Good News : ಶಾಲಾ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ !

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ಇದೀಗ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ, 6ರಿಂದ 8ನೇ ತರಗತಿ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಶೇ.40 ಹುದ್ದೆಗಳಿಗೆ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಶಿಕ್ಷಣ ಇಲಾಖೆ ಪ್ರಸ್ತಾವನೆಗೆ ಅರ್ಥಿಕ ಇಲಾಖೆ ಸಮ್ಮತಿಸಿದೆ.

ಆರ್ಥಿಕ ಇಲಾಖೆಯು ಕರ್ನಾಟಕ ಶಿಕ್ಷಣ ಇಲಾಖೆಯ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ/ನೇಮಕಾತಿ) ನಿಯಮಗಳಲ್ಲಿ 6ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ವೃಂದದ ನೇಮಕಾತಿ ನಿಯಮದ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ. ಶೇ.60 ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಶೇ. 40 ಹುದ್ದೆಗಳನ್ನು ಸೇವಾನಿರತ ಪ್ರಾಥಮಿಕ ಶಿಕ್ಷಕರ ವೃಂದದಿಂದ ಮುಂಬಡ್ತಿ ಮೂಲಕ ಭರ್ತಿಗೆ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

ಇದೀಗ ರಾಜ್ಯದಲ್ಲಿ 1.53 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಸುಮಾರು 85 ಸಾವಿರ ಶಿಕ್ಷಕರು ಪದವೀಧರರಾಗಿದ್ದಾರೆ. ಮುಂದಿನ ಬಾರಿ 6ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಅದರಲ್ಲಿ ಶೇ.40 ಹುದ್ದೆಗಳಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ದೊರೆಯಲಿದೆ. ಆರ್ಥಿಕ ಇಲಾಖೆಯ ಅನುಮತಿಗೂ ಮುಂಚಿತವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹಾಗೂ ಕಾನೂನು ಇಲಾಖೆ ಸಮ್ಮತಿಸಿದೆ. ಇನ್ನೂ, ಶಿಕ್ಷಣ ಇಲಾಖೆ ನಿಯಮಗಳನ್ನು ರೂಪಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಬಹುದು.

ಶಿಕ್ಷಕರ ನೇಮಕಾತಿಯಲ್ಲಿ ಸಿ ಆಂಡ್ ಆರ್. ನಿಯಮ ತಿದ್ದುಪಡಿ ಮಾಡಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿತ್ತು. ಈ ಹಿಂದೆ 2017ರಲ್ಲಿ ಶೇ.25 ಶಿಕ್ಷಕರಿಗೆ ಪರೀಕ್ಷೆ ನಡೆಸಿ ಮುಂಬಡ್ತಿಯನ್ನು ನೀಡಲು ಸಮ್ಮತಿಸಿತ್ತು. ಬಿ.ಸಿ ನಾಗೇಶ್ ಅವರು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಸಚಿವರಾದ ನಂತರ ಇದನ್ನು ಶೇ.33ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇದೀಗ ಶೇ.40ಕ್ಕೆ ಹೆಚ್ಚಿಸಿದ್ದು ಜೊತೆಗೆ ಶಿಕ್ಷಕರನ್ನು ಪರೀಕ್ಷೆ ನಡೆಸದೆ ಮುಂಬಡ್ತಿ ನೀಡುವುದಕ್ಕೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದು ಬಹಳ ಸಂತೋಷವಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾವ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರು ಧನ್ಯವಾದಗಳನ್ನು ಹೇಳಿದ್ದಾರೆ.

ಇನ್ನೂ, ವೃಂದ ಮತ್ತು ನೇಮಕಾತಿಗೆ ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಹಾಗೂ ಕಾನೂನು ಇಲಾಖೆಯ ಒಪ್ಪಿಗೆಯ ಆಧಾರದ ಮೇಲೆ ಶಿಕ್ಷಣ ಇಲಾಖೆ ನಿಯಮಗಳನ್ನು ರೂಪಿಸಬೇಕಿದೆ. ಹಾಗೇ ಈ ನಿಯಮಗಳ ಕರಡು ತಯಾರಿಸಿ ವಿಧಾನಮಂಡಲ ಅಧಿವೇಶನದಲ್ಲಿ ಅದನ್ನು ಚರ್ಚಿಸಬೇಕು. ನಂತರ ಕಾಯ್ದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ, ಹೊಸ ನಿಯಮವನ್ನು ಅಳವಡಿಸಲಾಗುತ್ತದೆ.

ಮುಂದಿನ ನೇಮಕಕ್ಕೆ ಅನ್ವಯ ಪ್ರಾಥಮಿಕ ಶಾಲೆಯಲ್ಲಿ‌ ಕಾರ್ಯನಿರ್ವಹಿಸುತ್ತಿರುವ ಅರ್ಹ ಪದವೀಧರ ಶಿಕ್ಷಕರನ್ನು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಸೇವಾ ಜೇಷ್ಠತೆಯೊಂದಿಗೆ 6ರಿಂದ 8ನೇ ತರಗತಿಗೆ ನಿಯುಕ್ತಿಗೊಳಿಸಲು ಶಿಕ್ಷಕರ ಸಂಘ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಕಾನೂನು ಮತ್ತು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದರಿಂದ ಹೊಸ ನಿಯಮವನ್ನು ಮುಂದಿನ ನೇಮಕಾತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. 6ರಿಂದ 8ನೇ ತರಗತಿಗೆ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ, ಈ ಪ್ರಕ್ರಿಯೆ ಪೂರ್ಣವಾಗುವ ಮೊದಲೇ ಪರಿಶೀಲಿಸುವಂತೆ ಸೂಚನೆ ನೀಡಿದೆ. ಎಲ್ಲ ಪರಿಶೀಲನೆ ಆಗಿರುವುದರಿಂದ ಪದವೀಧರ ಶಿಕ್ಷಕರಿಗೆ ಅನುಕೂಲವಾಗಿದೆ ಎಂದು ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.

Leave A Reply

Your email address will not be published.