ನು ಪ್ರಸ್ತಾಪಿಸಿದೆ.
ಐಸಿಸಿಯ ಪ್ರತಿಕ್ರಿಯೆ: ನ್ಯಾಯವ್ಯಾಪ್ತಿಯ ಕೊರತೆಯನ್ನು ಉಲ್ಲೇಖಿಸಿ ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು.
ಬೇಡಿಕೆ 5: 2026 ರಲ್ಲಿ ಭಾರತದ ಬಾಂಗ್ಲಾದೇಶ ಪ್ರವಾಸ – ಬಾಂಗ್ಲಾದೇಶದ ಭಾರತದ ಪ್ರವಾಸವನ್ನು ಖಚಿತಪಡಿಸಿಕೊಳ್ಳಲು ಪಿಸಿಬಿ ಐಸಿಸಿಯನ್ನು ಆಗ್ರಹಿಸಿದೆ.
ಐಸಿಸಿಯ ಪ್ರತಿಕ್ರಿಯೆ: ಪ್ರವಾಸಗಳನ್ನು ದ್ವಿಪಕ್ಷೀಯವಾಗಿ ನಿರ್ಧರಿಸಲಾಗುತ್ತದೆ ಎಂದು ಪುನರುಚ್ಚರಿಸಿತು, ಅದು ಮಧ್ಯಪ್ರವೇಶಿಸಲು ನಿರಾಕರಿಸಿತು.
ಬೇಡಿಕೆ 6: ಆದಾಯ ಹೆಚ್ಚಳ: ಐಸಿಸಿಯಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯ ಹೆಚ್ಚಳ ಮಾಡಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ. ಈ ಬೇಡಿಕೆಗೆ ಒಪ್ಪಿದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಬೇಡಿಕೆ 7: ಹ್ಯಾಂಡ್ಶೇಕ್: ಕ್ರೀಡೆಯಲ್ಲಿ ರಾಜಕೀಯ ಇರಬಾರದು. ಹ್ಯಾಂಡ್ಶೇಕ್ ಪ್ರೋಟೋಕಾಲ್ ಜಾರಿ ಮಾಡಬೇಕು. ಇದನ್ನು ಕಡ್ಡಾಯ ಮಾಡಲು ಪಿಸಿಬಿ ಬೇಡಿಕೆಯಿಟ್ಟಿದೆ.
ಬೇಡಿಕೆ 8 : ಐಸಿಸಿ ಟೂರ್ನಿ ಆತಿಥ್ಯದ ಹಕ್ಕು: ಐಸಿಸಿ ಬಾಂಗ್ಲಾದೇಶಕ್ಕೆ ಪರಿಹಾರವಾಗಿ ಬೇರೊಂದು ಪಂದ್ಯಾವಳಿಯ ಆತಿಥ್ಯ ನೀಡಬೇಕು ಎಂದು ಪಿಸಿಬಿ -ಬಿಸಿಬಿ ಆಗ್ರಹಿಸಿದೆ.
ಅಧ್ಯಕ್ಷ ಮೊಹ್ಸಿನ್ ನಖ್ವಿ ಪಾಕಿಸ್ತಾನದ ಪ್ರಧಾನಿಯೊಂದಿಗೆ ಸಮಾಲೋಚಿಸಲು ಪಿಸಿಬಿಗೆ 24 ಗಂಟೆಗಳ ಸಮಯ ನೀಡಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಸಭೆ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ, ಮುಂದಿನ 24 ಗಂಟೆಗಳಲ್ಲಿ ಐಸಿಸಿ ಅಧಿಕೃತ ಪ್ರಕಟಣೆಯ ಸಾಧ್ಯತೆಯಿದೆ.
ಪಂದ್ಯ ಬಹಿಷ್ಕಾರಕ್ಕೆ ಕಾರಣವೇನು?
ಟಿ 20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿತ್ತು.













