ಬಗರ್ ಹುಕಂ ಸಾಗುವಳಿ ಸಕ್ರಮ ಮತ್ತಷ್ಟು ವಿಳಂಬ!

Karnataka news bagarhukum cultivation is likely to be further delayed

Bagarhukum cultivation  : ಸುಮಾರು 30 ವರ್ಷದಿಂದ ಭೂ ಹಕ್ಕು ಪತ್ರಕ್ಕೆ ಸಾವಿರಾರು ರೈತರು ಕಾಯುತ್ತಿದ್ದು, ಕಾಂಗ್ರೆಸ್ ಪಕ್ಷ ನಮ್ಮೆಲ್ಲ ಬೇಡಿಕೆ ಈಡೇರಿಸುತ್ತದೆ ಎಂದು ನಂಬಿಕೊಂಡಿದ್ದ ರೈತರಿಗೆ(Farmers) ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಕ್ಕುಪತ್ರ ಕೊಡಬಹುದೆಂಬ ರೈತರ ಹಾಗೂ ಸಾಗುವಳಿದಾರರ ನಿರೀಕ್ಷೆ ಹುಸಿಯಾಗಿದೆ.

ಸರಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆಯ 194ರ ಕಲಂ 94-ಎ(4) ತಿದ್ದುಪಡಿಗೊಂಡಿದೆ. ಕರ್ನಾಟಕ ಭೂ ಕಂದಾಯ ನಿಯಮಗಳ 1966ಕ್ಕೆ 108ಸಿಸಿ ಸೇರ್ಪೆಡೆಗೊಳಿಸಿ ಫಾರಂ-57 ಅರ್ಜಿ ಸ್ವೀಕಾರಕ್ಕೆ ಮಾರ್ಗ ಸೂಚಿ ನಿಯಮ ತಯಾರಿಸಲಾಗಿದೆ.ಸಾಗುವಳಿ ಸಕ್ರಮದ ಅರ್ಹತೆ ಹೊಂದಿರುವ ಗ್ರಾಮಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗೆ ಬಿಡುಗಡೆ ಮಾಡಲಾಗಿದ್ದು, 2005 ಜನವರಿ 1ಕ್ಕಿಂತ ಮೊದಲಿನ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅನುವು ಮಾಡಿಕೊಟ್ಟು 2022 ಮಾರ್ಚ್ ಅಂತ್ಯದವರೆಗೂ ಅರ್ಜಿ ಪಡೆಯಲಾಗಿದೆ.

1991ರಲ್ಲಿ ಫಾರಂ- 50, 1993, 1998ರಲ್ಲಿ ಫಾರಂ-53ರಲ್ಲಿ ಬಗರ್‌ಹುಕುಂ ಭೂ ಸಾಗುವಳಿ(Bagarhukum cultivation) ಸಕ್ರಮ ಕೋರಿ ಸಾವಿರಾರು ರೈತರು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ. ಈ ನಿಯಮದ ಹೆಸರಲ್ಲಿ ಅನೇಕ ಅರ್ಜಿಗಳು ರದ್ದಾಗಿದ್ದು, ಕಾಂಗ್ರೆಸ್‌ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಕೆಯ ಭರವಸೆಯಲ್ಲಿ ಫಾರಂ-57 ಅರ್ಜಿಯಲ್ಲಿ ಭೂ ಮಂಜೂರಾತಿ ದೊರೆತು ಹಕ್ಕುಪತ್ರ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ದಿನದೂಡುತ್ತಿದ್ದಾರೆ.

ಶಾಸಕರ ಅಧ್ಯಕ್ಷತೆಯಲ್ಲಿನ ಭೂ ಮಂಜೂರಾತಿ ಸಮಿತಿ ತ್ವರಿತ ರಚನೆಗೆ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದ ಹಿನ್ನೆಲೆ ವರ್ಗೀಕೃತ ಸರಕಾರಿ ಕಂದಾಯ ಜಮೀನುಗಳಲ್ಲಿನ ಬಗರ್‌ಹುಕುಂ ಸಾಗುವಳಿ ಸಕ್ರಮ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ. ಸಮಿತಿ ರಚನೆ ಆಗದೆ ಭೂ ಮಂಜೂರಾತಿ ಪ್ರಕ್ರಿಯೆ ಆರಂಭವಾಗದು.ಮಲೆನಾಡು ಭಾಗದ ಬಗರ್‌ಹುಕುಂ ಸಾಗುವಳಿ, ಸರಕಾರಿ ಭೂ ಒತ್ತುವರಿ ಪ್ರಕರಣ ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಕಾನೂನು ರಚಿಸಿ ಅರ್ಹ ರೈತರು, ಕೂಲಿ ಕಾರ್ಮಿಕರ ರಕ್ಷಣೆಗೆ ಕ್ರಮ ಕೈಗೊಳ್ಳುವ ಭರವಸೆ ಕೇವಲ ಭರವಸೆ ಆಗಿಯೇ ಉಳಿದಿದ್ದು, ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ನೀಡಿದ್ದ ಭರವಸೆ ಈಡೇರಿಸಲು ಸರಕಾರ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಭೂ ಮಂಜೂರಾತಿಗೆ ಬಿಗಿ ನಿಯಮವಿರುವ ಹಿನ್ನೆಲೆ ಈ ಕುರಿತ ಪ್ರಕ್ರಿಯೆ ಮುಂದೂಡಿಕೆ ಆಗುತ್ತಲೇ ಬರುತ್ತಿದೆ. ಇನ್ನೊಂದೆಡೆ ಒತ್ತಡ, ಆಮಿಷಕ್ಕೆ ಮಣಿದು ಭೂ ಮಂಜೂರಾತಿ ದಾಖಲೆ ತಯಾರಿಸಿ ಭವಿಷ್ಯದಲ್ಲಿ ತೊಂದರೆಯ ಸುಳಿಗೆ ಸಿಲುಕುವ ಭಯದಲ್ಲಿ ಅಧಿಕಾರಿ, ಸಿಬ್ಬಂದಿ ಅರ್ಜಿ ಪರಿಶೀಲನೆ, ವಿಲೇವಾರಿ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಇದರ ಜೊತೆಗೆ,13 ವರ್ಷದ ಹಿಂದೆ ಸರಕಾರ ಹಿಂದೆ ವಿಧಿಸಿದ ನಿರ್ಬಂಧದ ಹಿನ್ನೆಲೆ ರೈತರ ವಿಶೇಷ ಹಕ್ಕುಳ್ಳ ವರ್ಗೀಕೃತ ಕಂದಾಯ ಜಮೀನುಗಳಾದ ಸೊಪ್ಪಿನಬೆಟ್ಟ, ಕಾನು, ಸರಕಾರಿ ಕಾನು, ಜುಮ್ಮಾಬಾನೆ, ಸರಕಾರಿ, ಸರಕಾರಿ ಖರಾಬು ಭೂ ಪ್ರದೇಶದಲ್ಲಿ ಮಂಜೂರಾತಿಗೆ ನಿರ್ಬಂಧ ತೆರವುಗೊಂಡಿಲ್ಲ. ಇದರ ಜೊತೆಗೆ ಇದಕ್ಕೆ ಸಂಬಂಧಿಸಿದ ಅರ್ಜಿ ವಿಲೇವಾರಿಗೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: Tomato Price Down: ಪಾತಾಳಕ್ಕೆ ಇಳಿಯುತ್ತಿರುವ ಟೊಮ್ಯಾಟೋ ಬೆಲೆ: ಕೆಜಿಗೆ 10 ಕನಿಷ್ಠಕ್ಕೆ ಇಳಿಯೋ ಹೊತ್ತು…

Comments are closed.