ವರುಣನ ಆರ್ಭಟ ಕಡಿಮೆ ಆಗಿಬಿಟ್ಟಿದೆ ಎನ್ನುವ ನಿಟ್ಟುಸಿರು ಬಿಡುತ್ತಿದ್ದವರಿಗೆ ಕಳೆದ ಎರಡು ದಿನಗಳಲ್ಲಿ ಅಲ್ಲದೆ, ಬೆಳಂಬೆಳಿಗ್ಗೆ ಮಳೆರಾಯ ದರ್ಶನ ನೀಡಿ ಶಾಕ್ ನೀಡಿದ್ದಾನೆ. ಇನ್ನೂ ಮಳೆ ಕಡಿಮೆ ಆಗುವ ನಿರೀಕ್ಷೆ ಯಲ್ಲಿದ್ದವರಿಗೆ ಕಳೆದ ಎರಡು ದಿನಗಳಿಂದ ಮಳೆರಾಯ ದರ್ಶನ ನೀಡಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಮಳೆ ಆರಂಭವಾಗಿದೆ.
ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರಾಜಧಾನಿಯ ಬಹುತೇಕ ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬೆಳಗಿನ ವಾಕ್ಗೆ ತೆರಳುವ ಜನರನ್ನು ಮಳೆರಾಯ ಮನೆಯಲ್ಲಿಯೇ ಕೂರುವ ಸ್ಥಿತಿ ನಿರ್ಮಾಣ ವಾಗಿತ್ತು.
ಚಳಿಗಾಲದಲ್ಲಿ ದಿಡಿರನೆ ಮಳೆ ಕಾಣಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲು ಮೂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಿಂದ ಚೆನ್ನೈ, ಪುದುಚೇರಿ, ಆಂಧ್ರ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ ಎನ್ನಲಾಗಿದೆ.
ಇದರ ಪ್ರಭಾವ ಬೆಂಗಳೂರಿಗೂ ಕೂಡ ಬೀರಿದ್ದು, ಮೋಡ ಮುಸುಕಿದ ವಾತಾವರಣದ ಜೊತೆಯಲ್ಲಿ ನಿರಂತರವಾಗಿ ತುಂತುರು ಮಳೆಯಾಗುತ್ತಿದೆ. ಇನ್ನು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸಣ್ಣ ಮಳೆಯಾಗಿರುವ ವರದಿಗಳು ಕೂಡ ಇದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣದ ಜೊತೆಯಲ್ಲಿ ಶೀತಗಾಳಿ ಕೂಡ ಇರಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ,ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು , ತುಮಕೂರು, ವಿಜಯಪುರ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಮುಂಜಾಗೃತಾ ಕ್ರಮ ವಹಿಸಲಾಗುವುದು ಒಳ್ಳೆಯದು.
ಇಂದು ಮತ್ತು ನಾಳೆ ಕೂಡ ಇದೇ ರೀತಿಯ ಹವಾಮಾನ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಜನರು ಮನೆಯಿಂದ ಹೊರಡುವ ಮೊದಲು ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ರೇನ್ಕೋಟ್, ಛತ್ರಿಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.