

ಮುಂಬರುವ ವಿಧಾನಸಭಾ ಚುನಾವಣೆಯನ್ನು ನಿಗಾದಲ್ಲಿ ಇರಿಸಿಕೊಂಡು ಟಿಎಂಸಿ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರಿಗೆ ನೀಡುವ ಮಾಸಿಕ ಭತ್ಯೆಯನ್ನು (ಲಕ್ಷ್ಮಿರ್ ಭಂಡಾರ್) 500 ರೂ. ಹೆಚ್ಚಳ ಮಾಡಿದ್ದಾರೆ. ಈ ಮೂಲಕ ಮಹಿಳೆಯರ ಮಾಸಿಕ ಭತ್ಯೆ 1500 ರೂ.ಗೆ ಏರಿಕೆಯಾದಂತಾಗಿದೆ. ಇದಲ್ಲದೇ, 21 ರಿಂದ 41 ವರ್ಷದ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಭತ್ಯೆ ನೀಡುವ ಭರವಸೆಯನ್ನು ಘೋಷಿಸಿದ್ದಾರೆ. ಆದರೆ, ನಿರುದ್ಯೋಗ ಜಾರಿ ಮಾಡಬೇಕಾದಲ್ಲಿ, ಟಿಎಂಸಿ ಪುನಃ ಅಧಿ ಕಾರಕ್ಕೆ ಬರಬೇಕು ಎಂಬ ಷರತ್ತನ್ನು ಮಮತಾ ಇರಿಸಿದ್ದಾರೆ.
ಆ.15 ರಿಂದ ‘ಬಾಂಗ್ಲಾರ್ ಯುವ ಸಾಥಿ’ ಹೆಸರಲ್ಲಿ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಜಾರಿ ಮಾಡುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಟಿಎಂಸಿಗೆ ಯುವಕರ ಮತಗಳನ್ನು ಸೆಳೆಯುವ ಮೊದಲ ಚುನಾವಣಾ ದಾಳವನ್ನು ದೀದಿ ಉರುಳಿಸಿದ್ದಾರೆ.
ಪಶ್ಚಿಮ ಬಂಗಾಳದ 2026-27ನೇ ಹಣಕಾಸು ವರ್ಷದ ಬಜೆಟ್ ಮಂಡನೆ ವೇಳೆ ಹೊಸದಾದ ಭತ್ಯೆ ಕಾರಿ ಯೋಜನೆಗಳನ್ನು ಘೋಷಿಸಲಾಗಿದೆ. ಮತದಾರರಿಗೆ ಟಿಎಂಸಿ ಅಮಿಷವೊಡ್ಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದ್ದು, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರು, ಏಪ್ರಿಲ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಕಾರ ರಚನೆ ಮಾಡುವುದು ಖಚಿತ. ಹಾಗಾದಲ್ಲಿ ಜೂನ್ 1 ರಿಂದ ಮಹಿಳೆಯರಿಗೆ ಮಾಸಿಕ 3000 ರೂ. ಭತ್ಯೆ ನೀಡಲಾಗುವುದು. ಕೇಂದ್ರ ಸರಕಾರವು ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದೆ ಎಂದಿದ್ದಾರೆ.













