ಪ್ರವೀಣ್ ನೆಟ್ಟಾರು ಸ್ಮರಣಾರ್ಥ 14 ಮನೆ ನಿರ್ಮಾಣ !

ಬಿಲ್ಲವ ಸಂಘದ ವತಿಯಿಂದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ರೂ.45 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಕಾರ್ಯಯೋಜನೆ ರೂಪಿಸಿರುವ ಹಿನ್ನಲೆಯಲ್ಲಿ ಆ ಹಣದಲ್ಲಿ ಅವಿಭಜಿತ ದ.ಕ. ಜಿಲ್ಲೆಯ 14 ಬಡ ಹಿಂದುಳಿದ ಕುಟುಂಬಗಳಿಗೆ ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಬಿಲ್ಲವ ಸಮುದಾಯದ ಮುಖಂಡ ಜಯಂತ ನಡುಬೈಲು ಮತ್ತು ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿಯ ಸ್ಥಾಪಕ ಅವಿನಾಶ್ ಸುವರ್ಣ ತಿಳಿಸಿದ್ದಾರೆ.

“ದ.ಕ. ಮತ್ತು ಉಡುಪಿ ಜಿಲ್ಲೆಯ ಬಿಲ್ಲದ ಸಮಾಜದ ಮುಖಂಡರು ಮೃತರ ಕುಟುಂಬಕ್ಕೆ ರು.45 ಲಕ್ಷ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವ ಜಬಾಬ್ದಾರಿ ವಹಿಸಿಕೊಂಡಿದ್ದರು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಸಂದರ್ಶನದಲ್ಲಿ ಮನೆ ನಿರ್ಮಾಣಕ್ಕೆ ಸಂಬಂಧಿಸಿ ರೂ.7 ಲಕ್ಷ ಮುಂಗಡ ಹಣವನ್ನು ಮತ್ತು ಮನೆ ನಿರ್ಮಾಣದ ವಿನ್ಯಾಸವನ್ನು ಮೃತ ಪ್ರವೀಣ್ ಪತ್ನಿ ನೂತನ ಅವರಿಗೆ ನೀಡಿ, ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗುತ್ತಿಗೆದಾರ ಮೋಹನ್ ದಾಸ್ ವಾಮಂಜೂರು ಅವರಿಗೆ ಹಸ್ತಾಂತರಿಸಿದ್ದರು. ಮೃತರ ಮರಣೋತ್ತರ ವಿಧಿವಿಧಾನಗಳ ನಂತರ ಅವರ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದು ಮನೆ ನಿರ್ಮಾಣ ಕಾರ್ಯ ಆರಂಭಿಸಲು ತೀರ್ಮಾನಿಸಲಾಗಿತ್ತು.

ಆದರೆ ಅನಂತರದ ಬಳಿಕದ ಬೆಳವಣಿಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಿದ್ದರು. ಹಾಗೂ ಅದಕ್ಕಾಗಿ ಭೂಮಿ ಪೂಜೆಯನ್ನು ಮಾಡಿದ್ದಾರೆ. ಇದರಿಂದಾಗಿ ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಲು ಸಂಗ್ರಹಿಸಲಾದ ನಿಧಿಯಲ್ಲಿ ಅವರ ಕುಟುಂಬದ ಒಪ್ಪಿಗೆ ಪಡೆದು ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅವಿಭಜಿತ ಜಿಲ್ಲೆಯ ಒಟ್ಟು 14 ಹಿಂದುಳಿದ ವರ್ಗಗಳ ಕುಟುಂಬಗಳಿಗೆ ತಲಾ ರು. 5 ಲಕ್ಷ ಅಂದಾಜು ವೆಚ್ಚದಲ್ಲಿ ಬಿಲ್ಲವ ಯುವ ಬ್ರಿಗೇಡ್ ನೇತೃತ್ವದಲ್ಲಿ ಮನೆ ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ ” ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಬಿಲ್ಲವ ಮುಖಂಡರಾದ ಉಲ್ಲಾಸ್ ಕೋಟ್ಯಾನ್, ಬಿಲ್ಲವ ಬ್ರಿಗೆಡ್ ಕೇಂದ್ರೀಯ ಮಂಡಳಿ ಕಾರ್ಯಾಧ್ಯಕ್ಷ ಕಿಶನ್ ಅಮೀನ್, ಗುತ್ತಿಗೆದಾರ ಮೋಹನದಾಸ್ ಬಂಗೇರ ವಾಮಂಜೂರು ಇದ್ದರು.

Leave A Reply

Your email address will not be published.