Karnataka Congress: ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್’ನಲ್ಲೊಂದು ವಿಚಿತ್ರ ಬೆಳವಣಿಗೆ !!

Karnataka Congress: ಲೋಕಸಭಾ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚುನಾವಣಾ ಪ್ರಚಾರ ಕೂಡ ಆರಂಭಿಸಿದೆ. ಆದರೆ ಕಾಂಗ್ರೆಸ್(Karnataka Congress)ಮಾತ್ರ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಸುಮ್ಮನಾಗಿದೆ. ಕೈ ಪಾಳಯದಲ್ಲಿ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಸಿಗದಾಗಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ರಾಜ್ಯ ಮಂತ್ರಿಗಳು ಕೂಡ ಲೋಕ ಸಮರದಲ್ಲಿ ಸೆಣೆಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್’ಗೆ ಅಭ್ಯರ್ಥಿಗಳದ್ದೇ ಕಗ್ಗಂಟಾಗಿದೆ.

ಹೌದು, ರಾಜ್ಯದ ಬಹುಪಾಲು ಸ್ಥಾನಗಳಿಗೆ ಸ್ಪರ್ಧಿಗಳನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ. ಮುಂಬರುವ ಲೋಕಸಭಾ ಚುನಾವಣೆಯ(Lokasabha election)ಲ್ಲಿ ರಾಜ್ಯದ ಕೆಲವು ಮಂತ್ರಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮೊದಲೇ ಯೋಚಿಸಿತ್ತು. ಈ ಬಗ್ಗೆ ಸಾಕಷ್ಟು ಅಂತಿಮ ನಿರ್ಧಾರಗಳೂ ಆಗಿದ್ದವು. ಆದರೀಗ ಕೊನೇ ಕ್ಷಣಕ್ಕೆ ಕೆಲವು ಸಚಿವರು ಮತ್ತು ಶಾಸಕರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ‘ಗೆಲ್ಲುವ’ ಅಭ್ಯರ್ಥಿಗಳ ಹುಡುಕಾಟ ಮುಂದುವರಿದಿದೆ.

ಅಂದಹಾಗೆ ಏಳರಿಂದ ಎಂಟು ಸಚಿವರನ್ನು ಕಣಕ್ಕಿಳಿಸಲು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಗೃಹ ಸಚಿವ ಜಿ ಪರಮೇಶ್ವರ(Dr G parameshwar)ಇತ್ತೀಚೆಗೆ ಹೇಳಿದ್ದರು. ಆದರೀಗ ಸಚಿವರಾದಿಯಾಗಿ ಕೆಲವು ಶಾಸಕರೂ ಕೂಡ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, ರಾಜ್ಯದ ಹಲವು ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟವು ಕಷ್ಟವಾಗಿದ್ದು, ಕಾಂಗ್ರೆಸ್ ನಾಯಕತ್ವವು ಕೆಲವು ಸಚಿವರು ಮತ್ತು ಶಾಸಕರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮನವೊಲಿಸಲು ಪ್ರಯತ್ನಿಸುತ್ತಿದೆ.

ಇನ್ನು ಮೂಲಗಳ ಪ್ರಕಾರ, ಚಾಮರಾಜನಗರದಿಂದ ಎಚ್‌ಸಿ ಮಹದೇವಪ್ಪ, ಕೋಲಾರದಿಂದ ಕೆಎಚ್ ಮುನಿಯಪ್ಪ, ಬಳ್ಳಾರಿಯಿಂದ ಬಿ ನಾಗೇಂದ್ರ, ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ, ಬೀದರ್‌ನಿಂದ ಈಶ್ವರ್ ಖಂಡ್ರೆ, ಬೆಂಗಳೂರು ಉತ್ತರದಿಂದ ಕೃಷ್ಣ ಬೈರೇಗೌಡ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಉತ್ಸುಕವಾಗಿದೆ ಎನ್ನಲಾಗಿದೆ. ಆದರೆ ಕೆಲವು ನಾಯಕರು ತಮ್ಮ ಕುಟುಂಬದವರನ್ನು ಸ್ಪರ್ಧೆಗಿಳಿಸಲು ಉತ್ಸುಕತೆ ತೋರುತ್ತಿರುವುದು ಕಾಂಗ್ರೆಸ್ ಗೆ ದೊಡ್ಡ ತಲೆನೋವಾಗಿದೆಯಂತೆ.

ಇಷ್ಟೇ ಅಲ್ಲದೆ 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಸೋಲು ಕಂಡಿದ್ದರಿಂದ ಅನೇಕ ಹಿರಿಯ ನಾಯಕರು ಸ್ಪರ್ಧೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.