ಪಡಿತರ ಚೀಟಿದಾರರೇ ಗಮನಿಸಿ | ಇನ್ನು ಮುಂದೆ ಈ ಎಲ್ಲಾ ಸೌಲಭ್ಯ ಪಡಿತರ ಶಾಪ್ ನಲ್ಲೇ ಲಭ್ಯ !!!

ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ಪ್ರತಿ ತಿಂಗಳು ಪಡಿತರ ವಿತರಣೆಗೆ ಸೀಮಿತವಾಗಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ, ಬ್ಯಾಂಕ್ ಖಾತೆ ತೆರೆಯುವುದು, ಇಂಟರ್‌ನೆಟ್ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಯಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಆರಂಭಿಸಿರುವ ಇಲಾಖೆ, ಕೆಲ ಸಂಸ್ಥೆಗಳ ಜತೆ ಒಡಂಬಡಿಕೆಯನ್ನೂ ಮಾಡಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ 2 ತಿಂಗಳ ಒಳಗೆ ಯೋಜನೆ ಜಾರಿಗೆ ಬರಲಿದೆ.

ಗ್ಯಾಸ್ ಸಿಲಿಂಡರ್, ದಿನಬಳಕೆ ವಸ್ತುಗಳು, ಅಂಚೆ ಇಲಾಖೆಯ ಮೂಲಕ ಬ್ಯಾಂಕ್ ಖಾತೆ ಓಪನ್ ಹಾಗೂ ಎರಡು ರೂ.ಗೆ ಇಂಟರ್‌ನೆಟ್ ಸೌಲಭ್ಯ ಇನ್ನಿತರ ಸೇವೆಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಒದಗಿಸಲು ಆಹಾರ ಇಲಾಖೆ ಯೋಜನೆ ಹಾಕಿಕೊಂಡಿದೆ.
ಈ ಮೂಲಕ ಸಾರ್ವಜನಿಕರಿಗೆ ಸೌಲಭ್ಯ ನೀಡುವ ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಆರ್ಥಿಕ ವಹಿವಾಟು ಹೆಚ್ಚಿಸುವುದು ಯೋಜನೆಯ ಉದ್ದೇಶ.

ಅಲ್ಲದೆ, ಪಿಂಚಣಿ ಸೌಲಭ್ಯ ಸೇರಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನೂ ನ್ಯಾಯಬೆಲೆ ಅಂಗಡಿಗಳಲ್ಲೇ ದೊರಕಿಸುವ ಚಿಂತನೆ ಇದೆ. ನ್ಯಾಯಬೆಲೆ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳ ಮಾರಾಟ ಮಾಡುವ ಯೋಜನೆಯನ್ನು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ.

ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಜನರ ಅಲೆದಾಟ ತಪ್ಪಿಸಿ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲೇ ಅಗತ್ಯ ಸೇವೆಗಳನ್ನು ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಪಡಿತರ ವಿತರಣೆಗಾಗಿ ಮಾಲೀಕರಿಗೆ ಸರ್ಕಾರ ನೀಡುವ ಕಮಿಷನ್ ಹೊರತುಪಡಿಸಿ ಬೇರೆ ಆದಾಯ ಇಲ್ಲ. ಹಾಗಾಗಿ, ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ನೀಡುವ ಮೂಲಕ ಮಾಲೀಕರಿಗೂ ಆದಾಯ ಸಿಗುವಂತೆ ಮಾಡಲು ಇಲಾಖೆ ಮುಂದಾಗಿದೆ.

ಅತಿ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಆಹಾರ ಇಲಾಖೆ ಇಂಟರ್‌ನೆಟ್ ಸೇವೆ ಒದಗಿಸಲು ಯೋಜನೆ ಜಾರಿಗೆ ತರಲಿದೆ. ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕಾಯಿನ್ ಬೂತ್ ಸ್ಥಾಪಿಸಿ ಅದರಲ್ಲಿ ಸಾರ್ವಜನಿಕರು, 2 ರೂ.ಕಾಯಿನ್ ಹಾಕಿದರೆ 1 ಅಥವಾ 2 ಜಿಬಿವರೆಗೆ ಇಂಟರ್‌ನೆಟ್ ಬಳಸಬಹುದು. ಈ ಬಗ್ಗೆ ಇಲಾಖೆ ಈಗಾಗಲೇ ಕೆಲ ಕಂಪನಿಗಳ ಜೊತೆ ಮಾತುಕತೆ ಮಾಡಿದೆ. ಹಾಗೆನೇ ಕೆಲ ಕಂಪನಿಗಳು ಈ ಸೇವೆಯನ್ನು ನೀಡಲು ಮುಂದೆ ಬಂದಿದೆ. ಈ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಇಡಲು ಕೂಡಾ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಅನುಕೂಲ ಖಂಡಿತವಾಗಲಿದೆ.

ಇದರಿಂದ ಆಗುವ ಉಪಯೋಗವೇನು? ತಿಳಿದುಕೊಳ್ಳೋಣ ಬನ್ನಿ!!!
• ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಖರೀದಿಸಲು ದೂರದ ಹೋಬಳಿಗೆ ಹೋಗುವ ಅಗತ್ಯ ಇರಲ್ಲ
• ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲೇ ಎಲ್ಲ ಸೌಲಭ್ಯ ಸಿಕ್ಕರೆ ಜನರಿಗೆ ಸಮಯದ ಉಳಿತಾಯ ತುಂಬಾ ಆಗುತ್ತದೆ.
• ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯಗಳಿಗಾಗಿ ಜಿಲ್ಲೆ/ತಾಲೂಕು ಕೇಂದ್ರಗಳಿಗೆ ಅಲೆಯಬೇಕಿಲ್ಲ
• ದಿನಬಳಕೆ ಸೇರಿ ಇತರ ವಸ್ತುಗಳ ಮಾರಾಟಕ್ಕೆ ಅವಕಾಶ ಕೊಟ್ಟರೆ ಅಂಗಡಿ ಮಾಲೀಕರಿಗೂ ಆದಾಯ ಸಿಗುತ್ತದೆ.

ದಿನಬಳಕೆ ವಸ್ತು ಮಾರಾಟ: ನ್ಯಾಯಬೆಲೆ ಅಂಗಡಿಗಳಲ್ಲಿ ಅಡುಗೆ ಎಣ್ಣೆ, ಸೋಪು, ಉಪ್ಪು ಇತರ ದಿನಬಳಕೆ ವಸ್ತುಗಳನ್ನು ಕಾರ್ಡ್‌ದಾರರು ರೇಷನ್ ಪಡೆಯುವ ಸಂದರ್ಭದಲ್ಲಿ ಹಣ ಕೊಟ್ಟು ಖರೀದಿಸಬಹುದು. ಆದರೆ, ಕಾರ್ಡ್‌ದಾರರಿಗೆ ಮಾಲೀಕರು ಇವುಗಳನ್ನು ಖರೀದಿಸುವಂತೆ ಒತ್ತಾಯ ಮಾಡುವಂತಿಲ್ಲ. ದಿನಬಳಕೆಯ ವಸ್ತುಗಳ ಮಾರಾಟದಿಂದ ಮಾಲೀಕರಿಗೂ ಆದಾಯ ಸಿಗಲಿದೆ. ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ದಿನಬಳಕೆ ವಸ್ತುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು.

ಬ್ಯಾಂಕಿಂಗ್ ಸೇವೆ: ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸದಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಅವಕಾಶ ಸಿಗಲಿದೆ. ಉಳಿತಾಯ ಖಾತೆ, ಚಾಲ್ತಿ ಖಾತೆ ಸೇರಿ ಇತರೆ ಖಾತೆಗಳನ್ನು ಓಪನ್ ಮಾಡಬಹುದು. ಸಣ್ಣ ಉದ್ದಿಮೆದಾರರಿಗೆ ಮತ್ತು ಸಾರ್ವಜನಿಕರಿಗೆ ಇದರಿಂದ ಅನುಕೂಲ ಆಗಲಿದೆ. ಈ ಸೌಲಭ್ಯವನ್ನು ಕಲ್ಪಿಸಲು ಆಹಾರ ಇಲಾಖೆ, ಅಂಚೆ ಇಲಾಖೆ ಜತೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.

ಸಿಲಿಂಡರ್ ಲಭ್ಯ: ನ್ಯಾಯಬೆಲೆ ಅಂಗಡಿಗಳಲ್ಲಿ ಮಾರುಕಟ್ಟೆಯ ದರದಲ್ಲಿ 5 ಕೆ.ಜಿ.ತೂಕದ ಎಲ್ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.

Leave A Reply

Your email address will not be published.