ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸಲ್ಲ ಆದರೆ ಅವರು ಶ್ರೀಮಂತರಲ್ಲವೇ? ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ‌ ಶಾಸಕ!!!

ಆಚಾರ ವಿಚಾರ ಪದ್ಧತಿಗಳು ಏನೇ ಇದ್ದರೂ ಅವರವರು ಮಾಡಿಕೊಂಡು ಬಂದ ಹಾಗೇ. ಆಚರಿಸಿದ ಹಾಗೇ. ಆದರೆ ಇಲ್ಲೊಬ್ಬ ಬಿಜೆಪಿ‌ ಶಾಸಕ ಹಿಂದೂಗಳ ಆಚರಣೆಯ ಮಹತ್ವತೆಯನ್ನು ಪ್ರಶ್ನೆ ಮಾಡಿದ್ದಾರೆ. ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ ಎಂದೇ ಹೇಳಬಹುದು.

ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಅವರು ಹಿಂದೂ ನಂಬಿಕೆಗಳ ಬಗ್ಗೆ ಪ್ರಶ್ನೆ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಪಾಸ್ವಾನ್ ವಿರುದ್ಧ ಭಾಗಲ್ಪುರದ ಶರ್ಮರಿ ಬಜಾರ್‌ನಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಕೃತಿಯನ್ನು ಸುಡಲಾಗಿದೆ.

“ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುತ್ತಿದ್ದರೆ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳು ಇರುತ್ತಿರಲಿಲ್ಲ, ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ ಅವರು ಶ್ರೀಮಂತರಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ, ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು IAS ಅಥವಾ IPS ಆಗುವುದಿಲ್ಲವೇ?’ ಎಂದು ಶಾಸಕರು ಪ್ರಶ್ನಿಸಿದ್ದು, ‘ಆತ್ಮ ಮತ್ತು ಪರಮಾತ್ಮ’ ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದು ಹೇಳಿದ್ದಾರೆ.

ಒಂದು ಕಲ್ಲನ್ನು ಜನ ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ. ಇವುಗಳನ್ನು ನಂಬಬೇಕೋ ಅಥವಾ ಬೇಡವೋ ಎಂಬುದು ನಮಗೆ ಬಿಟ್ಟದ್ದು, ನಾವು ಅದನ್ನು ತಲುಪಲು ವೈಜ್ಞಾನಿಕ ತಳಹದಿಯ ಮೇಲೆ ಯೋಚಿಸಬೇಕು ಎಂಬ ಮಾತನ್ನು ಹೇಳಿದ್ದಾರೆ. ನೀವು ನಂಬುವುದನ್ನು ನಿಲ್ಲಿಸಿದರೆ, ನಿಮ್ಮ ಬೌದ್ಧಿಕ ಸಾಮರ್ಥ್ಯವು ಹೆಚ್ಚಾಗುತ್ತದೆ ಎಂದಿದ್ದಾರೆ.

‘ಬಜರಂಗಬಲಿ ಶಕ್ತಿಯುಳ್ಳ ದೇವತೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಜರಂಗಬಲಿಯನ್ನು ಪೂಜಿಸುವುದಿಲ್ಲ. ಅವರು ಶಕ್ತಿಶಾಲಿಗಳಲ್ಲವೇ? ನೀವು ನಂಬುವುದನ್ನು ನಿಲ್ಲಿಸಿದ ದಿನ, ಈ ಎಲ್ಲಾ ವಿಷಯಗಳು ಕೊನೆಗೊಳ್ಳುತ್ತವೆ’ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

Leave A Reply

Your email address will not be published.