ವಿಟ್ಲ: ಕಲ್ಲಡ್ಕ-ಕಾಂಞಗಾಡು ರಸ್ತೆಯ ವಿಟ್ಲ ಬಳಿಯ ಉಕ್ಕುಡ ಎಂಬಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ಸೊಂದು ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ರಸ್ತೆಗಿಳಿದ ಘಟನೆ ನಡೆದಿದೆ. ಬಸ್ಸಿನ ಚಾಲಕ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಕೆಲವರಿಗೆ ಗಾಯಗಳಾಗಿದೆ.


ಉಕ್ಕುಡ ಅಪ್ಪೆರಿಪಾದೆ ಎನ್ನುವಲ್ಲಿ ಬೆಳಗಿನ ಸಮಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರಿಂದ ಸಂಪೂರ್ಣವಾಗಿ ತುಂಬಿದ ಬಸ್ಸು ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತಗ್ಗಿಗೆ ಇಳಿದಿದೆ. ಬಸ್ಸಿನ ಮುಂಭಾಗದ ಚಕ್ರಗಳು ರಸ್ತೆಯಿಂದ ಸಂಪೂರ್ಣವಾಗಿ ಕೆಳಗಿಳಿದು ಮಣ್ಣಿನಲ್ಲಿ ಸಿಲುಕಿತ್ತು.
ಘಟನೆಯಿಂದ ಚಾಲಕ ಮತ್ತು ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಸ್ಥಳೀಯರು ಧಾವಿಸಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳನ್ನು ಮತ್ತು ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ತರಲು ನೆರವು ಮಾಡಿದ್ದಾರೆ.

