ಕಡಬ:ಕೊಂಬಾರಿನಲ್ಲಿ ದಲಿತ ವ್ಯಕ್ತಿಗೆ ಹಲ್ಲೆ-ದಲಿತ ಸಂಘಟನೆಗಳಿಗೆ ಹಲ್ಲೆಕೋರರಿಂದ ಸವಾಲು!!ಗಾಯಾಳು ಆಸ್ಪತ್ರೆಗೆ ದಾಖಲು-ದಲಿತ ಸಂಘಟನೆಗಳ ಭೇಟಿ!!

ಕಡಬ: ಕ್ಷುಲ್ಲಕ ಕಾರಣಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಪ್ರಕರಣವೊಂದು ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಕೊಂಬಾರು ಬೊಟ್ಟಡ್ಕ ನಿವಾಸಿ ಮಾಧವ ಎಂಬವರು ಕಡಬ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊಂಬಾರು ಬೋಳ್ನಡ್ಕ ಎಂಬಲ್ಲಿರುವ ಅಂಗಡಿಯೊಂದರ ಸಮೀಪವೇ ಅಂಗಡಿ ಮಾಲೀಕ ಹಾಗೂ ಇನ್ನೋರ್ವ ವ್ಯಕ್ತಿ ಸೇರಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಹಾಗೂ ದಲಿತ ಸಂಘಟನೆಗಳ ಬಗೆಗೂ ಕೀಳಾಗಿ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು,ಗಾಯಾಳು ಮಾಧವ ಅವರ ಸಂಬಂಧಿಯೊಬ್ಬರು ಕಡಬ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದಲಿತ ಸಂಘಟನೆಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ದಲಿತ ಸಂಘಟನೆಗಳ ಬಗೆಗೂ ಕೀಳಾಗಿ ಮಾತನಾಡಿದ್ದಲ್ಲದೆ, ದಲಿತ ಸಂಘಟನೆಗಳು ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುವ ಸವಾಲು ಕೂಡಾ ಹಲ್ಲೆಯ ವೇಳೆ ಹಾಕಿದ್ದಾರೆ ಎಂಬ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿದ್ದಲ್ಲದೇ, ದಲಿತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದೆ.

ಸದ್ಯ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.

Leave A Reply

Your email address will not be published.