ಮರುಘಾ ಮಠ ಸ್ವಾಮೀಜಿ ಮೇಲೆ ಬಿತ್ತು ಮತ್ತೊಂದು ಕೇಸ್ | ಋತುಮತಿಯಾಗುವವರೆಗೆ ಮಕ್ಕಳ ಮೇಲೆ ಅತ್ಯಾಚಾರ- ತಾಯಿಯಿಂದ ದೂರು ದಾಖಲು

ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿಗಳ‌ ವಿರುದ್ಧ ಇನ್ನೊಂದು ಮಹತ್ತರ ಅಪವಾದವೊಂದನ್ನು ಸಂತ್ರಸ್ತ ತಾಯಿಯೊಬ್ಬರು ಮಾಡಿದ್ದಾರೆ. ಅವರು ಹೇಳಿರುವ ಪ್ರಕಾರ, ‘ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ ಮುರುಘಾ ಶರಣರು ಸತತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಸಂತ್ರಸ್ತ ಮಕ್ಕಳ ತಾಯಿ ಹೇಳಿದ್ದು ವರದಿಯಾಗಿದೆ. ಹಾಗೂ ಈ ಬಗ್ಗೆ ಇಲ್ಲಿನ ನಜರಾಬಾದ್‌ ಠಾಣೆಯಲ್ಲಿ ದೂರು ನೀಡಿದ್ದು, ಶರಣರು ಸೇರಿ ಏಳು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಸ್ವಾಮೀಜಿ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದರಿಂದ, ನನ್ನ ಮಕ್ಕಳು ಹದಿಯರೆಯದವರಾಗಿದ್ದು, ಮಠದಲ್ಲೇ ನಾನು ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ದುರ್ಬಲಳಾಗಿದ್ದುದರಿಂದ ಇದುವರೆಗೆ ದೂರು ನೀಡಿರಲಿಲ್ಲ. ಆದರೆ ಇಬ್ಬರು ಹೆಣ್ಣುಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ದೂರು ದಾಖಲಿಸಿದ್ದರಿಂದ ದೂರು ನೀಡಲು ಮುಂದಾದೆ’ ಎಂದೂ ಹೇಳಿದ್ದಾರೆ.

‘ತನ್ನ ಇಬ್ಬರು ಮಕ್ಕಳನ್ನಷ್ಟೇ ಅಲ್ಲದೆ, ಇನ್ನಿಬ್ಬರ ಮಕ್ಕಳ ಮೇಲೂ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಮಹಿಳೆಯು ದೂರಿದ್ದಾರೆ. ಹೀಗಾಗಿ 14 ವರ್ಷದ ಇಬ್ಬರು, 15 ವರ್ಷ ಹಾಗೂ 12 ವರ್ಷದ ಒಬ್ಬರು ಸೇರಿ ನಾಲ್ವರು ಬಾಲಕಿಯರನ್ನು ಸಂತ್ರಸ್ತರನ್ನಾಗಿ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ ಎಂದು ವರದಿಯಾಗಿದೆ.

ಶರಣರು ವಾರ್ಡನ್‌ ರಶ್ಮಿಯವರ ಮೂಲಕ ತಮ್ಮ ಖಾಸಗಿ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು ಎಂಬ ದೂರಿನ ಮೇರೆಗೆ ಶರಣರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ನಂತರದ ಆರೋಪಿಗಳನ್ನಾಗಿ ವಾರ್ಡನ್‌ ರಶ್ಮಿ, ಬಸವಾದಿತ್ಯ, ಮೈಸೂರಿನ ಭಕ್ತರಾದ ಪರಮಶಿವಯ್ಯ ಮತ್ತು ಗಂಗಾಧರಯ್ಯ, ಮುರುಘಾ ಮಠದ ಬಸವಲಿಂಗ ಮತ್ತು ಕರಿಬಸಪ್ಪ ಅವರನ್ನು ಹೆಸರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೂರು ನೀಡಿದ ಮಹಿಳೆಯು ಮಠದಲ್ಲೇ ಕೆಲಸ ಮಾಡುತ್ತಿದ್ದು, ಮಠದಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಡತನದ ಕಾರಣಕ್ಕೆ ತನ್ನ ಮಕ್ಕಳನ್ನೂ ಮಠದ ಶಾಲೆ ಹಾಗೂ ವಸತಿನಿಲಯಕ್ಕೆ ದಾಖಲು ಮಾಡಿದ್ದರು ಈ ಮಹಿಳೆ. ‘ಮಧ್ಯಾಹ್ನದ ಊಟದ ವೇಳೆಯಲ್ಲಿ ಹಾಗೂ ವಸತಿ ನಿಲಯದ ಕಡೆಗೆ ತೆರಳಿದಾಗಷ್ಟೇ ತನ್ನ ಮಕ್ಕಳನ್ನು ನೋಡಲು ಅವಕಾಶ ಸಿಗುತ್ತಿತ್ತು’ ಎಂದು ಮಹಿಳೆ ಹೇಳಿದ್ದಾರೆ.

ಆರು ವರ್ಷದ ಹಿಂದೆ ಮಹಿಳೆಯು ತನ್ನ ಇಬ್ಬರು ಮಕ್ಕಳನ್ನು 3ನೇ ಮತ್ತು 1ನೇ ತರಗತಿಗೆ ಸೇರಿಸಿದ್ದರು. ‘ಒಬ್ಬ ಮಗಳನ್ನು 2019ರಲ್ಲಿ ಮತ್ತು ಇನ್ನೊಬ್ಬ ಮಗಳನ್ನು 2020ರ ಕೋವಿಡ್‌ ಅವಧಿಯಲ್ಲಿ ಶರಣರು ಮೊದಲಿಗೆ ಲೈಂಗಿಕ ದೌರ್ಜನ್ಯಕ್ಕೆ ಬಳಸಿದ್ದರು. ನನ್ನ ಮಕ್ಕಳು ಋತುಮತಿಯರಾಗುವವರೆಗೂ ಶರಣರು ದೌರ್ಜನ್ಯ ಎಸಗಿದ್ದರು ಎಂದು ಮಕ್ಕಳು ತಿಳಿಸಿದ್ದಾರೆ’ ಎಂದು ಮಹಿಳೆಯು ಆರೋಪ ಮಾಡಿದ್ದಾರೆ.

ಅಷ್ಟು ಮಾತ್ರವಲ್ಲದೇ, ಮುರುಘಾ ಶರಣರ ಬಳಿಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಮಠದ ಸಾಧಕರಾದ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಇವರುಗಳು ಹೆದರಿಸುತ್ತಿದ್ದಾಗಿ ಕೂಡಾ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಯ ಸಹಾಯಕ ಮಹಾಲಿಂಗ ಮತ್ತು ಅಡುಗೆಭಟ್ಟ ಕರಿಬಸಪ್ಪ ಅವರು ಶರಣರ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿಬಿಡುವುದು, ಕೊಠಡಿಗೆ ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುತ್ತಿದ್ದುದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ’ ಎಂದು ಮಹಿಳೆಯು ಮಹತ್ತರ ಆರೋಪ ಮಾಡಿದ್ದಾರೆ‌

ಈಗ ಹೊಸದಾಗಿ ದಾಖಲಾದ ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ‌ನಜರಾಬಾದ್‌ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.