ಕುಕ್ಕೆಹಳ್ಳಿ ಯುವಕ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ | ಸಾಲ ಪಡೆದ ಸಂಬಂಧಿಕನಿಂದಲೇ ಕೊಲೆ !

ಉಡುಪಿ: ಹೆಬ್ರಿ ತಾಲೂಕಿನ ಕುಕ್ಕೆಹಳ್ಳಿಯ ಯುವಕನೋರ್ವ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾದ ಶವ ಇದೀಗ ತನಿಖೆಯಿಂದ ಕೊಲೆ ಎಂದು ಸಾಬೀತಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಕುಕ್ಕೆ ಹಳ್ಳಿ ಪಂಡುಕಟ್ಟೆ ನಿವಾಸಿ ಕೃತಿಕ್‌ ಸಾಲ್ಯಾನ್‌ (22) ಎಂಬ ಯುವಕ ಸೆ.14ರಂದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಹಿರಿಯಡಕ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಕುರಿತು ಇದು ಆತ್ಮಹತ್ಯೆಯಲ್ಲ ಕೊಲೆ ಇದರ ತನಿಖೆಯಾಗಬೇಕು ಎಂದು ಮನೆಯವರು ಠಾಣೆಗೆ ದೂರು ನೀಡಿದ್ದರು.

ಇದೀಗ ಆತನ ದೂರದ ಸಂಬಂಧಿ ದಿನೇಶ್‌ ಸಫಲಿಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು ಆತನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿದಿದೆ.

ಕೃತಿಕ್‌ನಿಂದ ಲಕ್ಷಾಂತರ ಹಣವನ್ನು ದಿನೇಶ್‌ ಪಡೆದಿದ್ದು ಅದನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದ ಎನ್ನಲಾಗುತ್ತಿದ್ದು ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಆತನಲ್ಲಿ ಆತ್ಮಹತ್ಯೆಯ ವೀಡಿಯೋವನ್ನು ಚಿತ್ರೀಕರಿಸುವುದಾಗಿ ಹೇಳಿ ನಾಟಕವಾಡಿ ಆತನನ್ನು ಕೊಲೆಗೈದಿರುವುದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.