ಅಮೃತ ಜ್ಯೋತಿ ಯೋಜನೆ : SC-ST ಸಮುದಾಯದ ಗ್ರಾಹಕರಿಗೆ ಗುಡ್‌ನ್ಯೂಸ್‌

ಉಡುಪಿ: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭಾಗ್ಯಜ್ಯೋತಿ /ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಅಮೃತ ಜ್ಯೋತಿ’ ಯೋಜನೆಯನ್ನು ಸರ್ಕಾರವು ಜಾರಿಗೊಳಿಸಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಈ ಯೋಜನೆಯ ಅನುಷ್ಠಾನದ ಬಗ್ಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವ ಕಾರ್ಯ ಪ್ರಗತಿಯಲ್ಲಿದೆ. ಫಲಾನುಭವಿಗಳಿಗೆ ಮಾಸಿಕ 75 ಯೂನಿಟ್’ವರೆಗಿನ ಬಳಕೆಯ ವಿದ್ಯುತ್ ಶುಲ್ಕದ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುವುದು.

ಈ ವರ್ಗದ ವಿದ್ಯುತ್ ಸ್ಥಾವರಗಳಿಗೆ ಮಾಪಕವನ್ನು (ಮೀಟರ್) ಅಳವಡಿಸುವುದು ಹಾಗೂ ಮೀಟರ್ ರೀಡಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ. ಗ್ರಾಹಕರು ಈ ಸೌಲಭ್ಯವನ್ನು ಪಡೆಯಲು ಬಿಪಿಎಲ್ ಕಾರ್ಡ್, ಆಧಾರ್, ಜಾತಿ ಪ್ರಮಾಣಪತ್ರದ ಧೃಡೀಕರಣ ದಾಖಲೆಗಳನ್ನು ಒದಗಿಸುವುದು ಕಡ್ಡಾಯ. ಸೌಲಭ್ಯಕ್ಕೆ ಅರ್ಹರಾಗುವ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ನಿಗದಿತ ಅವಧಿಯೊಳಗೆ ಬಿಲ್‌ ಪಾವತಿಸಿದ ನಂತರ ಗ್ರಾಹಕರಿಗೆ ಸಹಾಯಧನ ಮರು ಪಾವತಿಸಲಾಗುವುದು.

ಗ್ರಾಹಕರು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಇತರೆ ಮಾಹಿತಿಗಳನ್ನು ಒದಗಿಸಬೇಕು. ಅದೇ ಬ್ಯಾಂಕ್ ಖಾತೆಗೆ ವಿದ್ಯುತ್ ಸರಬರಾಜು ಕಂಪೆನಿಗಳಿಂದ ಸರ್ಕಾರದ ಸಹಾಯಧನವನ್ನು ಜಮೆ ಮಾಡಲಾಗುತ್ತದೆ. ಈ ಪ್ರವರ್ಗದ ಗ್ರಾಹಕರು 2022ರ ಏಪ್ರಿಲ್ 30ಕ್ಕೆ ಅಂತ್ಯ ಆಗುವಂತೆ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ್ದಲ್ಲಿ ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಸಮೀಪದ ಮೆಸ್ಕಾಂ ಉಪವಿಭಾಗ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.