

ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ಎದುರು ನಿರ್ಮಿತ ಗುಡಿಸಲು ತೆರವುಗೊಳಿಸುವಂತೆ ಎಸ್ಡಿಪಿಐ ವತಿಯಿಂದ ಬೆಳ್ತಂಗಡಿ ತಹಸೀಲ್ದಾರರಿಗೆ ಹಾಗೂ ಕಾರ್ಯನಿರ್ವಹಣಾ ಅಧಿಕಾರಿಗಳ ಭೇಟಿ ಮಾಡಿ ಜ. 29 ರಂದು ಮನವಿ ಸಲ್ಲಿಸಲಾಯಿತು. ರಾಜ್ಯಾದ್ಯಂತ ಜೆಜೆಎಂ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಹಲವು ದಿನಗಳಿಂದ ಗುಡಿಸಲುಗಳನ್ನು ನಿರ್ಮಿಸಿ ನೆಲೆಸಿದ್ದು, ಇದರಿಂದ ಪಂಚಾಯತ್ ಆವರಣದ ಶುಚಿತ್ವ ಹದಗೆಟ್ಟು ಗ್ರಾಮಸ್ಥರು ಹಾಗೂ ಪಂಚಾಯತ್ಗೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ವಿಷಯವನ್ನು ಈಗಾಗಲೇ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಮೂರು ದಿನಗಳೊಳಗೆ ಗುಡಿಸಲುಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಆರು ದಿನಗಳು ಕಳೆದರೂ ಕೂಡ ಗುಡಿಸಲುಗಳನ್ನು ತೆರವುಗೊಳಿಸಲಾಗಿಲ್ಲ. ಗ್ರಾಮ ಸಭೆಯ ನಿರ್ಣಯದಂತೆ, ಗುಡಿಸಲುಗಳನ್ನು ತಕ್ಷಣ ತೆರವುಗೊಳಿಸಿ ಗ್ರಾಮ ಪಂಚಾಯತ್ ಆವರಣವನ್ನು ಶುಚಿಗೊಳಿಸಬೇಕೆಂದು ಎಸ್ಡಿಪಿಐ ವತಿಯಿಂದ ಬೆಳ್ತಂಗಡಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ಅಕ್ಟರ್ ಬೆಳ್ತಂಗಡಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಸದಸ್ಯ ಹನೀಫ್ ಪುಂಜಾಲಕಟ್ಟೆ, ಗ್ರಾಮ ಪಂಚಾಯತ್ ಸದಸ್ಯ ಸಿದ್ದೀಕ್ ಯು.ಪಿ, ಚಾರ್ಮಾಡಿ ಬ್ರಾಂಚ್ ಅಧ್ಯಕ್ಷ ಸಫ್ಘಾನ್ ಕಕ್ಕಿಂಜೆ ಹಾಗೂ ಅಶ್ರಫ್ ಚಾರ್ಮಾಡಿ ಉಪಸ್ಥಿತರಿದ್ದರು.













