ಮದುಮಗಳ ಅದೃಷ್ಟ : ಇನ್ನೇನು ತಾಳಿಕಟ್ಟಬೇಕೆನ್ನುವಷ್ಟರಲ್ಲಿ ಮದುಮಗನ ಅಸಲಿ ಮುಖವಾಡ ಬಯಲು!!!

ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ.

ಆದರೆ ಇಲ್ಲೊಂದು ಕಡೆ ಒಬ್ಬ ಕಿಲಾಡಿ ಭೂಪ ಏನು ಮಾಡಿದ್ದಾನೆ ನೋಡಿ. ಹಾಸನದ ಎಂಜಿ ರಸ್ತೆ ಸಮೀಪ ಇರೋ ಮಧುವೆ ಮಂಟಪದಲ್ಲಿ ಅಕ್ಟೊಬರ್ 28ರಂದು ಮದುವೆ ಸಮಾರಂಭ ನಡೆಯುತ್ತಿತ್ತು. ಮದುವೆ ಸಡಗರದಲ್ಲಿ ಎಲ್ಲರೂ ಮುಳುಗಿದ್ದರು. ಮಂಗಳ ವಾದ್ಯ ಮೊಳಗುತ್ತಿತ್ತು. ಎಲ್ಲರ ಮುಖದಲ್ಲೂ ಮದ್ವೆ ಸಂಭ್ರಮ ಕಾಣ್ತಿತ್ತು. ಅಡುಗೆ ಮನೆಯಲ್ಲಿ ಭೂರಿ ಭೋಜನ ಸಿದ್ದವಾಗುತ್ತಿತ್ತು, ಇನ್ನೇನು ತಾಳಿಕಟ್ಟಲು ಮದುಮಗ ಕೂಡ ರೆಡಿಯಾಗಿ ನಿಂತಿದ್ದ.

ಮದುಮಗ ತಾಳಿಕಟ್ಟಿದ ಮರುದಿನವೇ ಅಂದ್ರೆ ಅಕ್ಟೊಬರ್ 29 ರಂದು ಬೆಳಿಗ್ಗೆಯೇ ಹನಿಮೂನ್​ಗೆ ಅಂತ ಮಾಲ್ಡೀವ್ಸ್​ಗೆ ಹೋಗಲು ಫ್ಲೈಟ್ ಟಿಕೆಟ್ ಸಹ ಬುಕ್ ಆಗಿತ್ತು. ಆದ್ರೆ ಇಲ್ಲಿದೆ ನೋಡಿ ಕೊನೆಯ ಟ್ವಿಸ್ಟ್. ಹೌದು ಆ ಮದುಮಗಳ ಅದೃಷ್ಟ ಚನ್ನಾಗಿತ್ತೋ ಅಥವಾ ಹುಡುಗಿ ಅಪ್ಪ-ಅಮ್ಮ ಮಾಡಿದ ಪುಣ್ಯವೋ, ಯಾವ ದೇವರ ಹರಕೆಯ ಫಲವೋ ಏನೋ, ಕೊನೇ ಕ್ಷಣದಲ್ಲಿ ಬಂದ ಅದೊಂದು ಫೋಟೋ ವರನ ಅಸಲಿ ಮುಖವಾಡ ಬಟಾಬಯಲು ಮಾಡಿದೆ.

ಕೊನೆ ಕ್ಷಣ ಮದುಮಗ ತಾಳಿಕಟ್ಟ ಬೇಕು ಎನ್ನೋ ವೇಳೆಗೆ ಬಂದಿದ್ದ ಅದೊಂದು ಫೋನ್ ಕರೆ ಇಡೀ ಮದುವೆ ಮಂಟಪದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಮಾಡಿತ್ತು. ಹುಡುಗಿ ಮನೆಯವರಿಗೆ ಸಿಕ್ಕ ಅದೊಂದು ಫೋಟೋ ಇಡೀ ಮದುವೆ ಸಂಭ್ರಮದಲ್ಲಿ ಗೊಂದಲದ ವಾತಾವರಣ ಮೂಡಿತು.

ಹೌದು…ನಾಲ್ಕು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಮದುವೆಯಾಗಿದ್ದ ಪಾಪಿ ಆಕೆಯಿಂದ ದೂರವಾಗಿ ಲಕ್ಷ ಲಕ್ಷ ವರದಕ್ಷಿಣೆ ಚಿನ್ನಾಭರಣ ಪಡೆದುಕೊಂಡು ಮತ್ತೊಂದು ಮದುವೆ ಆಗೋಕೆ ರೆಡಿಯಾಗಿ ನಿಂತಿದ್ದ.

ಮೊದಲ ಹೆಂಡತಿಯ ಪ್ರಯತ್ನ, ಮದುಮಗಳ ಅದೃಷ್ಟದಿಂದ ಕೊನೆಗೂ ವಂಚಕನ ಖತರ್ನಾಕ್ ಪ್ಲ್ಯಾನ್ ಬಯಲಾಗಿದೆ.

ವರನಿಗೆ ಈಗಾಗಲೇ ಮದ್ವೆಯಾಗಿದೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಹುಡುಗಿ ಕಡೆಯವರು ಆಕ್ರೋಶಗೊಂಡು ಸರಿಯಾಗಿ ಏಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವಂಚಕನ ಹೆಸರು ಮಧುಸೂದನ್ ಬೆಂಗಳೂರಿನ ಚಿಕ್ಕಸಂದ್ರದ ಕುವೆಂಪು ಬಡಾವಣೆಯ ನಿವಾಸಿ. ಈ ನೀಚ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಾನಂತೆ, ಕೈತುಂಬ ಸಂಬಳವು ಸಹ ಇದೆ ಅಂತೆ. ಇವನ ಅಂದ ನೋಡಿದ ಹಾಸನದ ಹುಡುಗಿ ಮನೆಯವರು ಮಗಳು ಚನ್ನಾಗಿ ಇರ್ತಾಳೆ ಎಂದು ನಂಬಿ ಮದುವೆ ನಿಶ್ಚಯ ಮಾಡಿದ್ದರು. ಇಂದು ಮದುವೆ ಮುಹೂರ್ತಕೂಡ ನಿಗದಿಯಾಗಿ ಇನ್ನೇನು ಮಾಂಗಲ್ಯಧಾರಣೆ ಆಗಬೇಕು ಎನ್ನುವಷ್ಟರಲ್ಲಿ ಈ ನೀಚನ ಮುಖವಾಡ ಕಳಚಿ ಬಿದ್ದಿದೆ.

ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆ ಆಗೋಕೆ ಯತ್ನಿಸಿದ್ದ. ಮೊದಲನೇ ಹೆಂಡತಿ ಕೊನೆ ಕ್ಷಣದಲ್ಲಿ ಕಳಿಸಿದ ಅದೊಂದು ಫೋಟೋದಿಂದ ಹುಡುಗಿಯ ಬಾಳು ಉಳಿದಿದೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧುಸೂದನ್ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ, ಆತ ಹೇಳೋ ಪ್ರಕಾರ ಇನ್ನೂ ಕಾನೂನುಬದ್ದವಾಗಿ ಮೊದಲ ಹೆಂಡ್ತಿಗೆ ವಿಚ್ಛೇದನ ಕೊಟ್ಟಿಲ್ಲ, ಕೋರ್ಟ್​ನಲ್ಲಿ ಕೇಸ್​ ನಡೆಯುತ್ತಿದೆ. ಇದರ ಮಧ್ಯೆಯೂ ಮೊದಲ ಮದ್ವೆ ವಿಚಾರ ಬಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲಾನ್ ಮಾಡಿದ್ದ. ದೂರದ ಹಾಸನದಲ್ಲಿ ಹುಡುಗಿ ಹುಡುಕಿದ್ದ, ಇಲ್ಲಿ ಹುಡುಗಿ ನೋಡಿದ್ರೆ ಹಳೆ ಮದುವೆ ವಿಚಾರ ಗೊತ್ತಾಗಲ್ಲ ಎಂದುಕೊಂಡಿದ್ದ.

ಆರೋಪಿ ಮಧುಸೂದನ್ ನನ್ನು ವಶಕ್ಕೆ ಪಡೆದುಕೊಂಡಿರೋ ಬಡಾವಣೆ ಠಾಣೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಮಗಳ ಬಾಳು ಉಳಿಯಿತು ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ ಇಂತಹ ಪಾಪಿಗಳಿಗೆ ಕಠಿಣ ಶೀಕ್ಷೆ ಆಗಲಿ ಎಂದು ಜನರು ಹಿಡಿ ಶಾಪ ಹಾಕುತ್ತಿದ್ದಾರೆ.

Leave A Reply

Your email address will not be published.