Sullia : ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ದುರಹಂಕಾರ, ಬ್ಲಾಕ್ ಅಧ್ಯಕ್ಷ ಮತ್ತಿತರರಿಗೆ ಫೋನ್ ನಲ್ಲಿ ಅವಾಜ್, ಹಿಂಗಾದ್ರೆ ಎಲೆಕ್ಷನ್ ನಲ್ಲಿ ‘ ಕ್ಲೀನ್ ಕೃಷ್ಣಪ್ಪ ‘ !

G.Krishnappa :ದಕ್ಷಿಣ ಕನ್ನಡ ಜಿಲ್ಲೆಯ ಕೆಲ ತಾಲೂಕಿನ ಅಭ್ಯರ್ಥಿಗಳನ್ನು ಒಂದೆರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಪ್ರಥಮ ಪಟ್ಟಿಯಲ್ಲಿ ಹೆಸರಿಸಿದ್ದು, ಅದರಂತೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಜಿ. ಕೃಷ್ಣಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಜಿ ಕೃಷ್ಣಪ್ಪನವರು (G.Krishnappa) ವಿವಾದ ಸೃಷ್ಟಿ ಮಾಡಿಕೊಂಡಿದ್ದಾರೆ. ತಮ್ಮದೇ ಪಕ್ಷದ ಪದಾಧಿಕಾರಿಗಳು ಮತ್ತು ಮತದಾರರ ಮೇಲೆ ಹರಿಹಾಯ್ದಿದ್ದಾರೆ.

ಮೊನ್ನೆ ಕಾಂಗ್ರೆಸ್ ಹೈಕಮಾಂಡ್ ಸುಳ್ಯದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ ಕ್ಷಣದಲ್ಲಿ ಕ್ಷೇತ್ರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಜತೆಗೆ ಆಕ್ರೋಶ ಹೊರಬಿದ್ದಿದೆ. ಬಹುನಿರೀಕ್ಷೆಯ ಟಿಕೆಟ್ ಆಕಾಂಕ್ಷಿ ನಂದಕುಮಾರ್ ಅವರನ್ನು ಪಕ್ಷ ಕಡೆಗಣಿಸಿದೆ ಎನ್ನುವ ಆರೋಪದಲ್ಲಿ ನಂದಕುಮಾರ್ ಅಭಿಮಾನಿ ಬಳಗವೊಂದು ಪತ್ರಿಕಾಗೋಷ್ಠಿ ಹಾಗೂ ಪ್ರತಿಭಟನೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಡುವೆ ಜಿ. ಕೃಷ್ಣಪ್ಪ ವಿರುದ್ಧ ಕ್ಷೇತ್ರದಲ್ಲಿ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ ಎನ್ನುವ ಗುಸುಗುಸು ಪಿಸುಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ.

ಇದಾಗಿ ಈಗ, ನಂದಕುಮಾರ್ ಪರ ಕೆಲಸ ಮಾಡುತ್ತಿದ್ದಾರೆ, ಅವರ ಧ್ವನಿ ಎತ್ತಿದ್ದಾರೆ ಎನ್ನುವ ಕಾರಣಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಹಿತ ಸುಳ್ಯದ ನಾಗರೀಕರೊಬ್ಬರಿಗೆ ಫೋನ್ ಹಾಯಿಸಿದ ಕೃಷ್ಣಪ್ಪ ದುರಹಂಕಾರ ಮೆರೆದಿದ್ದಾರೆ ಎನ್ನುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಈ ರೀತಿಯ ವರ್ತನೆ ತೋರಿದ ಕೃಷ್ಣಪ್ಪ ವಿರುದ್ಧ ಭಾರೀ ಆಕ್ರೋಶ ಹೊರಬಿದ್ದಿದೆ.

ಏನಿದು ಘಟನೆ:
ಕಳೆದ ಕೆಲ ವರ್ಷಗಳಿಂದ ಕಡಬ, ಸುಳ್ಯ ತಾಲೂಕಿನಲ್ಲಿ ನಂದಕುಮಾರ್ ಹೆಸರು ಕಾಂಗ್ರೆಸ್ ನ ಎಲ್ಲಾ ಕಾರ್ಯಚಟುವಟಿಕೆ, ಅಭಿವೃದ್ಧಿ ಕಾರ್ಯ, ಸಹಾಯಹಸ್ತ ಹೀಗೆ ಸಮಾಜಮುಖಿ ಕಾರ್ಯದ ವಿಚಾರಗಳಲ್ಲಿ ಮುಂಚೂಣಿಯಲ್ಲಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಗೆ ಸುಳ್ಯ ಕ್ಷೇತ್ರದಿಂದ ನಂದಕುಮಾರ್ ಅವರೇ ಅಭ್ಯರ್ಥಿ ಎಂದು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಜಿ. ಕೃಷ್ಣಪ್ಪ ಅವರ ಆಯ್ಕೆ ತೀರಾ ನಿರಾಸೆ ಮೂಡಿಸಿತ್ತು.

ಕಾರ್ಯಕರ್ತರು ಹಾಗೂ ಜನತೆಯ ಪ್ರೀತಿ ಸಂಪಾದಿಸಿದ್ದ ನಂದಕುಮಾರ್ ಅವರನ್ನು ಟಿಕೆಟ್ ನೀಡದೆ ಪಕ್ಷ ಕಡೆಗಣಿಸಿದೆ ಎಂದು ಆರೋಪಿಸಿದ ಕಾಂಗ್ರೆಸ್ ನ ಹಲವರು ಡಿಕೆಶಿ ನಡೆಗೆ ಬೇಸರ ವ್ಯಕ್ತಪಡಿಸಿದ್ದರು, ಸುಳ್ಯದಲ್ಲಿ ಒಳಜಗಳಗಳು ಆರಂಭಗೊಂಡಿತ್ತು. ಪತ್ರಿಕಾಗೋಷ್ಠಿ, ಪ್ರತಿಭಟನೆ ಮುಂತಾದ ವಿಚಾರಗಳ ಬಗ್ಗೆ ಒಳಗೊಳಗೇ ಮುನಿಸು ಕೇಳಿಬಂದಿತ್ತು. ಈ ನಡುವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಬ್ಬರಿಗೆ ಕರೆ ಮಾಡಿದ ಅಭ್ಯರ್ಥಿ ಜಿ. ಕೃಷ್ಣಪ್ಪ ಅವಾಜ್ ಹಾಕಿದ್ದಾರೆ, ದುರ್ವರ್ತನೆ ತೋರಿದ್ದಾರೆ ಎನ್ನುವ ಆಡಿಯೋವೊಂದು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಅಲ್ಲದೇ ಸುಳ್ಯದ ನಾಗರೀಕರೊಬ್ಬರು ಕರೆ ಮಾಡಿದ್ದ ವೇಳೆಯೂ ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದ್ದು, ಏನೇ ಕೆಲಸ ಆಗಬೇಕಿದ್ದರೂ ನಂದಕುಮಾರ್ ಗೆ ಹೇಳಿ, ನನ್ನ ಜೊತೆ ಹೇಳಬೇಡಿ, ನಿಮ್ಮ ಮತವೂ ಬೇಡ ಎಂದೆಲ್ಲಾ ದುರಂಕಾರ ತೋರಿದ್ದಾರೆ ಎನ್ನಲಾಗಿದೆ. ಸದ್ಯ ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷ ಎಡವಿದ್ದೇ ಈ ಪರಿಯ ಆಕ್ರೋಶ, ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಮುಂದುವರಿದಲ್ಲಿ, ಸದಾ ಸುಳ್ಯದಲ್ಲಿ ಗೆಲ್ಲುವ ಬಿಜೆಪಿಗೆ ಇದರಿಂದ ಇನ್ನಷ್ಟು ಲಾಭವಾಗಲಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಎಲೆಕ್ಷನ್ ಘೋಷಣೆ ಆದ ನಂತರವಾದರೂ, ನಾಯಕರ ಮತ್ತು ಕಾರ್ಯಕರ್ತರ ಗೆಳೆತನ ಸಾಧಿಸಿ ನಾಯಕತ್ವ ಮೆರೆಯುವ ಬದಲು ಅಭ್ಯರ್ಥಿಯ ಈ ನಡವಳಿಕೆ ಕಂಡವರ ಈಗಿನ ಉದ್ಗಾರ ಒಂದೇ : ಹಿಂಗೆ ಆದ್ರೆ ‘ ಕ್ಲೀನ್ ಕೃಷ್ಣಪ್ಪ ‘ !!!

ಇದನ್ನೂ ಓದಿ: ದ.ಕ. ವಿಧಾನಸಭಾ ಚುನಾವಣೆ : ಕಾಂಗ್ರೆಸ್‌ನಿಂದ ಫೈನಲ್ ಆಗದ 3 ಕ್ಷೇತ್ರದ ಅಭ್ಯರ್ಥಿಗಳ ಹೆಸರು ,ಇವರೇ ಪ್ರಬಲ ಆಕಾಂಕ್ಷಿಗಳು

Leave A Reply

Your email address will not be published.