ಮೋದಿ ಪ್ರಧಾನಿ ಆಗಿರೋದಕ್ಕೆ ನನಗೆ ಪದ್ಮ ಪುರಸ್ಕಾರ ಬಂದಿದೆ, ಆದರೆ 2029ಕ್ಕೆ ಅವರು ರಾಜಕೀಯ ನಿವೃತ್ತಿ ಪಡೆಯಲಿ : ಎಸ್ ಎಲ್ ಭೈರಪ್ಪ!!
ತನ್ನ ಬರವಣಿಗೆಯ ಮೂಲಕ ಲಕ್ಷಾಂತರ ಓದುಗರನ್ನು ಹೊಂದಿರುವ ಕನ್ನಡ ಖ್ಯಾತ ಲೇಖಕ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ನಾಡಿನ ಹೆಮ್ಮೆಯ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಗೌರವ ಲಭಿಸಿದೆ. ಇದ ಸಾಹಿತ್ಯ ಪ್ರಿಯರಿಗೆ ಸಾಕಷ್ಟು ಸಂತೋಷ ಉಂಟು ಮಾಡಿದ್ದು , ಅನೇಕ ಗಣ್ಯರು ಭೈರಪ್ಪನವರಿಗೆ ಶುಭಾಶಯ ಕೋರಿದ್ದಾರೆ. ಸನ್ಮಾನ ಸ್ವೀಕರಿಸಿದ ಮಾಧ್ಯಮಗಳ ಜೊತೆ ಮಾತಾಡಿದ ಸಾಹಿತಿ ಎಸ್ ಎಲ್ ಭೈರಪ್ಪ ಪ್ರಶಸ್ತಿ ಸಿಕ್ಕಿರುವ ಕುರಿತು ಸಂತೋಷ ಹಂಚಿಕೊಂಡ್ರು. ಸಾಹಿತ್ಯ ಕೃಷಿ ಗೆ ಅತ್ಯುನ್ನತ ಗೌರವ ಸಿಕ್ಕಿರೋದು ಸಂತೋಷ ತಂದಿದೆ ಅಂತ ಹೇಳಿದರು.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾದ ಬಳಿಕ ಅನೇಕರು ಅವರ ನಿವಾಸಕ್ಕೆ ತೆರಳಿ ಶುಭ ಕೋರುತ್ತಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಅವರನ್ನು ಮಾತನಾಡಿಸಿದಾಗ, ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು. ಬೇರೆ ಯಾರೇ ಇದ್ದರೂ ನನಗೆ ಪ್ರಶಸ್ತಿ ಸಿಗುತ್ತಿರಲಿಲ್ಲ ಎಂದಿದ್ದಾರೆ. ನಂತರ ಮಾತನಾಡಿ ಮೋದಿಯಂತಹ ಪ್ರಧಾನಿಯನ್ನು ನಾವು ಹಿಂದೆಂದೂ ನೋಡಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ. ಯಾವುದೇ ಪಕ್ಷವನ್ನು ಓಲೈಸಲು ನಾನು ಈ ಮಾತು ಹೇಳುತ್ತಿಲ್ಲ. ದೇಶದ ಪ್ರಧಾನಿಯಾಗಿ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಸೇವೆ ಈ ದೇಶಕ್ಕೆ ಬೇಕಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಅವರು ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತವಾಗಿರತ್ತೆ. ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಸದಾ ಜೀವಂತವಾಗಿರುತ್ತಾನೆ .ನಾನು ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ ಎಂದ ಅವರು ನನ್ನ ಕಾದಂಬರಿಗಳ ಮೂಲವೇ ಭಾರತದ ಸಂಸ್ಕೃತಿ ಎಂದು ಹೇಳಿದ್ರು. ಗಣ ರಾಜ್ಯ ಮೊದಲಿಂದಲೂ ಇದೆ, ಈ ಸಂಸ್ಕೃತಿ ಏಕರೂಪದಲ್ಲಿ ಬೆಳೆದಿದೆ. ಎಷ್ಟೋ ದೇಶದಲ್ಲಿ ಸ್ವಾತಂತ್ರ್ಯ ಬಂದಿದೆ, ಆದ್ರೆ ಸ್ವಾತಂತ್ರ್ಯ ಉಳಿದುಕೊಂಡಿಲ್ಲ. ನಮ್ಮಲ್ಲಿ ಸಂವಿಧಾನ ಇದೆ, ಈ ದೇಶವನ್ನು ಸಂವಿಧಾನ ಕಾಪಾಡುತ್ತದೆ ಎಂದು ತಿಳಿಸಿದರು.
ನಂತರ ಮೈಸೂರು ಬಗ್ಗೆ ಮಾತನಾಡಿ, ಹೈ ಸ್ಕೂಲ್ ಓದೋಕೆ ಮೈಸೂರಿಗೆ ಬಂದೆ. ಮೈಸೂರು ಭಾವನಾತ್ಮಕವಾಗಿ ನಂಗೆ ಸಾಕಷ್ಟು ತೃಪ್ತಿ ಕೊಟ್ಟ ಊರು. ಎಷ್ಟೋ ಬರವಣಿಗೆಗಳಿಗೆ ಮೈಸೂರು ಸ್ಪೂರ್ತಿಯಾಗಿದೆ. ಮೈಸೂರು ಜನ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಸದಾ ಮೈಸೂರು ಜನರಿಗೆ ಋಣಿಯಾಗಿರುತ್ತೇನೆ. ನಂತರ 12 ವರ್ಷ ನಾನು ಉತ್ತರ ಭಾರತದಲ್ಲಿದ್ದು ಬಂದೆ. ನನ್ನ ಅನೇಕ ಕಾದಂಬರಿಗಳು ಹುಟ್ಟಿದ್ದು ಇಲ್ಲಿಯೇ ಎಂದು ಹೇಳಿದರು.
2019ರಲ್ಲೇ ನಾನು ಒಂದು ಲೇಖನ ಬರೆದಿದ್ದೆ. ಮೋದಿ ಮತ್ತೊಮ್ಮೆ ಬಹುಮತದೊಂದಿಗೆ ಪ್ರಧಾನಿ ಆಗಲಿ ಎಂದು ಬರೆದಿದ್ದೆ. 2024ರಿಂದ 2029ರವರೆಗೂ ಮೋದಿ ಅವರೇ ಪ್ರಧಾನಿಯಾಗಿರಲಿ. 2029ರ ನಂತರ ಪ್ರಧಾನಿ ಮೋದಿ ರಾಜಕೀಯ ನಿವೃತ್ತಿ ಪಡೆಯಲಿ. ನಂತರ ಸೇವಾ ಮನೋಭಾವವಿರುವ ಇನ್ನೊಬ್ಬ ವ್ಯಕ್ತಿಯನ್ನು ಸಿದ್ಧಪಡಿಸಲಿ. ಮುಂಬರುವ ಎಲ್ಲಾ ಪ್ರಧಾನಿಗಳು,ರಾಜಕೀಯ ನಾಯಕರು ಅವರಂತೆ ದೇಶ ನಡೆಸಲಿ ಎಂದು ಹೇಳಿದರು.