

Telangana : ದೇವಸ್ಥಾನದ ಅರ್ಚಕನೊಬ್ಬ ದೇವರ ಪೂಜೆಗಾಗಿ ಬೆಳೆದ ಚೆಂಡು ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆದು, ಪೊಲೀಸರ ಬಲೆಗೆ ಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಮಂಡಲದ ಪಂಚಗಾಂ ಗ್ರಾಮದ ದೇವಸ್ಥಾನವೊಂದರಲ್ಲಿ ಈ ಕೃಪ್ಯ ನಡೆದಿದೆ. ಬಂಧಿತ ಅರ್ಚಕನನ್ನು ಅವುತಿ ನಾಗಯ್ಯ (48) ಎಂದು ಗುರುತಿಸಲಾಗಿದೆ. ಈತ ದೇವಸ್ಥಾನದ ಆವರಣದಲ್ಲಿ ದೊಡ್ಡ ಮಟ್ಟದ ಹೂವಿನ ತೋಟವನ್ನು ಹೊಂದಿದ್ದು, ಪೂಜೆಗೆ ಬೇಕಾದ ಚೆಂಡು ಹೂವುಗಳನ್ನು ಬೆಳೆಸುತ್ತಿರುವುದಾಗಿ ಬಿಂಬಿಸಿಕೊಂಡಿದ್ದ. ಆದರೆ, ಯಾರೂ ಸಂಶಯ ಪಡದ ರೀತಿಯಲ್ಲಿ ಆ ಗಿಡಗಳ ಸಾಲುಗಳ ಮಧ್ಯೆ ನೂರಾರು ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದ.
ಬಂಧಿತ ನಾಗಯ್ಯ ಗ್ರಾಮಸ್ಥರ ಪಾಲಿಗೆ ಒಬ್ಬ ಆಧ್ಯಾತ್ಮಿಕ ಗುರುವಾಗಿ ಗುರುತಿಸಿಕೊಂಡಿದ್ದ. ಪೂಜೆ-ಪುನಸ್ಕಾರಗಳ ಮೂಲಕ ಜನರ ವಿಶ್ವಾಸ ಗಳಿಸಿದ್ದ ಈತ, ಅದರ ಮರೆಯಲ್ಲೇ ಈ ದಂಧೆ ನಡೆಸುತ್ತಿದ್ದ. ಅರ್ಚಕನ ಈ ಕಳ್ಳಾಟದ ಬಗ್ಗೆ ರಹಸ್ಯ ಮಾಹಿತಿ ಪಡೆದ ಎಕ್ಸೈಸ್ ಮತ್ತು ಡಿಟಿಎಫ್ (DTF) ತಂಡವು ಸೋಮವಾರ ದೇವಸ್ಥಾನದ ಮೇಲೆ ದಾಳಿ ನಡೆಸಿತು. ದಾಳಿಯ ವೇಳೆ 685 ಹಸಿ ಗಾಂಜಾ ಗಿಡಗಳು, ಸುಮಾರು 18 ಕೆಜಿ ಒಣ ಗಾಂಜಾ, 1 ಕೆಜಿ ಗಾಂಜಾ ಬೀಜಗಳು ಮುತ್ತು 30,000 ನಗದು ಹಣ ಮತ್ತು ಡಿಜಿಟಲ್ ತೂಕದ ಯಂತ್ರ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.













