Ivan Desoza: ರಾಜಭವನದ ಮೇಲೆ ಬಾಂಗ್ಲಾ ಮಾದರಿ ದಾಳಿ ಮಾಡ್ತೇವೆ: ನಾಲಿಗೆ ಹರಿಬಿಟ್ಟ ಐವನ್ ಡಿಸೋಜಾ

Ivan Desoza: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತಿದೆ. ಪ್ರತಿಭಟನೆ ವೇಳೆ ಅನೇಕ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಕ್ರಮ ಖಂಡಿಸಿ ಅನೇಕ ಅಸಂಬದ್ಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ (Ivan Desoza) ರಾಜ್ಯಪಾಲರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ರಾಜ್ಯದಾದ್ಯಂತ ಸ್ವ ಪಕ್ಷದಿಂದಲೇ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳದಿದ್ರೆ ಬಾಂಗ್ಲಾ ಮಾದರಿಯಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹಾಗೂ ಅಲ್ಲಿನ ಪ್ರಧಾನಿಗೆ ಬಂದ ಪರಿಸ್ಥಿತಿ ರಾಜ್ಯಪಾಲರಿಗೂ ಬರಬಹುದು ಎಂದು ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ.
ಕಾರವಾರದಲ್ಲಿ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ, ಈ ರೀತಿಯ ಹೇಳಿಎಕಗಳು ಬೇಸರ ತಂದಿದೆ. ಐವನ್ ಡಿಸೋಜಾ ಜವಾಬ್ದಾರಿಯುತ ಮನುಷ್ಯ. ಅವರು ಇಂತಹ ಹೇಳಿಕೆಗಳನ್ನು ನೀಡಿರುವುದು ಸರಿ ಅಲ್ಲ. ಬೇರೆ ದೇಶಗಳಿಗೆ ಹೋಲಿಕೆ ಮಾಡುವಂತ ಸ್ಥಿತಿ ನಮ್ಮ ದೇಶದಲ್ಲಿ ಬಂದಿಲ್ಲ. ರಾಜ್ಯಪಾಲರ ವಿರುದ್ಧ ಇರುವ ಸಿಟ್ಟಿಗೆ ರಾಜಭವನಕ್ಕೆ ಮುತ್ತಿಗೆ ಹಾಕ್ತೇವೆ ಎಂದಿದ್ದರೆ ಬೇಜಾರಿಲ್ಲ. ಆದರೆ ಬಾಂಗ್ಲಾ ಮಾದರಿಯಲ್ಲಿ ದಾಳಿ ಮಾಡಿ ರಾಜ್ಯಪಾಲರನ್ನ ಓಡಿಸುತ್ತೇವೆ ಅನ್ನೋ ಮಾತು ಸರಿಯಲ್ಲ. ಅವರು ತಮ್ಮ ಮಾತು ಆಡುವಾಗ ಸ್ವಲ್ಪ ಹಿಡಿತದಲ್ಲಿ ಇರಬೇಕು ಎಂದು ಬೇಸರ ವ್ಯಕ್ತ ಪಡಿಸಿದರು.