ಸವಣೂರು : ಜಮೀನನ್ನು ಲೀಸಿಗೆ ಕೊಡುವಂತೆ ಕೊಲೆ ಬೆದರಿಕೆಯೊಡ್ಡಿ ಹಿರಿಯ ನಾಗರಿಕೆಗೆ ಹಲ್ಲೆ ಆರೋಪ – ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಗೆ ನ್ಯಾಯಾಲಯ ಆದೇಶ

Kadaba : 2 ತಿಂಗಳ ಹಿಂದೆ ಕಡಬ(Kadaba) ತಾಲೂಕಿನ ಸವಣೂರು ಗ್ರಾಮದ ಸೋಂಪಾಡಿ ನಿವಾಸಿ 81 ವರ್ಷ ಪ್ರಾಯದ ಹಿರಿಯ ನಾಗರಿಕೆಯೊಬ್ಬರ ಸವಣೂರು ಸಮೀಪದ ಪುಣ್ಚಪ್ಪಾಡಿಲ್ಲಿರುವ ಜಮೀನನ್ನು ಲೀಸಿಗೆ ಕೊಡುವಂತೆ ಕೊಲೆ ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರನ್ನು ವಿಚಾರಿಸಿದ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಬೆಳ್ಳಾರೆ ಪೊಲೀಸ್ ಠಾಣೆಗೆ ಆದೇಶ ನೀಡಿದೆ.

 

ಸವಣೂರು ಗ್ರಾಮದ ಸೋಂಪಾಡಿ ನಿವಾಸಿ ನಾಗರತ್ನಮ್ಮ (81ವ)ವರ ಪುಣ್ಚಪ್ಪಾಡಿ ಯಲ್ಲಿರುವ ಕೃಷಿ ಜಮೀನಿಗೆ ಮೇ .30ರಂದು ಕುರಿಯ ಗ್ರಾಮದ ದೇರ್ಕಜೆ ವೆಂಕಟ್ರಮಣ ಭಟ್, ಸವಣೂರು ಗ್ರಾಮದ ಪಣೆಮಜಲು ನಿವಾಸಿ ಜಾಫರ್, ಬಪ್ಪಳಿಗೆ ನಿವಾಸಿ ಸುಭಾಶ್ ರೈ ಅವರು ಅಕ್ರಮವಾಗಿ ಪ್ರವೇಶಿಸಿ ಈ ಜಮೀನನ್ನು ನಮಗೆ ಲೀಸಿಗೆ ಕೊಡಬೇಕೆಂದು ಹಿರಿಯ ನಾಗರಿಕೆ ನಾಗರತ್ನಮ್ಮ ಅವರಿಗೆ ಬೆದರಿಕೆಯೊಡ್ಡಿದಲ್ಲದೆ ಜಮೀನು ಕೊಡದಿದ್ದರೆ ನಿನ್ನ ಮಗಳನ್ನು ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದರು. ಆಗ ಹಿರಿಯ ನಾಗರಿಕೆಯ ಅಳಿಯ ಆಕ್ಷೇಪಿಸಿದಾಗ ಅವರಿಗೂ ಹಲ್ಲೆ ನಡೆಸಿ ಗೋಣಿಯಲ್ಲಿ ಕಟ್ಟಿಟ್ಟ ಸುಮಾರು 2 ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

 

ಆದರೆ ಬೆಳ್ಳಾರೆ ಠಾಣೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಘಟನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಬೆಳ್ಳಾರೆ ಪೊಲೀಸ್ ಠಾಣೆಗೆ ಆದೇಶ ನೀಡಿದೆ.

ಇದನ್ನೂ ಓದಿ : ಹುಚ್ಚು ಪ್ರೀತಿಗೆ ಬಿದ್ದ ಹುಡುಗ ಎದೆ ಕೂದಲಿನಿಂದ ದಿಂಬು ತಯಾರಿಸಿ ಪ್ರಿಯತಮೆಗೆ ಪಾರ್ಸಲ್ !

Comments are closed.