RSS ಅವರು ಅರ್ಧ ಪ್ಯಾಂಟ್ ಹಾಕುವ ಆಧುನಿಕ ಕೌರವರು- ಆದರೆ ಬಿಜೆಪಿಯವರು ಪಾಂಡವರಲ್ಲ ಎಂದ ರಾಹುಲ್ ಗಾಂಧಿ!

ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನ್ನೊಳಗಿನ ರಾಹುಲ್ ಗಾಂಧಿಯನ್ನು ನಾನು ಕೊಂದಿದ್ದೇನೆಂದು ಹೇಳಿಕೆ ನೀಡಿ ಗೊಂದಲ ಉಂಟುಮಾಡಿದ್ದರು. ಇದೀಗ ಹರಿಯಾಣದ ಯಾತ್ರೆಯ ವೇಳೆ ಅವರು ನೀಡಿರುವ ಮತ್ತೊಂದು ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಇದರಿಂದ ವ್ಯಾಪಕವಾದ ಟೀಕೆಗೂ ಅವರು ಗುರಿಯಾಗಿದ್ದಾರೆ.

ಬಿಜೆಪಿ ಸರ್ಕಾರವನ್ನು ಉದ್ದೇಶಿಸಿ ಪಾಂಡವರು ಜಿಎಸ್‌ಟಿ, ಅಪನಗದೀಕರಣದಂತಹ ಯೋಜನೆಗಳನ್ನು ಜಾರಿಗೆ ತಂದಿರಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಭಾರತ ಐಕ್ಯತಾ ಯಾತ್ರೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಮಹಾಭಾರತ ಯುದ್ಧ ನಡೆದ ನೆಲದಲ್ಲಿ ಪಾಂಡವರು ಹಾಗೂ ಕೌರವರನ್ನು ಆಧುನಿಕ ಕಾಲದ ಸನ್ನಿವೇಶಗಳಿಗೆ ಹೋಲಿಕೆ ಮಾಡಿದ್ದಾರೆ.

‘ಪಾಂಡವರು ಅಮಾನ್ಯೀಕರಣ ಜಾರಿಗೊಳಿಸಿದ್ದರೆ? ಅವರು ಲೋಪವುಳ್ಳ ಜಿಎಸ್‌ಟಿ ತಂದಿದ್ದರೇ? ಅವರು ಎಂದಾದರೂ ಹಾಗೆ ಮಾಡಿದ್ದಾರೆಯೇ? ಇಲ್ಲ, ಅವರು ಹಾಗೆ ಮಾಡಲಿಲ್ಲ. ಏಕೆಂದರೆ ಅವರು ತಪಸ್ವಿಗಳು. ಒಂದು ಕಡೆ ಈ ಐವರು ತಪಸ್ವಿಗಳಿದ್ದರು. ಮತ್ತೊಂದು ಕಡೆ ದೊಡ್ಡ ಜನರ ಗುಂಪು ಇತ್ತು. ಪಾಂಡವರಲ್ಲಿ ಎಲ್ಲ ಧರ್ಮಗಳ ಜನರಿದ್ದರು. ಈಗಿನಂತೆ ಯಾರು ಎಲ್ಲಿಂದ ಬಂದವರು ಎಂಬುದನ್ನು ಯಾರೂ ಕೇಳುತ್ತಿರಲಿಲ್ಲ. ಅದು ಪ್ರೀತಿಯ ಅಂಗಡಿಯಾಗಿತ್ತು. ಪಾಂಡವರು ಕೂಡ ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದರು. ಅವರು ಸಹ ದ್ವೇಷ ಮಾರುಕಟ್ಟೆಯಲ್ಲಿ ಅಂಗಡಿ ತೆರೆದಿದ್ದರು’ ಎಂದು ರಾಹುಲ್ ಹೇಳಿದ್ದಾರೆ.

‘ಅಪನಗದೀಕರಣ ಮತ್ತು ಜಿಎಸ್‌ಟಿಯನ್ನು ಜಾರಿಗೊಳಿಸಿದ್ದು ಏಕೆ? ಅದು ಯಾರ ಸಂಬಂಧಿ ಎಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಇದರ ಹಿಂದೆ ಕೋಟ್ಯಾದಿಪತಿಗಳ ಕೈವಾಡವಿದೆ, ಅವರಿಗೆ ಅನುಕೂಲ ಮಾಡಿಕೊಡಲು ಇವೆಲ್ಲವೂ ದೇಶದಲ್ಲಿ ಜಾರಿಯಾದವು’ ಎಂದು ಪರೋಕ್ಷವಾಗಿ ಅಂಬಾನಿ ಹಾಗೂ ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

ಬಳಿಕ RSS ವಿರುದ್ಧ ಮಾತನಾಡಿ ’21ನೇ ಶತಮಾನದ ಕೌರವರು ಅರ್ಧ ಪ್ಯಾಂಟ್‌ಗಳನ್ನು ಧರಿಸುತ್ತಾರೆ. ಅವರು ತಮ್ಮ ಕೈಗಳಲ್ಲಿ ಲಾಠಿಗಳನ್ನು ಹಿಡಿದುಕೊಳ್ಳುತ್ತಾರೆ ಹಾಗೂ ಶಾಖೆಗಳನ್ನು ನಡೆಸುತ್ತಾರೆ” ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ಅವರ ಈ ಹೇಳಿಕೆ ಎಲ್ಲೆಡೆ ತೀವ್ರ ಟೀಕೆಗೆ ಗುರಿಯಾಗಿದೆ. ಮಹಾಭಾರತದ ಕಾಲದಲ್ಲಿ ಬೇರೆ ಯಾವ ಧರ್ಮಗಳಿದ್ದವು? ಆಗ ಅಪನಗದೀಕರಣ ನಡೆಸಲು ಹಣ ಚಲಾವಣೆಯಲ್ಲಿ ಇತ್ತೇ? ಇದ್ದರೂ ನಾಣ್ಯಗಳು ಇದ್ದಿದ್ದಲ್ಲವೇ? ಜಿಎಸ್‌ಟಿ ಈಗಿನ ಪರಿಕಲ್ಪನೆಯಲ್ಲವೇ? ಆಗಿನ ಕಾಲದಲ್ಲಿ ಸುಂಕ ವ್ಯವಸ್ಥೆ ಇರಲಿಲ್ಲವೇ? ಭವಿಷ್ಯದ ಪ್ರಧಾನಿಯಾಗುವವರು ತಿಳಿದು ಮಾತನಾಡುತ್ತಾರೋ ತಿಳಿಯದೆ ಮಾತನಾಡುತ್ತಾರೋ ಎಂದು ಅನೇಕರು ವ್ಯಂಗ್ಯವಾಗಿ ಪ್ರಶ್ನೆಗಳನ್ನು ಹರಿಬಿಟ್ಟಿದ್ದಾರೆ.

Leave A Reply

Your email address will not be published.