ABVP: ಸೌಜನ್ಯ ಹೋರಾಟಕ್ಕೆ ಧುಮುಕಿದ ABVP – ಹೋರಾಟ ಪರವೋ, ವಿರೋಧವೋ?

Dharmasthala Sowjanya murder and rape case ABVP seeks appeal to High Court

ABVP: ಧರ್ಮಸ್ಥಳ ಸೌಜನ್ಯಳ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಇದೀಗ ಮತ್ತೊಂದು ಮಗ್ಗುಲಿಗೆ ಹೊರಳಿದೆ. ಇಷ್ಟು ದಿನ ಸೌಜನ್ಯಳ ಪರ ನ್ಯಾಯಕ್ಕಾಗಿ ಹೋರಾಡುತ್ತಾ ಮರುತನಿಖೆ ಆಗಬೇಕೆಂದು ಹೇಳುತ್ತಿದ್ದವರೆಲ್ಲ ಇಂದು ಈ ಪ್ರಕರಣದ ತನಿಖೆಯ ಕುರಿತು ಮೇಲ್ಮನವಿ ಸಲ್ಲಿಸಿ ಎಂದು ಫರ್ಮಾನು ಹೊಡಿಸುತ್ತಿವೆ. ಇಷ್ಟು ದಿನ ನ್ಯಾಯ ನ್ಯಾಯ, ನಿರ್ದೋಷಿಗೆ ಅನ್ಯಾಯ ಎನ್ನುತ್ತಿದ್ದವರೆಲ್ಲ ಅದೇ ನಿರ್ದೋಷಿ ವಿರುದ್ಧ ಮೇಲ್ಮನವಿ ಸಲ್ಲಿಸಿ ಎಂದು ಆಗ್ರಹಿಸುತ್ತಿವೆ. ಈ ಬೆನ್ನಲ್ಲೇ ನಾಡಿನ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ ABVP ಕೂಡ ಇದೇ ಹಾದಿ ತುಳಿದಿರುವುದು ಅಚ್ಚರಿ ಮೂಡಿಸಿದೆ.

ಇತ್ತೀಚೆಗಷ್ಟೆ ಕೆಲವು ದೊಡ್ಡವರು ಸಿಬಿಐ ನ್ಯಾಯಾಲಯವು ಸಂತೋಷ್ ರಾವ್ ನಿರ್ದೋಷಿ ಎಂದು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್’ಗೆ PIL ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕಾನೂನಾತ್ಮಕವಾಗಿ ಸಂತ್ರಸ್ತೆಯ ಕುಟುಂಬದವರಿಗೆ ಮತ್ತು ಸರ್ಕಾರಕ್ಕೆ ಮಾತ್ರ ಈ ಅವಕಾಶ ಎಂದು ಮೇಲ್ಮನವಿಯ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಏನೆಲ್ಲಾ ನಾಟಕೀಯ ಬೆಳವಣಿಗೆಗಳು ಧರ್ಮಸ್ಥಳ ಬಳಿಯ ಸೌಜನ್ಯ ಮನೆಯಲ್ಲಿ ನಡೆಯಿತು ಎಂಬುದು ಹೆಚ್ಚಿನವರಿಗೆ ತಿಳಿದಿದೆ.

ನಾವು ಸೌಜನ್ಯ ಪರ ಎಂದು ಬಿಂಬಿಸಿಕೊಂಡು ಹೋರಾಡಲು ಹೊರಟ ಕೆಲವು ಪ್ರಬಲ ಸಂಘಟನೆಗಳ ಮುಖವಾಡ ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಬಳಿಕ ಕಳಚಿ ಬಿದ್ದುಬಿಟ್ಟಿತು. ಸಂತೋಷ್ ರಾವ್ ನಿರ್ದೋಷಿ ಎಂದು ತಿಳಿದರೂ ಮತ್ತೆ ಅವನನ್ನೇ ಸಿಕ್ಕಿಹಾಕಿಸುವ ಹುನ್ನಾರದಲ್ಲಿ ಸೌಜನ್ಯಳ ಮನೆಗೆ ಭೇಟಿ ನೀಡಿ, ಕುಟುಂಬದವರೆಲ್ಲರಿಗೂ ಮೇಲ್ಮನವಿ ಸಲ್ಲಿಸಿ ಎಂದು ದುಂಬಾಲು ಬಿದ್ದಿತು. ಆದರೆ ಸೌಜನ್ಯಳ ಮನೆಯವರಿಗೆ ಸಂತೋಷ ರಾವ್ ಈ ಕೃತ್ಯ ಎಸಗಿಲ್ಲ ಎಂಬುದು ಮೊದಲಿನಿಂದಲೂ ಗೊತ್ತಿದ್ದರಿಂದ ಈ ಕುರಿತು ಯಾವ ವಿಚಾರವಾಗಿಯೂ ಮುಂದುವರೆಯಲಿಲ್ಲ. ಕೆಲವು ಪತ್ರಿಕೆಗಳು ಈ ಕುರಿತು ವರದಿ ಮಾಡಿದ ಬಳಿಕ ಆ ಸಂಗಟನೆಗಳೆಲ್ಲಾ ಸುಮ್ಮನಾಗಿಬಿಟ್ಟವು. ಒಟ್ಟಿನಲ್ಲಿ ತಮ್ಮ ನಿಜಬಣ್ಣ ಬಯಲಾಯ್ತು ಎಂದು ತಣ್ಣಗಾದವು. ಇದು ಸೌಜನ್ಯ ಪರ ಧ್ವನಿ ಎತ್ತಿದ ಎಲ್ಲಾ ಸಂಘಟನೆಗಳಿಗೆ ಪಾಠವಾಗಬೇಕಿತ್ತು. ಅದರೆ ನಾಡಿನ ಮತ್ತೊಂದು ಸಂಘಟನೆಯಾದ ABVP ಕೂಡ ಈ ಹಾದಿಯಲ್ಲಿ ನಡೆಯುತ್ತಿರುವುದು ಭಾರೀ ವಿಪರ್ಯಾಸ ಮತ್ತು ವಿಷಾದನೀಯ.

ಹೌದು, ಇತ್ತೀಚೆಗಷ್ಟೆ ಉಡುಪಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿದ್ಯಾರ್ಥಿ ಸಭೆಯನ್ನು ಇಂದು ಆಯೋಜಿಸಲಾಗಿತ್ತು. ಈ ವೇಳೆ ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ, ಸೌಜನ್ಯ ಪ್ರಕರಣದ ಗಂಭೀರತೆಯನ್ನು ಅರಿತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಈ ರೀತಿ ದ್ವಂದ್ವ ದ್ವೇಷ ಆವೇಶದ ವಾತಾವರಣವು ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಆದರೆ ಮರುತನಿಖೆಗೆ ಆಗ್ರಹಿಸಿ ಈ ಸಂಘಟನೆ ಆ ವೇದಿಕೆಯಲ್ಲಿ ಯಾವ ಹೇಳಿಕೆ ನೀಡಲಿಲ್ಲ.

ಅಂದಹಾಗೆ ಮೇಲ್ಮನವಿ ಸಲ್ಲಿಸಿದರೆ ನ್ಯಾಯಾಲಯವು ನಿರ್ದೋಷಿ ಎಂದು ಬಿಡುಗಡೆಗೊಳಿಸಿರುವ ಹಾಗೂ ಸುಮಾರು 12 ವರುಷಗಳ ಜೀವನವನ್ನೇ ನಾಶ ಮಾಡಿದ ಅಮಾಯಕ ಸಂತೋಷ್ ರಾವ್ ವರು ಮತ್ತೆ ಜೈಲು ಸೇರುತ್ತಾರೆಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಇಲ್ಲಿ ಶಿಕ್ಷೆ ಆಗಬೇಕಾದದ್ದು ತಪ್ಪಿತಸ್ಥರಿಗೆ. ಹೀಗಾಗಿ ಪ್ರಕರಣವು ಮರು ತನಿಖೆಯಾಗಬೇಕೆಂದು ಎಲ್ಲರೂ ಹೋರಾಟ ನಡೆಸಬೇಕೆ ಹೊರತು ಮೇಲ್ಮನವಿ ಸಲ್ಲಿಸಿ ಎಂದಲ್ಲ.

ABVP ಸಂಘಟನೆಗೆ ಈ ಸೌಜನ್ಯ ಕೊಲೆ ಪ್ರಕರಣದ ಕುರಿತು ಹೇಳಿಕೆ ನೀಡಲು ಸಾಕಷ್ಟು ದಾರಿಗಳಿದ್ದವು. ಮರುತನಿಖೆ ಆಗಬೇಕು, ಇದನ್ನು ಸರ್ಕಾರ ಮುಂದಾಳತ್ವ ವಹಿಸಿ ನೆರವೇರಿಸಬೇಕು, ತಪ್ಪಿತಸ್ಥರು ಯಾರೇ ಆಗಲಿ ಶಿಕ್ಷೆ ಆಗಲಿ ಎಂದೆಲ್ಲಾ ಹೇಳಬಹುದಿತ್ತು. ಅದು ಬಿಟ್ಟು ಮೇಲ್ಮನವಿ ಸಲ್ಲಿಸಲಿ ಎಂಬುದು ಅಷ್ಟು ಸಮಂಜಸವಾದುದಲ್ಲ, ಜೊತೆಗೆ ಅದು ಇಂತಹ ಪ್ರಮುಖ ಸಂಘಟನೆಗೆ ಶೋಭೆಯನ್ನೂ ತರುವುದಿಲ್ಲ. ಹೀಗಾಗಿ ಈ ಸಂಘಟನೆ ಹೋರಾಟ ಸೌಜನ್ಯ ಪರವೋ ಇಲ್ಲ ವಿರುದ್ಧವೋ ಎಂಬ ಪ್ರಶ್ನೆ ಮೂಡುತ್ತದೆ

ಇದನ್ನೂ ಓದಿ: Chaitra kundapura: ನೊರೆ ಬಂದ ಬಾಯಲ್ಲೀಗ ನಗು- ಹಾಲಶ್ರಿ ಅರೆಸ್ಟ್ ಆಗುತ್ತಿದ್ದಂತೆ ಚೈತ್ರಾ ಕುಂದಾಪುರ ಮಾಡಿದ್ದೇನು?

Leave A Reply

Your email address will not be published.