C T Ravi: ‘ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ’ ಟಿಪ್ಪು ಖಡ್ಗದ ಮೇಲಿನ ಬರಹವನ್ನು ರಿವೀಲ್ ಮಾಡಿದ ಸಿಟಿ ರವಿ! ಯಾರು ಈ ಕಾಫಿಗರು?

C T Ravi :ರಾಜ್ಯದಲ್ಲಿ ಉರಿ ಗೌಡ(Uri Gowda) ಹಾಗೂ ನಂಜೇಗೌಡ(Nanje Gowda)ರೇ ಟಿಪ್ಪುವನ್ನು ಕೊಂದರು ಎಂಬ ವಿಚಾರ ಹಲವು ಗೊಂದಲಗಳನ್ನು ಸೃಷ್ಟಿ ಮಾಡಿದೆ. ಈ ಚರ್ಚೆ ತೀವ್ರ ಸ್ವರೂಪಗಳನ್ನೂ ಪಡೆದಿದೆ. ಆದರೆ ಈ ನಡುವೆ ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ(C T Ravi) ಅವರು ಟಿಪ್ಪು ಖಡ್ಗದ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.

ಟಿಪ್ಪುವನ್ನ ನೀವು ಹೇಗೆ ಮೈಸೂರಿನ ಹುಲಿ, ಧರ್ಮಸಹಿಷ್ಣು, ಕನ್ನಡ ಪ್ರೇಮಿ ಅಂತ ಕರೆಯುತ್ತೀರಾ? ಆತ ತನ್ನ ಖಡ್ಗದ ಮೇಲೆ ‘ಕಾಫಿಗರ ರಕ್ತಕ್ಕಾಗಿ ತನ್ನ ಖಡ್ಗ ತಹತಹಿಸುತ್ತಿದೆ’ ಎಂದು ಅರೆಬಿಕ್ ಭಾಷೆಯಲ್ಲಿ ಬರೆಸಿಕೊಂಡಿದ್ದ. ಇನ್ನು ಕಾಫಿಗರು ಅಂದರೆ ಯಾರು? ಯಾರ್ಯಾರು ಇಸ್ಲಾಂ ಧರ್ಮವನ್ನ ನಂಬುವುದಿಲ್ಲವೋ ಅವರೆಲ್ಲರೂ ಕಾಫಿಗರು. ಓಕ್ಕಲಿಗರು, ಲಿಂಗಾಯಿತರು, ಕುರುಬರು, ಬ್ರಾಹ್ಮಣರು, ಜೈನರು ಎಲ್ಲರೂ ಕೂಡ ಕಾಫಿಗರು. ಹೀಗೆ ರಕ್ತಕ್ಕಾಗಿ ಹಾತೊರೆಯುತ್ತಿದ್ದವನನ್ನ ಮತಾಂಧ ಅನ್ನದೆ ಇನ್ನೇನು ಹೇಳಬೇಕು ಎಂದು ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಹೌದು, ಚಿಕ್ಕಮಗಳೂರು(Chikkamagalure) ನಗರದಲ್ಲಿ ಮಾತನಾಡಿದ ಅವರು, ಬ್ರಿಟಿಷರಂತೆ ಹೈದರಾಲಿ(Hydarali) ಯೂ ಕೂಲಿಗೆ ಬಂದವನು. ನಂತರ ಅವರಂತೆ ಇವನೂ ಮೋಸದಿಂದಲೇ ಅಧಿಕಾರ ನಡೆಸಿದನು. ಸದ್ಯ ಟಿಪ್ಪು ಸುಲ್ತಾನ್‍ಗೆ ಸಂಬಂಧಪಟ್ಟಂತೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಟಿಪ್ಪು ಆಡಳಿತದಲ್ಲಿ ಮಾಡಿದ ದೌರ್ಜನ್ಯಗಳಿಗೂ ಸಾಕ್ಷಿ ಇದೆ. ಟಿಪ್ಪುವನ್ನ ಮೈಸೂರು ಹುಲಿ, ಕನ್ನಡಪ್ರೇಮಿ, ಧರ್ಮಸಹಿಷ್ಣು ಎಂದು ಓದಿದ್ದೇವೆ. ಆದರೆ, ನಾವು ಪುಸ್ತಕದಲ್ಲಿ ಓದಿದ್ದು ಬೇರೆ, ದಾಖಲೆಗಳ ಪ್ರಕಾರ ಸತ್ಯವೇ ಬೇರೆಯೇ ಇದೆ. ರಕ್ತಕ್ಕಾಗಿ ಹಾತೊತೆರೆಯುತ್ತಿದ್ದ ಅವನನ್ನ ಮತಾಂಧ ಎಂದು ಹೇಳಬೇಕಿತ್ತು. ಆದರೆ, ದುರ್ದೈವ ಸರ್ವಧರ್ಮ ಸಹಿಷ್ಣು ಅಂತ ಸುಳ್ಳು ಇತಿಹಾಸ ಬರೆದರು ಎಂದು ಜರಿದಿದ್ದಾರೆ.

ಇನ್ನು ಈ ಉರಿಗೌಡ-ನಂಜೇಗೌಡ ಬಗ್ಗೆ ಮಾತನಾಡಿದ ಅವರು, ಉರಿ ಹಾಗೂ ನಂಜೇಗೌಡರು ಐತಿಹಾಸಿಕ ವ್ಯಕ್ತಿಗಳು ಅನ್ನೋದಕ್ಕೂ ದಾಖಲೆಗಳಿವೆ. 30 ವರ್ಷಗಳ ಹಿಂದೆಯೇ ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಿಸಲಾಗಿದೆ. ಟಿಪ್ಪುವನ್ನ ಕೊಂದ್ರೋ ಇಲ್ವೋ ಅನ್ನುವುದು ಅಪರಿಚಿತ ವ್ಯಕ್ತಿಗಳು ಎಂದು ಇದೆ. ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ಸಂಗ್ರಹಿಸುತ್ತಾ ಇದ್ದೇವೆ. ಮಾಹಿತಿ ಸಿಕ್ಕ ಬಳಿಕ ನಿರ್ಮಲಾನಂದನಾಥ ಶ್ರೀಗಳ ಜೊತೆ ಚರ್ಚೆ ಮಾಡುತ್ತೇವೆ ಎಂದರು.

ಟಿಪ್ಪು ಕಾಲಮಾನದಲ್ಲಿ ನಾನು ಇದ್ದಿದ್ದರೆ ಆಂಜನೇಯ ಮಂದಿರ ಮಸೀದಿ ಆಗಲು ಬಿಡುತ್ತಿರಲಿಲ್ಲ. ನಾನೇ ಉರೀಗೌಡ, ನಾನೇ ದೊಡ್ಡ ನಂಜೇಗೌಡ ಎಂಬಂತೆ ಕತ್ತಿ ಹಿಡಿದು ಸಿಡಿದು ನಿಲ್ಲುತ್ತಿದ್ದೆ. ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದ ಅನ್ನಿಸಿಕೊಳ್ಳುತ್ತಿದೆ ಎಂದರು. ಸಿ.ಟಿ.ರವಿ ಉರೀಗೌಡ, ಅಶ್ಚಥ್ ನಾರಾಯಣ್ ನಂಜೇಗೌಡ ಎಂಬಂತೆ ಬಿಂಬಿಸಿ ಸೋಶಿಯಲ್ ಮೀಡಿಯಾದಲ್ಲಿ ಆಧಾರ್ ಕಾರ್ಡ್ ಹರಿಬಿಟ್ಟಿರುವುದನ್ನ ಸಮರ್ಥಿಸಿಕೊಂಡರು. ಹೌದು, ನಾವು ಅದೇ. ನಮಗೆ ಖುಷಿ-ಹೆಮ್ಮೆ ಇದೆ ಎಂದರು.

Leave A Reply

Your email address will not be published.