ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಮತ್ತೋರ್ವನ ಬಂಧಿಸಿದ ಎನ್‌ಐಎ ,ಬಂಧಿತರ ಸಂಖ್ಯೆ 14

ಪುತ್ತೂರು:ಬಿಜೆಪಿ ಯುವ ನಾಯಕರಾಗಿದ್ದ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ. ನ.12ರಂದು ಕಾರ್ಯಾಚರಣೆ ನಡೆಸಿದ ಎನ್‌ಐಎ ತಂಡ, ಪ್ರಕರಣಕ್ಕೆ ಸಂಬಧಿಸಿ ಈಗಾಗಲೇ ಬಂಧಿತನಾಗಿರುವ ಆರೋಪಿ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಅವರ ಬಾವ ಸಾಹಿದ್ ಬೆಳ್ಳಾರೆ(34ವ.)ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ.ಸಾಹಿದ್ ಬೆಳ್ಳಾರೆ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಮಂದಿ ಆರೋಪಿಗಳ ಬಂಧನವಾದಂತಾಗಿದೆ.

ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಪ್ರಕರಣದ ತನಿಖೆಯನ್ನು ಆರಂಭಿಸಿದ್ದ ಬೆಳ್ಳಾರೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದರು.ಪ್ರಕರಣದ ತನಿಖೆಯನ್ನು ಬಳಿಕ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು.

ನಂತರದ ಬೆಳವಣಿಗೆಗಳಲ್ಲಿ ಎನ್‌ಐಎ ಪ್ರತ್ಯೇಕ ದಿನಗಳಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮತ್ತೆ ಕೆಲವು ಆರೋಪಿಗಳನ್ನು ಬಂಧಿಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಸುಳ್ಯ ನಿವಾಸಿ ಶಿಹಾಬ್, ಪಾಲ್ತಾಡಿ ಅಂಕತ್ತಡ್ಕದ ರಿಯಾಝ್ ಹಾಗೂ ಸುಳ್ಯ ಎಲಿಮಲೆಯ ಬಶೀರ್ ಅಲ್ಲದೆ, ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಮಜಲು ನಿವಾಸಿ ಸದ್ದಾಂ, ಹ್ಯಾರಿಸ್, ಬೆಳ್ಳಾರೆ ಗೌರಿಹೊಳೆ ನೌಫಲ್,ನಾವೂರಿನ ಆಬಿದ್, ಜಟ್ಟಿಪಳ್ಳದ ಕಬೀರ್, ಬೆಳ್ಳಾರೆ ಕುನ್ನಾಗುಡ್ಡೆ ನಿವಾಸಿ ಬೆಳ್ಳಾರೆ ಗ್ರಾ.ಪಂ.ಸದಸ್ಯ ಕೆ.ಮಹಮ್ಮದ್ ಇಕ್ವಾಲ್, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಇಸ್ಮಾಯಿಲ್ ಶಾಫಿ ಬೆಳ್ಳಾರೆ ಮತ್ತು ನಾವೂರು ಗಾಂಧಿನಗರ ನಿವಾಸಿ ಇಬ್ರಾಹಿಂ ಶಾ ಎಂಬವರು ಈಗಾಗಲೇ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದೀಗ ಸಾಹಿದ್ ಬೆಳ್ಳಾರೆ ಬಂಧನವಾಗಿದೆ.

Leave A Reply

Your email address will not be published.