Puttur: ಹೆಲ್ಮೆಟ್ ಧರಿಸಿದ್ದರೆ ಗೆಳೆಯ ಬದುಕುಳಿಯುತ್ತಿದ್ದ!! ತಿಂಗಳ ಹಿಂದೆ ಖರೀದಿಸಿದ್ದ R15, ಯುವಕನ ಸಾವಿಗೆ ಗೆಳೆಯರ ಕಂಬನಿ

Latest news death news bike accident rider died in a bike accident in puttur

ಪುತ್ತೂರು: ಜುಲೈ 23 ರ ಸಂಜೆ ಸುಮಾರು 8:00 ರ ಹೊತ್ತಿಗೆ ‘ಚೈತ್ರೆ ಬೈಕ್ ಡ್ ಬೂರ್ಯೆ ಗೆ”ಎನ್ನುವ ಕರೆಯೊಂದು ಬಂದಿತ್ತು.’ಒಲ್ಪ, ದಾದ ಆಯಿನಿ ‘ಎಂದು ಪ್ರಶ್ನಿಸುವಾಗಲೇ ಕರೆ ಕಡಿತಗೊಂಡಿದ್ದು,ಅವಸರದಿಂದ ಧಾವಿಸುವ ವೇಳೆಗಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು ಎಂದು ಆತ ಹೇಳಿದಾಗ ಆತನ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಹೆಲ್ಮೆಟ್ ಧರಿಸಿರುತ್ತಿದ್ದರೆ ಗೆಳೆಯ ಬದುಕುಳಿಯುತ್ತಿದ್ದ ಎನ್ನುತ್ತಾ ಉಕ್ಕಿ ಬಂದ ಅಳು, ಆತನ ಮರು ಪ್ರಶ್ನೆ ಹಾಕದಂತೆ ತಡೆಯಿತು.

ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಮೀಪದ ಕೆಮ್ಮಾಯಿ ಬಳಿ ಜುಲೈ 23 ರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟ ಸೇಡಿಯಾಪು ನಿವಾಸಿ ಚೈತ್ರಶ್ (ಚರಣ್)(19) ಎಂಬ ಯುವಕನ ಗೆಳೆಯನ ಮಾತು. ಕಳೆದ ಒಂದು ತಿಂಗಳ ಹಿಂದಷ್ಟೇ ಚೈತ್ರೇಶ್ ಕನಸಿನ R15 ಖರೀದಿಸಿದ್ದ. ರೆಡ್ ಕಲರ್ ಬೈಕ್ ಕೊಂಡ ಖುಷಿಯಲ್ಲಿ ಗೆಳೆಯರಿಗೆ ಫುಲ್ ಪಾರ್ಟಿ ಕೂಡಾ ಕೊಡಿಸಿದ್ದನಂತೆ. ಆದರೆ ಆತನ ಅದೊಂದು ಸಣ್ಣ ತಪ್ಪು ಜೀವಕ್ಕೇ ಕುತ್ತು ತಂದಿರುವುದು ಆತನ ಗೆಳೆಯರಿಗೆ ನೋವು ತಂದಿದೆ.

ಚೈತ್ರೇಶ್ ಕೆಮ್ಮಾಯಿ ಬಳಿ ಬೈಕ್ ತಿರುಗಿಸುವ ವೇಳೆ ದುರ್ಘಟನೆ ಸಂಭವಿಸಿ ದುರಂತ ಅಂತ್ಯ ಕಂಡಿದ್ದಾನೆ. ಆತನ ದೇಹದ ಇತರ ಭಾಗಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ತಲೆಗೆ ತೀವ್ರ ತರದ ಗಾಯವಾಗಿದ್ದರಿಂದ ವಿಪರೀತ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾನೆ. ಒಂದು ವೇಳೆ ಆತ ಹೆಲ್ಮೆಟ್ ಧರಿಸಿರುತ್ತಿದ್ದರೆ ಅಪಾಯದಿಂದ ಪಾರಾಗಿಬಿಡುತ್ತಿದ್ದ ಎನ್ನುವುದು ಆತನ ಗೆಳೆಯರಲ್ಲಿರುವ ಸತ್ಯ. ಗೆಳೆಯನನ್ನು ಕಳೆದುಕೊಂಡ ನೋವು,ಆತನ ಅದೊಂದು ತಪ್ಪಿನಿಂದಾಗಿ ಕಾಡಿದ ಬೇಸರ ವಾಟ್ಸಪ್ ಸ್ಟೇಟಸ್ ಮೂಲಕ ವ್ಯಕ್ತವಾಗಿದೆ.

ರಸ್ತೆ ಸಂಚಾರ ನಿಯಮ ಪಾಲನೆ ಅಗತ್ಯ

ವಾಹನಗಳಲ್ಲಿ ಸಂಚರಿಸುವಾಗ ಚಾಲಕ ಸಹಿತ ಪ್ರಯಾಣಿಕರು ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದೆ. ಒಂದೆರಡು ದಿನಗಳ ಹಿಂದಷ್ಟೇ ಮಂಗಳೂರಿನ ಬಸ್ಸು ಚಾಲಕನೋರ್ವ ಮೊಬೈಲ್ ವೀಕ್ಷಿಸುತ್ತಾ ಬಸ್ಸು ಚಲಾಯಿಸಿದ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಇಲಾಖೆ ಆತನ ಮೇಲೆ ಕ್ರಮ ಕೈಗೊಂಡಿದೆ. ಇಂತಹ ಅಸಡ್ಡೆ, ನಿರ್ಲಕ್ಷ್ಯದ ಚಾಲನೆ ಅಪಾಯ ಎನ್ನುವುದನ್ನು ಅರಿತಿದ್ದರೂ ಸಂಚಾರ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ.

ದ್ವಿಚಕ್ರ ವಾಹನ ಸವಾರ, ಸಹ-ಸವಾರರಿಬ್ಬರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿದ್ದರೂ ಸವಾರರು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಂತೂ ಹೆಲ್ಮೆಟ್ ರಹಿತ ಪ್ರಯಾಣ ಹೆಚ್ಚಾಗಿ ಕಂಡು ಬರುತ್ತಿದ್ದು ತಿಂಗಳ ಅಂತ್ಯಕ್ಕೆ ಪೊಲೀಸ್ ಇಲಾಖೆ ಒಂದಿಷ್ಟು ಪ್ರಕರಣ ದಾಖಲಿಸುತ್ತಾರೆ ವಿನಃ ಕೆಲವೆಡೆಗಳಲ್ಲಿ ಇನ್ನೂ ನಿಯಮ ಉಲ್ಲಂಘನೆಯ ಕ್ರಮ ಅಪರೂಪವಾಗಿದೆ.

ಹೆಲ್ಮೆಟ್ ರಹಿತ ಚಾಲನೆ ಅಪಾಯಕ್ಕೆ ಕಾರಣ, ಜೀವಕ್ಕೇ ಕುತ್ತು ಎನ್ನುವ ಬಗ್ಗೆ ಪೊಲೀಸ್ ಇಲಾಖೆ ‘ಸಂಚಾರ ನಿಯಮ ಪಾಲನೆ’ಎನ್ನುವ ವಿಚಾರದಲ್ಲಿ ಈಗಾಗಲೇ ಶಾಲೆ, ಕಾಲೇಜುಗಳಿಗೆ ತೆರಳಿ ಉಪನ್ಯಾಸ ನೀಡುತ್ತಿದ್ದು, ಹೆಚ್ಚಿನ ಅಪಘಾತಗಳಲ್ಲಿ ತರುಣರೇ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹದೊಂದು ಕಾರ್ಯಕ್ರಮ ಶಾಲಾ ಪಠ್ಯದ ಜೊತೆ ಜೊತೆಗೆ ಬೆಳೆದು ಬರುತ್ತಿದೆ.

ದ್ವಿಚಕ್ರ ವಾಹನ ಸವಾರರಿಗೊಂದು ಕಿವಿಮಾತು:

‘ವಾಹನ ಚಲಾಯಿಸುವಾಗ ಸಂಚಾರ ನಿಯಮ ಪಾಲಿಸಿ, ಹೆಲ್ಮೆಟ್ ಧರಿಸಿ ಅಪಾಯದಿಂದ ಪಾರಾಗುವುದರೊಂದಿಗೆ ನಮಗಾಗಿ ಕಾಯುತ್ತಿರುವ ನಮ್ಮವರಿಗಾಗಿ ಸುರಕ್ಷತೆಯಿಂದ ವಾಪಸ್ಸಾಗಿ’.

 

ಇದನ್ನು ಓದಿ: Maruti Suzuki: 4 ಲಕ್ಷಕ್ಕೆ ಮೈಲೇಜ್ ಮಾರುತಿ ಕಾರು- ಈ ತಿಂಗಳಲ್ಲೇ ಖರೀದಿಸಿದ್ರೆ ಭರ್ಜರಿ ಡಿಸ್ಕೌಂಟ್- ಬುಕ್ ಮಾಡಲು ಮುಗಿಬಿದ್ದ ಜನ 

Leave A Reply

Your email address will not be published.