Murder Case: ಕಲ್ಲೇಗ ಟೈಗರ್ಸ್ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ; ಆರೋಪಿಗಳು ಪೊಲೀಸ್ ವಶಕ್ಕೆ

ಪುತ್ತೂರು : ಪುತ್ತೂರು ಪೇಟೆಯ ನೆಹರೂ ನಗರದಲ್ಲಿ ಸೋಮವಾರ ತಡರಾತ್ರಿ ಯುವಕನ ಬರ್ಬರ ಹತ್ಯೆ ನಡೆದಿದೆ. ಪ್ರಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್‌ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್‌ ಕಲ್ಲೇಗ ಹತ್ಯೆಯಾಗಿದ್ದಾರೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್​, ಚೇತನ್​ ಮತ್ತು ಮನೀಶ್ ಬಂಧಿತ ಆರೋಪಿಗಳು. ಸೋಮವಾರ ​ಸಂಜೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಅಪಘಾತ ನಷ್ಟದ ಬಾಬ್ತು ಮಾತನಾಡಲೆಂದು ಪುನ: ಆರೋಪಿಗಳು ಅಕ್ಷಯ್‌ನನ್ನು ರಾತ್ರಿ 11.30 ಗಂಟೆ ಸುಮಾರಿಗೆ ನೆಹರೂ ನಗರ ಬಳಿ ಕರೆದು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಚೇತನ್‌, ಮನೀಶ್‌, ಮಂಜ ಮತ್ತು ಕೇಶವ ಎಂಬುವವರು ಅಕ್ಷಯ್‌ ಕಲ್ಲೇಗ ಅವರೊಂದಿಗೆ ದೂರವಾಣಿ ಮೂಲಕ ಅವಾಚ್ಯವಾಗಿ ಬೈದು, ಕೊನೆಗೆ ತಾವು ತಂದಿದ್ದ 2 ತಲವಾರಿನಿಂದ ಹಲ್ಲೆ ನಡೆಸಿದ್ದು, ಅನಂತರ ಕಡಿದು ಕೊಲೆ ಮಾಡಿ ಹೋಗಿದ್ದಾರೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ; 106-2023 ರಂತೆ ಕಲಂ: 341,504,506,307, ಜೊತೆಗೆ 34 IPC ಯಂತೆ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ದಕ್ಷಿಣ ಕನ್ನಡ ಜಿಲ್ಲೆಯ, ಪುತ್ತೂರಿನ ಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್‌ ಕಲ್ಲೇಗ ತಂಡದ ಸಾರಥ್ಯ ವಹಿಸಿದ್ದ ಅಕ್ಷಯ್‌ ಕಲ್ಲೇಗ ಅವರು ಭೀಕರವಾಗಿ ಕೊಲೆಯಾಗಿದ್ದು, ಹತ್ಯೆಗೆ ಕೆಲವೇ ಕೆಲವು ಗಂಟೆಗಳ ಮೊದಲು ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್‌ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ವಾಗ್ಯುದ್ಧ ನಡೆದಿತ್ತು. ಅದಾದ ಸ್ವಲ್ಪ ಹೊತ್ತಿನ ನಂತರ ಅಕ್ಷಯ್‌ ರನ್ನು ನೆಹರೂ ನಗರಕ್ಕೆ ಬರಲು ಹೇಳಲಾಗಿತ್ತು. ಅಲ್ಲಿ ಪ್ಲಾನ್ ಮಾಡಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಕೃತ್ಯವು ಮಧ್ಯರಾತ್ರಿ ಸುಮಾರು 11.30 ಗಂಟೆ ಸುಮಾರಿಗೆ ಘಟಿಸಿದ ಮಾಹಿತಿಯಿದೆ.

ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್‌ ಮೇಲೆ ತಂಡ ದಾಳಿ ನಡೆಸಿದೆ. ನಂತರ ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರುನಿಂದ ದಾಳಿ ನಡೆಸಿದ್ದಾರೆ. ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಆಚೆ ಬದಿ ಗಿಡಗಂಟಿಗಳಿಂದ ಅವೃತ್ತವಾದ ಜಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ.

ಕೇವಲ 2000 ರೂಗೆ ನಡೆದಿತ್ತಾ ಕೊಲೆ ?
ಅಕ್ಷಯ್‌ ಮೃತದೇಹ ಕಾಲೇಜಿಗೆ ಹೋಗುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಪೊದೆ ಅವೃತ್ತವಾದ ಖಾಲಿ ಇರುವ ಬಿಸಾಡಿದ ಹಾಗಿತ್ತು. ಕೃತ್ಯ ನಡೆಸಿದ ತಂಡದಲ್ಲಿ ಒಟ್ಟು ಮೂವರು ಇದ್ದರು ಎಂದು ಶಂಕಿಸಲಾಗಿದೆ. ಈ ಪೈಕಿ ಇಬ್ಬರು ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಈಗಾಗಲೇ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನುವ ಮಾಹಿತಿಯಿದೆ.

ನಿನ್ನೆ ಸಂಜೆ ವೇಳೆ ನಡೆದ ವಾಹನವೊಂದರ ಅಪಘಾತದ ವಿಚಾರದಲ್ಲಿ ಅಕ್ಷಯ್‌ ಹಾಗೂ ಎದುರಾಳಿ ಯುವಕರ ಮಧ್ಯೆ ಸಣ್ಣ ಮನಸ್ತಾಪ ಉಂಟಾಗಿತ್ತು. ಅದರ ರಿಪೇರಿ ಬಗ್ಗೆ ಮಾತನಾಡಲೆಂದು ಅಕ್ಷಯ್ ನನ್ನು ಕರೆಸಿಕೊಂಡ ಅದೇ ತಂಡ ಮಧ್ಯರಾತ್ರಿ ವೇಳೆ ನೆಹರೂ ನಗರ ಬಳಿ ಕರೆದು ಕೃತ್ಯ ಎಸಗಿದೆ ಎನ್ನಲಾಗುತ್ತಿದೆ. ಇದೆಲ್ಲಾ ನಡೆದದ್ದು ಕೇವಲ 2,000 ರೂಪಾಯಿಯ ಸಣ್ಣ ವ್ಯಾಜ್ಯಕ್ಕೆ ಎನ್ನಲಾಗುತ್ತಿದ್ದು ಆಶ್ಚರ್ಯ ಮೂಡಿಸುತ್ತದೆ. ಇಷ್ಟು ಸಣ್ಣ ಮೊತ್ತಕ್ಕೆ ಕೊಲೆಯ ಎನ್ನುವ ಪ್ರಶ್ನೆ ಮೂಡಿದೆ.

ಕಾಂತಾರಾ ಚಿತ್ರದ ಖ್ಯಾತಿಯ ನಂತರ ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ವಿಜೃಂಭಿಸುತ್ತಿವೆ. ಅವುಗಳಲ್ಲಿ ಹುಲಿ ವೇಷ ಕೂಡ ಒಂದು. ದಸರಾ ಹಬ್ಬದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಹುಲಿ ವೇಷಗಳು ಇದೀಗ ತಮ್ಮ ಕಾಸ್ತ್ಯೂಮ್ ಅನ್ನು ಬದಲಿಸಿಕೊಂಡು, ಅದಕ್ಕೆ ಪ್ರೊಫೆಷನಲ್ ನೃತ್ಯವನ್ನು ಸೇರಿಸಿಕೊಂಡು ಸ್ಪರ್ಧಾತ್ಮಕವಾಗಿ ಹುಲಿವೇಷ ನಡೆಸುತ್ತಿವೆ. ಅಲ್ಲಲ್ಲಿ, ‘ಹುಲಿ ವೇಷದ ಸ್ಪರ್ಧೆ’, ‘ಹುಲಿ ಪಂಥ’ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಅಕ್ಷಯ್ ಕಲ್ಲೇಗ ಅಂತಹ ಸ್ಪರ್ಧಾತ್ಮಕ ಹುಲಿ ವೇಷಧಾರಿ. ತಮ್ಮದೇ ಊರಿನ ಹೆಸರನ್ನು ಇಟ್ಟುಕೊಂಡು ಪುತ್ತೂರಿನಲ್ಲಿ ‘ಕಲ್ಲೇಗ ಟೈಗರ್ಸ್’ ಎಂಬ ಹುಲಿ ವೇಷದ ತಂಡವನ್ನು ಆತ ನಿರ್ಮಿಸಿದ್ದ. ಹೋದಲ್ಲೆಲ್ಲ ತನ್ನ ವಿನೂತನ ಪ್ರದರ್ಶನ ಕಲೆಯ ಮೂಲಕ ಪ್ರಶಸ್ತಿ ಗೆದ್ದುಕೊಂಡು ಬರುತ್ತಿದ್ದರು. ಇದೀಗ ಹುಲಿ ಮರೆಯಾಗಿದೆ, ಸ್ಫುರದ್ರೂಪಿ ಯುವಕ ಇನ್ನಿಲ್ಲವಾಗಿದ್ದಾನೆ.

 

ಇದನ್ನು ಓದಿ: Daily Horoscope: ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಈ ರಾಶಿಯವರು ಇಂದು ಎತ್ತಿದ ಕೈ!!!

 

Leave A Reply

Your email address will not be published.