PM Modi: ಹಗರಣದ ‘ ಗ್ಯಾರಂಟಿ ‘ ಬೇಕಾ, ಬಿಜೆಪಿ ನಿಮಗೆ ಬೇಕಾ – ನೀವೇ ನಿರ್ಧರಿಸಿ ಎಂದು ಪ್ರತಿಪಕ್ಷಗಳ ಮೈತ್ರಿಗೆ ಪ್ರಧಾನಿ ಲೇವಡಿ !

latest news political news Decide for yourself whether you want scam 'guarantee' or BJP

PM Modi: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಂದಾಗಿನಿಂದ ‘ಗ್ಯಾರಂಟಿ ಭರವಸೆ’ಗಳು ದೇಶದಲ್ಲಿ ಸಂಚಲನ ಮೂಡಿಸಿದೆ. ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಅವರು ಗ್ಯಾರಂಟಿ ಯೋಜನೆಗಳು ಹಾಗೂ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

2024ರಲ್ಲಿ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಮಂಗಳವಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, “ಇದೀಗ ಹೊಸ ಪದ ಪ್ರಚಾರವಾಗುತ್ತಿದೆ. ಗ್ಯಾರಂಟಿ ಅಂತ ನೀವು ಕೇಳಿರಬಹುದು, ಪದೇ ಪದೇ ಗ್ಯಾರಂಟಿ ಅಂತಾರೆ. ಗ್ಯಾರಂಟಿ ಎಂದರೆ ಬೇರೆನೂ ಅಲ್ಲ, ಲಕ್ಷ, ಕೋಟಿ ರೂಪಾಯಿಗಳನ್ನು ನುಂಗಿ ಹಾಕಿದ ಭ್ರಷ್ಟಾಚಾರಕ್ಕೆ ಇರುವ ಇನ್ನೊಂದು ಹೆಸರು. ಕೆಲವು ದಿನಗಳ ಈ ಎಲ್ಲ ನಾಯಕರೂ ಒಟ್ಟಾಗಿ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳ ಇತಿಹಾಸ ನೋಡಿದರೆ ಅವರೆಲ್ಲ ಲಕ್ಷ ಲಕ್ಷ ಕೋಟಿ ರೂಪಾಯಿ ಮೌಲ್ಯದ ಹಗರಣದಲ್ಲಿ ಭಾಗಿಯಾದವರೇ ಆಗಿದ್ದಾರೆ. ಹಗರಣದಲ್ಲಿ ಕಾಂಗ್ರೆಸ್ಸೇ ಎತ್ತಿದ ಕೈ” ಎಂದು ವಿಪಕ್ಷ ನಾಯಕರ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜನರು ಮತ್ತೆ ಗ್ಯಾರಂಟಿಯ ಆಸೆಗಾಗಿ ವಿಪಕ್ಷಗಳ ಬೆನ್ನು ಹತ್ತಿ ಹೋದರೆ ವಿಪಕ್ಷವು 20 ಲಕ್ಷ ಕೋಟಿ ರೂ. ಮೌಲ್ಯದ ಹಗರಣ ‘ಗ್ಯಾರಂಟಿ’ ನೀಡುತ್ತದೆ. ಆದರೆ ಬಿಜೆಪಿ (BJP) ಮಾತ್ರ ಹಗರಣಕೋರರ ವಿರುದ್ಧ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುತ್ತದೆ. ‘ಬರೀ ಹಗರಣ ಮಾಡುವಲ್ಲಿ ಅನುಭವ ಹೊಂದಿರುವ ವಿಪಕ್ಷಗಳ ‘ಗ್ಯಾರಂಟಿ’ಗಳು ನಿಮಗೆ ಬೇಕಾ? ಅಥವಾ ಹಗರಣಕೋರರ ಮೇಲೆ ಕ್ರಮ ಕೈಗೊಳ್ಳುವ ‘ಗ್ಯಾರಂಟಿ’ ನೀಡುವ ಬಿಜೆಪಿ ಬೇಕಾ? ನೀವೇ ನಿರ್ಧರಿಸಿ’ ಎಂದು ಜನತೆಗೆ ಪ್ರಧಾನಿ ಕರೆ ನೀಡಿದ್ದಾರೆ.

ಕರ್ನಾಟಕ(Karnataka)ದಂತೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಹಲವು ‘ಗ್ಯಾರಂಟಿ’ ಭರವಸೆಗಳನ್ನು ಇತ್ತೀಚೆಗೆ ನೀಡಿತ್ತು. ಅವುಗಳಲ್ಲಿ ರೈತರ ಸಾಲ ಮನ್ನಾ, ಮಹಿಳೆಯರಿಗೆ ಮಾಸಿಕ 1500 ರೂ. ಹಣ – ಮೊದಲಾದವು ಸೇರಿವೆ.

ಅಲ್ಲದೆ, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಿದ ಮೋದಿ, ‘ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಕೋರ್ಟೇ ಒಲವು ತೋರಿದೆ. ಆದರೆ ಮತ ಬ್ಯಾಂಕ್‌ ರಾಜಕೀಯದ ಕಾರಣದಿಂದಾಗಿ ಮುಸ್ಲಿಮರ(Muslim) ದಾರಿ ತಪ್ಪಿಸಿ ಪ್ರಚೋದಿಸುತ್ತಿರುವುದು ವಿಪಕ್ಷಗಳು. ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಲಾಗಿದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು’ ಎಂದು ಹೇಳಿದರು.

“ವಿಪಕ್ಷಗಳು ಮುಸಲ್ಮಾನರ ಬಗ್ಗೆ ನಮ್ಮ ವಿರುದ್ಧ ಆರೋಪ ಹೊರೆಸುತ್ತಾರೆ. ಮುಸಲ್ಮಾನ, ಮುಸಲ್ಮಾನ ಎನ್ನುತ್ತಾರೆಯಾದರೂ, ಇವರು ಮುಸ್ಲಿಮರ ಹಿತಾಸಕ್ತಿಗೆ ಎಂದಾದರೂ ಕೆಲಸ ಮಾಡಿದ್ದರೆ, ಮುಸ್ಲಿಂ ಕುಟುಂಬಗಳು ಇಂದು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಅಲ್ಲದೇ, ಪಸ್ಮಾಂದಾ ಮುಸ್ಲಿಮರ (ಮುಸ್ಲಿಮರಲ್ಲೇ ಹಿಂದುಳಿದ ವರ್ಗ) ಬಗ್ಗೆ ವಿಪಕ್ಷಗಳು ನಿರ್ಲಕ್ಷ್ಯ ತಾಳಿದವು. ಏಕೆಂದರೆ ಅವರ ಸಂಖ್ಯೆ ಕಡಿಮೆ. ಇದರ ಹಿಂದೆ ಖಂಡಿತವಾಗಿಯೂ ಮತ ಬ್ಯಾಂಕ್‌ ರಾಜಕೀಯವಿದೆ(politics of vote bank) ” ಎಂದು ಆರೋಪಿಸಿದರು.

Leave A Reply

Your email address will not be published.