Government Employees : ಸರ್ಕಾರಿ ನೌಕರರಿನ್ನು ಹಳದಿ-ಕೆಂಪು ಬಣ್ಣದ ಟ್ಯಾಗ್ ಧರಿಸುವಂತೆ ಆದೇಶ, ಏನಿದರ ಉದ್ದೇಶ?

Government Employees : ಕರ್ನಾಟಕ ಸರ್ಕಾರ ಎಲ್ಲಾ ಸರ್ಕಾರಿ ನೌಕರರು ಗುರುತಿನ ಚೀಟಿಯನ್ನು ಕೊರಳಿಗೆ ಹಾಕಿಕೊಳ್ಳುವುದರ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ.
ಮೈಸೂರು(Mysore) ಸಂಸ್ಥಾನವು ಕರ್ನಾಟಕ(Karnataka) ರಾಜ್ಯ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಸರ್ಕಾರ ಈಗಾಗಲೇ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನವನ್ನು ರಾಜ್ಯಾದ್ಯಂತ ನಡೆಸುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ಈ ಅಭಿಯಾನದ ಭಾಗವಾಗಿ ಆಯೋಜಿಸಲಾಗುತ್ತಿದೆ. ಅಂತೆಯೇ ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ ಕೆಂಪು–ಹಳದಿ ಟ್ಯಾಗ್(Red-Yellow Tag) ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ರಾಜ್ಯ ಸರ್ಕಾರವು ತನ್ನ ನೌಕರರ ಗುರುತಿನ ಚೀಟಿಯ ಕೊರಳುದಾರದ (ಟ್ಯಾಗ್) ವಿನ್ಯಾಸವನ್ನು ಬದಲಿಸಿದ್ದು, ಕೆಂಪು–ಹಳದಿ ಬಣ್ಣಗಳನ್ನು ಒಳಗೊಂಡಿರುವ ನೂತನ ಕೊರಳುದಾರವನ್ನು ಧರಿಸಬೇಕು ಎಂದು ಸೂಚಿಸಿದೆ.
ಅಂತೆಯೇ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ನಿಗಮ ಮಂಡಳಿಗಳು, ನಿರ್ದೇಶನಾಲಯಗಳು, ಆಯುಕ್ತಾಲಯಗಳು ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ಟ್ಯಾಗ್ ಅನ್ನು ಧರಿಸಬೇಕು. ತಮ್ಮ ಸಿಬ್ಬಂದಿಗೆ ಈ ಟ್ಯಾಗ್ ಅನ್ನು ಒದಗಿಸಲು ಸಂಬಂಧಿತ ಇಲಾಖೆಗಳು ಕ್ರಮವಹಿಸಬೇಕು ಎಂದೂ ಹೇಳಿದೆ.
ಸಂದೀಪ್ ಬಿ. ಕೆ., ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ರಾಜಕೀಯ) ಈ ಕುರಿತು ಸರ್ಕಾರದ ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು, ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯ ಮೂಲಕ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.