Bangalore : ಶಾಪಿಂಗ್‌ಗೆ ಕರೆದೊಯ್ಯಲಿಲ್ಲವೆಂದು ಬಾಲಕಿ ಆತ್ಮಹತ್ಯೆ

Bangalore: ಶಾಪಿಂಗ್‌ಗೆ ಕರೆದುಕೊಂಡು ಹೋಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ನಡುವೆ ಪೋಷಕರು ಆತ್ಮಹತ್ಯೆ ವಿಚಾರವನ್ನು ಪೊಲೀಸರಿಗೆ ತಿಳಿಸದೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ಘಟನೆಯಿಂದ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾಗಡಿ ತಾಲೂಕಿನ ಸೋಲೂರಿನ ಬಸವನಹಳ್ಳಿ ನಿವಾಸಿ ಧೃತಿ ಜಿ ಆತ್ಮಹತ್ಯೆಗೆ ಶರಣಾದ ಬಾಲಕಿ. ಶನಿವಾರ ಸಂಜೆ 4 ರಿಂದ 5 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪೋಷಕರು ಸಂಬಂಧಿಕರ ಮದುವೆಗೆಂದು ಶಾಪಿಂಗ್‌ಗೆ ಹೋಗಿದ್ದು, ಇವರಿಗೆ ದೃತಿ ಒಬ್ಬಳೇ ಮಗಳು. ಪಿಯುಸಿ ಓದುತ್ತಿದ್ದ ಈಕೆ, ಶಾಪಿಂಗ್‌ಗೆ ಕರೆದುಕೊಂಡು ಹೋಗದ್ದಕ್ಕೆ ಬೇಸರಗೊಂಡಿದ್ದಳು. ಕಾಲೇಜಿನಿಂದ ಶನಿವಾರ ಮಧ್ಯಾಹ್ನ 3.30 ಸುಮಾರಿಗೆ ಕಾಲೇಜಿನಿಂದ ಮನೆಗೆ ಬಂದಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಂಜೆ 5 ಗಂಟೆಗೆ ಮನೆಗೆ ಬಂದ ಪೋಷಕರು ಮನೆ ಬಾಗಿಲು ಬಡಿದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬರದೇ ಇರುವುದನ್ನು ನೋಡಿ ಬಾಗಿಲು ಒಡೆದು ಒಳ ಹೋದಾಗ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

ನಂತರ ಪೋಷಕರು ಯಾವುದೇ ಮರಣೋತ್ತರ ಪರೀಕ್ಷೆ ಮಾಡಿಸದೆ, ದೇಹವನ್ನು ತುಂಡು ಮಾಡುತ್ತಾರೆಂಬ ಭಯದಿಂದ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಎಂದು ಪೋಷಕರು ಹೇಳಿದ್ದಾರೆ. ಕುದೂರು ಠಾಣೆಯ ಹೆಡ್‌ಕಾನ್ಸ್‌ಟೇಬಲ್‌ಗೆ ಸಂಜೆ ಸಮಯದಲ್ಲಿ ಈ ವಿಷಯ ತಿಳಿದು ಬಂದಿದ್ದು, ಪೋಷಕರು ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಈ ಕುರಿತು ಬಿಎನ್‌ಎಸ್‌ನ ಸೆಕ್ಷನ್‌ 211 ರ ಅಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡದೇ ಇರುವ ಕಾರಣಕ್ಕಾಗಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.